ದಾವಣಗೆರೆ, ಏ. 24- ವಿಶ್ವಕರ್ಮ ಸಮಾಜ ಸಂಘ ಹಾಗೂ ಜಿಲ್ಲೆಯ ವಿಶ್ವಕರ್ಮ ಸಮಾಜದ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ 41ನೇ ವರ್ಷದ ಸಾಮೂಹಿಕ ಉಪನಯನ ಹಾಗೂ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 26ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಂ. ಕೊಟ್ರೇಶಾಚಾರ್ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಾಳಿಕಾದೇವಿ ರಸ್ತೆಯ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಸಮಾರಂಭ ನಡೆಯಲಿದೆ. ನಾಳೆ ದಿನಾಂಕ 25ರ ಗುರುವಾರ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ದಿನಾಂಕ 26ರ ಶುಕ್ರವಾರ ಬೆಳಿಗ್ಗೆ 9.30 ರಿಂದ 10.30ರವರೆಗೆ ಯಜ್ಞೋಪವೀತ ಧಾರಣೆ ಹಾಗೂ ಬ್ರಹ್ಮೋಪದೇಶವಿದೆ. ಬೆಳಿಗ್ಗೆ 10.30ಕ್ಕೆ ಸಾಮೂಹಿಕ ವಿವಾಹಗಳು ಜರುಗಲಿವೆ.
11 ಗಂಟೆಗೆ ಏರ್ಪಾಡಾಗಿರುವ ಸಭಾ ಕಾರ್ಯಕ್ರಮವನ್ನು ಜವಳಿ ವರ್ತಕ ಬಿ.ಸಿ. ಉಮಾಪತಿ ಉದ್ಘಾಟಿಸಲಿದ್ದಾರೆ. ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಬಸಾಪುರದ ಬಿ.ನಾಗೇಂದ್ರಾಚಾರ್ ಅಧ್ಯಕ್ಷತೆ ವಹಿಸಲಿದ್ದು, ಬಿ.ಎಲ್. ಸೀತಾರಾಮಾಚಾರ್, ಎನ್. ಪೂರ್ವಾಚಾರ್, ಬಿ.ಪಿ. ಜಗನ್ನಾಥ್, ಎಸ್.ರುದ್ರಾಚಾರ್ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಸಾಪುರದ ಬಿ.ನಾಗೇಂದ್ರಚಾರ್, ನಿರ್ದೇಶಕರುಗಳಾದ ಮಂಜುನಾಥ ಬೇತೂರು, ಬಿ.ಸಿದ್ದಾಚಾರ್, ಜಿ.ಬಿ. ಬ್ರಹ್ಮಾಚಾರ್ ಉಪಸ್ಥಿತರಿದ್ದರು.