ದಾವಣಗೆರೆಯ 23 ಕೇಂದ್ರಗಳಲ್ಲಿ 12,289 ವಿದ್ಯಾರ್ಥಿಗಳು
ದಾವಣಗೆರೆ, ಏ.16- ಕರ್ನಾ ಟಕ ಪರೀಕ್ಷಾ ಪ್ರಾಧಿಕಾರದಿಂದ 2024 ನೇ ಸಾಲಿನ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ಸಂಗೋಪನಾ, ಫಾರ್ಮಸಿ, ಬಿ.ಎಸ್ಸಿ ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಾಡಿದ್ದು ದಿನಾಂಕ 18, 19 ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ನಗರದ 23 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸೈಯ್ಯದ್ ಆಫ್ರಿನ್ ಭಾನು ಎಸ್.ಬಳ್ಳಾರಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಪರೀಕ್ಷಾ ಪೂರ್ವಭಾವಿ ಸಿದ್ದತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಿನಾಂಕ 18 ರ ಗುರುವಾರ ಬೆಳಗ್ಗೆ 10.30 ರಿಂದ 11.50 ರ ವರೆಗೆ 60 ಅಂಕಗಳಿಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ ಮಧ್ಯಾಹ್ನ 3.50 ರವರೆಗೆ 60 ಅಂಕಗಳಿಗೆ ಗಣಿತ ಪರೀಕ್ಷೆ ನಡೆಯಲಿದೆ. ದಿನಾಂಕ 19 ರ ಶುಕ್ರವಾರ ಬೆಳಗ್ಗೆ 10.30 ರಿಂದ 11.50 ರ ವರೆಗೆ 60 ಅಂಕಗಳಿಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರ ವರೆಗೆ 60 ಅಂಕಗಳಿಗೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷಾ ಕೇಂದ್ರಗಳ ವಿವರ : ನಗರದ 23 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಡಿಆರ್ಎಂ ಸೈನ್ಸ್ ಪಿಯು ಕಾಲೇಜು, ಎವಿಕೆ ಬಾಲಕಿಯರ ಪದವಿ ಪೂರ್ವ ಕಾಲೇಜು, ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಎಕ್ಸ್ ಮುನ್ಸಿಪಲ್ ಪಿಯು ಕಾಲೇಜು, ಎಆರ್ಜಿ ಪಿ.ಯು ಕಲಾ ಮತ್ತು ವಾಣಿಜ್ಯ, ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು, ವಿಶ್ವಚೇತನ ಪಿಯು ಕಾಲೇಜು, ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಪಿಯು ಸೈನ್ಸ್ ಕಾಲೇಜು, ಸೆಂಟ್ ಜಾನ್ ಪಿಯು ಕಾಲೇಜು, ಶ್ರೀ ಸಿದ್ದಗಂಗಾ ಪಿಯು ಕಾಲೇಜು, ರಾಘವೇಂದ್ರ ಹೈಟೆಕ್ ಪಿಯು ಕಾಲೇಜು, ಟಿಎಂಸಿ ಮತ್ತು ಟಿಎಂ ಮೆಮೋ ಪಿಯು ಕಾಲೇಜು, ಸೆಂಟ್ ಪಾಲ್ಸ್ ಪಿಯು ಕಾಲೇಜು, ಚಾಣಕ್ಯ ಪಿಯು ಕಾಲೇಜು, ಲಲಿತಾ ಪಿಯು ಕಾಲೇಜು, ಸರ್ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಆನಂದ್ ಪಿಯು ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಎಸ್ಬಿಸಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ಇಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ.
ಪೆನ್ ಮತ್ತು ವಸ್ತ್ರ ಸಂಹಿತೆ; ಓಎಂಆರ್ ಸೀಟ್ನಲ್ಲಿ ಮಾರ್ಕ್ ಮಾಡುವುದರಿಂದ ಕಪ್ಪು ಮತ್ತು ನೀಲಿ ಬಾಲ್ಪೆನ್ ಮಾತ್ರ ಉಪಯೋಗಿಸಬೇಕು. ಕೇಂದ್ರದೊಳಗೆ ಬ್ಲೇಡ್, ವೈಟ್ನರ್ ತೆಗೆದುಕೊಂಡು ಹೋಗುವಂತಿಲ್ಲ. ಮೊಬೈಲ್, ಬ್ಲೂಟೂತ್ ಹಾಗೂ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೇಂದ್ರದೊಳಗೆ ತೆಗೆದುಕೊಂಡು ಹೋಗುವಂತಿಲ್ಲ. ಪೂರ್ಣ ತೋಳು ಇರುವ ಶರ್ಟ್ಗಳನ್ನು ಹಾಕದೇ ಸ್ಲ್ಯಾಗ್ ಧರಿಸಬೇಕು, ಮಹಿಳೆಯರು ಸಹ ಪೂರ್ಣತೋಳಿನ ಉಡುಪು ಧರಿಸಬಾರದು. ಧರಿಸಿದ್ದಲ್ಲಿ ಪರೀಕ್ಷೆ ನಡೆಯುವುದಕ್ಕಿಂತ ಮುಂಚಿತವಾಗಿ ತಪಾಸಣೆ ಮಾಡಿ ಮಡಿಚಿಕೊಳ್ಳುವಂತೆ ಸೂಚನೆ ನೀಡಬೇಕು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.