ಹರಿಹರ ತಾಲ್ಲೂಕಿನ ಮತ ಯಾಚನೆಯಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ
ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕ ನೀರು
ಬೆಂಗಳೂರಿನಲ್ಲಿರುವ ಕರ್ನಾಟಕ ನೀರಾವರಿ ನಿಗಮ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರ ಮಾಡಿಸಲಾಗುವುದು. ನೀರಾವರಿ ನಿಗಮ ದಾವಣ ಗೆರೆಗೆ ಬಂದರೆ ಕಾಡಾ ಸಭೆಗಳನ್ನು ದಾವಣಗೆರೆಯಲ್ಲೇ ನಡೆಸಬಹುದು. ಹರಿಹರ ಮತ್ತು ದಾವಣಗೆರೆ ತಾಲ್ಲೂಕಿನ ಕೊನೆ ಭಾಗದ ಗ್ರಾಮಗಳಿಗೆ ಭದ್ರಾ ನಾಲೆ ನೀರು ಸಮರ್ಪಕವಾಗಿ ಹರಿಸಲು ಸಾಧ್ಯವಾಗುತ್ತದೆ. ಕರ್ನಾಟಕ ನೀರಾವರಿ ನಿಗಮ ದಾವಣಗೆರೆಗೆ ಬಂದರೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.
ಹರಿಹರ, ಏ.24- ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿಗಿಂತ ಅಕ್ರಮ ಮರಳುಗಾರಿಕೆಗೆ ಹೆಚ್ಚು ಒತ್ತು ಕೊಟ್ಟಿದ್ಧಾರೆ. ಚುನಾವಣೆ ಬಂತು, ಪತ್ನಿ ಅಭ್ಯರ್ಥಿ ಎಂದು ಈಗ ಅಭಿವೃದ್ಧಿ ಜಪ ಮಾಡುತ್ತಿದ್ದಾರೆ. ಅಂತಹವರಿಗೆ ಜನ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ ತಿಳಿಸಿದರು.
ಹರಿಹರ ತಾಲ್ಲೂಕಿನ ಸಾರಥಿ, ಚಿಕ್ಕಬಿದರಿ, ಪಾಮೇನಹಳ್ಳಿ, ದೀಟೂರು ಗ್ರಾಮಗಳಲ್ಲಿ ಮತಯಾಚಿಸಿ ಅವರು ಮಾತನಾಡಿದರು.
ಹರಿಹರ ತಾಲ್ಲೂಕಿನಲ್ಲಿ ಸಚಿವರ ಅಕ್ರಮ ಮರಗಳುಗಾರಿಕೆ ಬಗ್ಗೆ ಶಾಸಕ ಬಿ.ಪಿ.ಹರೀಶ್ ಅವರು ಧ್ವನಿ ಎತ್ತಿದ್ದಾರೆ. ಆದರೆ, ಸಚಿವರ ಹಿಂಬಾಲಕರು ಶಾಸಕರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದರೆ ಇನ್ನೂ ಸಾಮಾನ್ಯ ಜನರ ಪರಿಸ್ಥಿತಿ ಏನು ನೀವೇ ಯೋಜನೆ ಮಾಡಿ. ಇಂತಹವರಿಗೆ ಅಧಿಕಾರ ಕೊಟ್ಟರೆ ನಮ್ಮ – ನಿಮ್ಮ ಬದುಕು ದುಸ್ಥಿರವಾಗುತ್ತೆ. ನಿಮಗೆ ಬೇಕಿರುವುದು ಅಭಿವೃದ್ಧಿಯೋ… ಅಕ್ರಮವೋ ನೀವೇ ಯೋಚಿಸಿ ಎಂದರು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮತ್ತು ಹಾಲಿ ಶಾಸಕ ಬಿ.ಪಿ.ಹರೀಶ್ ಅವರು ಹರಿಹರ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸಂಸದ ಜಿ.ಎಂ.ಸಿದ್ದೇಶ್ವರ ಇಚ್ಛಾಶಕ್ತಿಯಿಂದ ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿ ಹರಿಹರ ನಗರದಲ್ಲಿ 25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನೂತನ ರೈಲ್ವೆ ನಿಲ್ದಾಣ, ಫ್ಲಾಟ್ ಫಾರ್ಮ್ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಅಮರಾ ವತಿ ಬಳಿ 28 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇ ತುವೆ ನಿರ್ಮಾಣ ಮಾಡಲಾಗಿದೆ. ಚಿಕ್ಕಜಾಜೂರಿನಿಂದ ಹರಿಹರದವರೆಗೂ 84 ಕೋಟಿ ವೆಚ್ಚದಲ್ಲಿ ರೈಲ್ವೆ ಲೈನ್ ವಿದ್ಯುದೀಕರಣ ಮಾಡಲಾಗಿದೆ. ಕೊಂಡಜ್ಜಿ ಬಳಿ 3 ಕೋಟಿ ವೆಚ್ಚದ ಸೇತುವೆ, ಹರಳಹಳ್ಳಿ ಬಳಿ 2.60 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣ ಮಾಡಲಾಗಿದೆ. ಹರಿಹರ ತಾಲ್ಲೂಕಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕೊಡುಗೆ ಏನೆಂದು ತಿಳಿಸಲಿ ಎಂದು ಸವಾಲು ಹಾಕಿದರು.
ಹರಿಹರ ತಾಲ್ಲೂಕಿನ ಹನಗವಾಡಿ ಬಳಿ 60 ಕೆಎಲ್ಡಿ ಸಾಮರ್ಥ್ಯದ 960 ಕೋಟಿ ವೆಚ್ಚದ 2 ಜಿ ಎಥೆನಾಲ್ ಘಟಕವನ್ನು ಎಂ.ಆರ್.ಪಿ.ಎಲ್ ಅವರು ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದಾರೆ. ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಜಮೀನು ಸಹ ಕೆ.ಐ.ಎ.ಡಿ.ಬಿ. ವತಿಯಿಂದ ಹಸ್ತಾಂತರ ಮಾಡಲಾಗಿದೆ. ಕೃಷಿ ತ್ಯಾಜ್ಯದಿಂದ 2ಜಿ ಎಥೆನಾಲ್ ಉತ್ಪಾದನೆ ಮಾಡುವುದರಿಂದ ರೈತರಿಗೂ ಅನುಕೂಲವಾಗಲಿದೆ. ತಂತ್ರಜ್ಞಾನ ಉನ್ನತೀಕರಣದ ವಿಚಾರವಾಗಿ ಅನುಷ್ಠಾನ ವಿಳಂಬವಾಗಿದ್ದು, ಕೇಂದ್ರ ಪೆಟ್ರೊಲಿಯಂ ಸಚಿವಾಲಯದೊಂದಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಮೊದಲ ಆದ್ಯತೆ ಮೇರೆಗೆ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇನೆ. ಇದರಿಂದ ಹರಿಹರ ಭಾಗದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.
ಜೆಡಿಎಸ್ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಎನ್ಡಿಎ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಗಾಯತ್ರಿ ಸಿದ್ದೇಶ್ವರ ಅವರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲು ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ ಎಂದರು.
ಹರಿಹರದಲ್ಲಿ ಅತಿ ಹೆಚ್ಚು ಲೀಡ್ ಕೊಡುವ ಮೂಲಕ ಜೆಡಿಎಸ್ ಕಾರ್ಯಕರ್ತರು ಎಚ್.ಶಿವಪ್ಪ ಅವರ ಶಕ್ತಿ ಏನು ಎಂದು ಕಾಂಗ್ರೆಸ್ನವರಿಗೆ ತೋರಿಸಬೇಕು. ನಾನು ಜೆಡಿಎಸ್ ಶಾಸಕನಾಗಿದ್ದಾಗ ಸಂಸದ ಸಿದ್ದೇಶ್ವರ ಅವರ ಬಳಿ ಹೋಗಿ ತಾಲ್ಲೂಕು ಅಭಿವೃದ್ಧಿ ವಿಚಾರವಾಗಿ ಏನೇ ಕೇಳಿದ್ರೂ ಇಲ್ಲ ಎನ್ನದೇ ಸಹಕಾರ ನೀಡಿದ್ದರು. ಅವರ ಸಹಕಾರದಿಂದ ತಾಲ್ಲೂಕಿನಲ್ಲಿ ಅನೇಕ ಕೆಲಸಗಳು ಆಗಿವೆ. ಜನ ಅಭಿವೃದ್ಧಿ ಮಾಡುವ ಗಾಯತ್ರಿ ಅವರಿಗೆ ಮತ ಹಾಕಬೇಕೇ ವಿನಃ ಅಕ್ರಮ ಮಾಡುವವರಿಗಲ್ಲ ಎಂದು ಸೂಚ್ಯವಾಗಿ ಹೇಳಿದರು.
ಶಾಸಕ ಬಿ.ಪಿ.ಹರೀಶ್ ಮತಯಾಚಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಹರಿಹರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ದಾವಣಗೆರೆಯಿಂದ ಕೂಗಳತೆ ದೂರದಲ್ಲಿರುವ ಹರಿಹರಕ್ಕೆ ವರ್ಷದಲ್ಲಿ ಎಷ್ಟು ಬಾರಿ ಭೇಟಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.