ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸ : ಯದುವೀರ್ ಒಡೆಯರ್
ಮೈಸೂರು ಅರಸರ ಪ್ರತಿಧ್ವನಿಯಂತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಮೈಸೂರು ಅರಸರ ಕಾಲದಲ್ಲಿ ಕನ್ನಡದ ಪರಂಪರೆ ಉಳಿಸುವ ಜೊತೆ ಆಧುನಿಕ ಅಭಿವೃದ್ಧಿ ಕೈಗೊಳ್ಳಲಾಗಿತ್ತು. ಅದೇ ರೀತಿ ಮೋದಿಯವರು ಭಾರತದ ಪರಂಪರೆ ಜೊತೆಗೆ ದೇಶದ ಅಭಿವೃದ್ಧಿ ಮಾಡು ತ್ತಿದ್ದಾರೆ ಎಂದು ಮೈಸೂರು ರಾಜವಂಶದ ಯದುವೀರ ಒಡೆಯರ್ ಹೇಳಿದರು.
500 ವರ್ಷಗಳ ನಂತರ ರಾಮ ಜನ್ಮಭೂಮಿ ದೇವಾಲಯ ನಿರ್ಮಾಣವಾಗಿದೆ. ಆಧುನಿಕ ಯೋಗವನ್ನು ವಿಶ್ವಕ್ಕೆ ತಲುಪಿಸಿದ್ದಾರೆ. ಇದರ ಜೊತೆಗೆ ಹೆದ್ದಾರಿ, ರೈಲ್ವೆ, ಶಿಕ್ಷಣ ಸೇರಿದಂತೆ ಹಲವಾರು ವಲಯಗಳಲ್ಲಿ ಕಳೆದ 65 ವರ್ಷಗಳಲ್ಲೇ ಕಾಣದ ಅಭಿವೃದ್ಧಿ ಮಾಡಿದ್ದಾರೆ ಎಂದು ಒಡೆಯರ್ ವಿವರಿಸಿದರು. ಮೈಸೂರು ಅರಸರ ಸುವರ್ಣ ಯುಗ ಆ ಕಾಲದಲ್ಲಿತ್ತು. ಈಗ ಮೋದಿ ಭಾರತಕ್ಕೆ ಸುವರ್ಣ ಯುಗ ತರುತ್ತಿದ್ದಾರೆ. ಪಾಶ್ಚಾತ್ಯದ ದೇಶಗಳನ್ನೂ ಮೀರುವಂತೆ ವಿಕಸಿತ ಭಾರತವನ್ನು ರೂಪಿಸುವತ್ತ ಶ್ರಮಿಸುತ್ತಿದ್ದಾರೆ ಎಂದರು.
ದಾವಣಗೆರೆ, ಮೇ 3 – ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ನಗರದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.
ನಗರ ದೇವತೆ ದುಗ್ಗಮ್ಮ ದೇವಿ ದೇವಾಲಯಕ್ಕೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಜೊತೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬೆಣ್ಣೆದೋಸೆ ಸವಿದು ಗಾಯತ್ರಿ ಸಿದ್ದೇಶ್ವರ ಪರ ದಾವಣಗೆರೆ ಉತ್ತರ, ದಕ್ಷಿಣದಲ್ಲಿ ರೋಡ್ ಶೋ ನಡೆಸಿ, ಮತಯಾಚಿಸಿದರು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಒಡೆಯರ್,
ಅಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು ಅಂದರೆ, ಇಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು ಎಂದು ಕರೆ ನೀಡಿದರು.
ಇಡೀ ದೇಶದಲ್ಲಿ ಬಿಜೆಪಿ ಪರ ಅಲೆ ಇದೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದು, ರಾಜ್ಯ ದಲ್ಲಿ 28 ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದರು.
ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಯ ಪತಿ ಜಿಲ್ಲಾ ಉಸ್ತುವಾರಿ ಸಚಿವರಾದರೂ ದಕ್ಷಿಣ ಭಾಗಕ್ಕೆ ಒಂದು ಸುಸಜ್ಜಿತವಾದ ಆಸ್ಪತ್ರೆ, ವಿದ್ಯಾಕೇಂದ್ರ, ಕೈಗಾರಿಕೆ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್, ಬಿಜೆಪಿ ಯುವ ಮು ಖಂಡ ಜಿ.ಎಸ್.ಅನಿತ್ ಕುಮಾರ್, ಪಾಲಿಕೆ ಮಾಜಿ ಮೇಯರ್ ಎಸ್.ಟಿ.ವೀರೇಶ್, ಯಶವಂತರಾವ್ ಜಾಧವ್, ವಿಠಲ್, ಗಂಗಾಧರ, ಹಾಲೇಶ್, ವೀರೇಶ್, ಬಿ.ಎಸ್.ಜಗದೀಶ್ ಮತ್ತಿತರರು ರೋಡ್ ಶೋದಲ್ಲಿ ಪಾಲ್ಗೊಂಡಿದ್ದರು.