ಸೋಲಿನ ಭಯದಿಂದ ಸಚಿವರಿಂದ ವೈಯಕ್ತಿಕ ಆರೋಪ : ಜಾಧವ್

ದಾವಣಗೆರೆ, ಏ.30- ಜಿಲ್ಲಾ ಉಸ್ತುವಾರಿ ಸಚಿವರು ಸೋಲಿನ ಭಯದಿಂದ, ಹತಾಶರಾಗಿ ಸಂಸದರ  ಬಗ್ಗೆ ವೈಯಕ್ತಿಕವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ಬಗ್ಗೆ ಸಚಿವರ ಆರೋಪಗಳು ಹಾಗೂ ಏಕವಚನ  ಬಳಕೆ, ವೈಯಕ್ತಿಕ ನಿಂದನೆಗಳು ಅವರ ವ್ಯಕ್ತಿತ್ವಕ್ಕೆ ತಕ್ಕುದಲ್ಲ ಎಂದರು.

ವೃತ್ತಿಯನ್ನು ರಾಜಕೀಯಕ್ಕೆ ಎಳೆದು ತರುವ ಸಚಿವರು, ಗುಟ್ಕಾ ಮಾರಾಟ ಮಾಡುವ ಸಂಸದರು ಜನರ ಆರೋಗ್ಯ ಹಾಳು ಮಾಡುತ್ತಾರೆ ಎನ್ನುತ್ತಾರೆ. ಹಾಗಾದರೆ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಫೈರ್ ಬ್ರಾಂಡ್ ಹೆಸರಿನಲ್ಲಿ ತಾವೇನು ಮಾಡುತ್ತೀರಿ ಎಂದು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು. ಸಂಸದರ ಅಭಿವೃದ್ಧಿ ಶೂನ್ಯ ಎಂದು ಹೇಳುವ ಸಚಿವರು, ತಮ್ಮ ಹಾಗೂ ತಮ್ಮ ತಂದೆಯ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ, ದಾವಣಗೆರೆಗೆ ಎಷ್ಟು ಅನುದಾನ ತಂದಿದ್ದೀರಿ ಎಂಬ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಕೊಳೇನಹಳ್ಳಿ ಬಿ.ಎಂ. ಸತೀಶ್, ನಿಂಗರಾಜ್ ಗೌಳಿ, ಸುರೇಶ್ ರಾವ್ ಸಿಂಧೆ, ಶಂಕರಗೌಡ ಬಿರಾದಾರ್, ಜಯಪ್ರಕಾಶ್ ಕೊಂಡಜ್ಜಿ ಇದ್ದರು.

error: Content is protected !!