ದಾವಣಗೆರೆ, ಏ.17- ಅಬಕಾರಿ ಲೈಸೆನ್ಸ್ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದು ಅಮಾನತ್ತು ಆಗದಂತೆ ಕೆಎಟಿಗೆ ಹೋಗಿ ಸ್ಟೇ ತಂದಿದ್ದ ಅಬಕಾರಿ ಅಧಿಕಾರಿಗಳಿಗೆ ಸೋಲುಂಟಾಗಿದೆ.
ಅಬಕಾರಿ ಅಧಿಕಾರಿಗಳು ನೀಡಿದ್ದ ಅರ್ಜಿ ವಜಾಗೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತಕ್ಕೆ ಗೆಲುವು ದೊರೆತಂತಾಗಿದೆ.
ದಾವಣಗೆರೆ ಅಬಕಾರಿ ಡಿಸಿಯಾಗಿದ್ದ ಸ್ವಪ್ನ ಹಾಗೂ ದಾವಣಗೆರೆ ಡೆಪ್ಯೂಟಿ ಸೂಪರಿಂಟೆಂಡೆಂಟ್ ರವಿಕುಮಾರ್ ಮರಿಗೌಡರ್ ಹಾಗೂ ಹರಿಹರ ಅಬಕಾರಿ ಇನ್ಸ್ಪೆಕ್ಟರ್ ಶೀಲಾ, ಎಫ್ಡಿಎ ಅಶೋಕ್ ಕೆಎಟಿಗೆ ಹೋಗಿದ್ದರು. ಆದರೆ ಲೋಕಾಯುಕ್ತ ಸರ್ಕಾರಕ್ಕೆ ನೀಡಿದ ಎಲ್ಲ ದಾಖಲೆಗಳು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಾಬೀತಾಗಿದೆ. ಆದ್ದರಿಂದ ನ್ಯಾಯಾಧೀಶರಾದ, ಕೆಎಟಿ ಚೇರ್ ಮನ್ ಆರ್.ಬಿ.ಬೂದಿಹಾಳ್ ಈ ಅಧಿಕಾರಿಗಳಿಗೆ ನೀಡಿದ್ದ ಸ್ಟೇ ಅನ್ನು ವಾಪಸ್ ಪಡೆದಿದ್ದಾರೆ.
ಸರ್ಕಾರ ಅಮಾನತ್ತಿಗೆ ನೀಡಿರುವ ಆದೇಶ ಸರಿ ಇದೆ. ಎಲ್ಲ ದಾಖಲೆಗಳು ನಿಮ್ಮ ವಿರುದ್ದ ಇವೆ. ಆದ್ದರಿಂದ ನ್ಯಾಯಾಲಯ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಈ ಬಗ್ಗೆ ಅಬಕಾರಿ ಅಧಿಕಾರಿಗಳು ಇಲಾಖಾ ತನಿಖೆಗೆ ಹಾಜರಾಗಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.