ಹೈಕೋರ್ಟ್ ಮಾದರಿಯಲ್ಲೇ ನಗರದಲ್ಲೂ ಕೋರ್ಟ್ ನಿರ್ಮಾಣದ ಕನಸು : ಎಸ್ಸೆಸ್ಸೆಂ

ಹೈಕೋರ್ಟ್ ಮಾದರಿಯಲ್ಲೇ ನಗರದಲ್ಲೂ ಕೋರ್ಟ್ ನಿರ್ಮಾಣದ ಕನಸು : ಎಸ್ಸೆಸ್ಸೆಂ

ದಾವಣಗೆರೆ, ಮೇ 3- ಬೆಂಗಳೂರಿನ ಹೈಕೋರ್ಟ್, ಹಾಸನ, ಬಳ್ಳಾರಿಯ ಜಿಲ್ಲಾ ಕೋರ್ಟ್‌ಗಳ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯೂ ಕೋರ್ಟ್ ನಿರ್ಮಿಸುವ ಕನಸು ಹೊತ್ತಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ತಿಳಿಸಿದರು.

ನಗರದ ಜಿಲ್ಲಾ ವಕೀಲರ ಸಂಘದ ಭವನದಲ್ಲಿ   ಇಂದು ಏರ್ಪಾಡಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಾನು ಈ ಹಿಂದೆ ಸಚಿವನಾಗಿದ್ದ ಸಂದ ರ್ಭದಲ್ಲೇ ಕಂಡಿದ್ದ ಈ ಕನಸನ್ನು ಮುಂದೆ ಬಂದ ಬಿಜೆಪಿಯವರು ಹಾಳು ಮಾಡಿದರು ಎಂದು ಹೇಳಿದ ಎಸ್ಸೆಸ್ಸೆಂ, ಬರುವ ದಿನಗಳಲ್ಲಿ ಕೆಹೆಚ್‍ಬಿ ಕಾಲೋನಿಯಲ್ಲಿನ ಕೋರ್ಟನ್ನು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗು ವುದು.  ವಕೀ ಲರ ಬೇಡಿಕೆಗಳನ್ನು ಹಂತ – ಹಂತವಾಗಿ ಈಡೇ ರಿಸಲಾಗುವುದು ಎಂದು ಭರವಸೆ ನೀಡಿದರು.

ವಕೀಲರನ್ನುದ್ದೇಶಿಸಿ ಮಾತನಾಡಿದ ಅವರು, ನಿಜವಾದ ರಾಜಕಾರಣಿ ಎಂದರೆ ಬುದ್ದಿವಂತರಾದ ವಕೀಲರು. ಸಿಎಂ ಸಿದ್ದರಾಮಯ್ಯ ಅವರೂ ಸಹ ವಕೀಲರಾಗಿ ಹೋರಾಟದ ಮೂಲಕ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿದರು.

ಜಿಂಕೆ ಸಾಕಿದ್ದಾರೆ, ಅದು ಮಾಡಿದ್ದಾರೆ, ಇದು ಮಾಡಿದ್ದಾರೆ ಎಂದು ನನ್ನ ಪ್ರತಿಷ್ಠೆ ಡ್ಯಾಮೇಜ್ ಮಾಡಲು ಬಿಜೆಪಿ ಅಪಪ್ರಚಾರ ಮಾಡಿತು ಎಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್‌ ದೂರಿದರು.

ಬಿಜೆಪಿಯವರು ನನ್ನನ್ನು ಟಾರ್ಗೆಟ್ ಮಾಡಿದರು. ಏನೂ ಮಾಡಲಿಕ್ಕಾಗದೇ ಜಿಂಕೆ ಸಾಕಿದ್ದಾರೆ, ಪ್ರಾಣಿ ಸಾಕಿದ್ದಾರೆ ಎಂದು ಸಣ್ಣತನ ತೋರಿದರು. ಅದಕ್ಕೆಲ್ಲ ಕೋರ್ಟ್ ಉತ್ತರ ಕೊಟ್ಟಿದೆ. ನಾವೇನು ಸಾಕಿದ್ದೇವೆ ಎಂಬುದಕ್ಕೆ ಎಲ್ಲಾ ದಾಖಲೆಗಳಿವೆ. ಸುಖಾಸುಮ್ಮನೆ ಬಿಜೆಪಿಯವರು ಆರೋಪ ಮಾಡುವುದು ಸರಿಯಲ್ಲ ಎಂದರು.

ಕೋವಿಡ್ ಲಸಿಕೆ ವಿತರಣೆಯಲ್ಲಿಯೂ ಭ್ರಷ್ಟಾಚಾರ ಮಾಡಿದರು. ಇದಕ್ಕೆ ಚಿಕ್ಕಬಳ್ಳಾಪುರದ ಮಾಜಿ ಸಚಿವ ಸುಧಾಕರ್ ಸುಳ್ಳು ಬಿಲ್ ಸಾಕ್ಷಿ. ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಲಸಿಕಾರಣದಲ್ಲಿಯೂ ಬಡ ರೋಗಿಗಳು, ಕಷ್ಟದಲ್ಲಿರುವವರನ್ನು ನೋಡದೇ ರಾಜಕೀಯ ಮಾಡಿದರು. ಇದೆಲ್ಲವನ್ನೂ ಬಿಟ್ಟು ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ಬಿಜೆಪಿಗರಿಗೆ ಕಿವಿಮಾತು ಹೇಳಿದರು.

ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಡವರಿಗೆ ಬದುಕಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಮಿತಿ ಮೀರುತ್ತಿದೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳಿಂದ ಬಡವರಿಗೆ ಮಧ್ಯಮ ವರ್ಗ ದವರಿಗೆ ಸಹಕಾರಿಯಾಗಿದೆ. ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಸಹಕಾರದಂತೆ ಈ ಬಾರಿಯೂ ವಕೀಲರ ಸಹಕಾರ ಅಗತ್ಯ ಎಂದರು. 

ಆರೋಗ್ಯ ಪರ ಕಾಳಜಿಯುಳ್ಳ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರು ಈ ಬಾರಿ ಕಣದಲ್ಲಿದ್ದು ಅವರಿಗೆ ಮತವನ್ನು ನೀಡಿ ಅವರನ್ನು ಲೋಕಸಭೆಗೆ ಕಳುಹಿಸಿಕೊಡಬೇಕು ಎಂದು ಸಚಿವರು ಕೇಳಿಕೊಂಡರು.

ಈ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್, ಅನೀಸ್ ಪಾಷಾ, ಆವರಗೆರೆ ಎಸ್. ಪರಮೇಶ್, ರಾಮಚಂದ್ರ ಕಲಾಲ್, ಬಿ.ಎಂ.ಹನುಮಂತಪ್ಪ, ಲೋಕಿಕೆರೆ ಪ್ರದೀಪ್, ರಂಗಸ್ವಾಮಿ, ಭಾಗ್ಯಲಕ್ಷ್ಮಿ, ಲಕ್ಕಪ್ಪ, ರಜ್ವಿಖಾನ್, ಜಗದೀಶ್, ಶಿವಾನಂದಪ್ಪ, ಬಸವರಾಜ್, ವಿ.ಗೋಪಾಲ್, ನಜೀರ್, ಶಾಮ್, ಅಬ್ದುಲ್ ಖಾದರ್, ಎ.ಎಂ.ಹೆಗಡೆ, ಗುರು ಬಸವರಾಜ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!