ದಾವಣಗೆರೆ, ಮೇ 21- ನಗರದ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವಂತೆ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ ಒತ್ತಾಯಿಸಿದೆ.
ದಾವಣಗೆರೆ ರೈಲು ನಿಲ್ದಾಣ ಮೈಸೂರು ವಿಭಾಗದಲ್ಲಿ 2ನೇ ಅತಿ ಹೆಚ್ಚು ಆದಾಯ ತರುವ ನಿಲ್ದಾಣವಾಗಿದೆ. ನಿತ್ಯ 25 ಕ್ಕೂ ಹೆಚ್ಚು ಎಕ್ಸ್ಪ್ರೆಸ್ ರೈಲುಗಳು ಹಾಗೂ 20 ಗೂಡ್ಸ್ ರೈಲುಗಾಡಿಗಳು ಸಂಚರಿಸುತ್ತಿವೆ. ಪ್ರತಿ ತಿಂಗಳು ಎರಡೂವರೆ ಕೋಟಿ ರೂ. ಗಳಿಕೆಯಾಗುತ್ತಿದೆ.
ರೈಲು ನಿಲ್ದಾಣದಲ್ಲಿ ಟ್ರೋಲಿ ಪಾಥ್, ಅಂಗವಿಕಲರ ಹಾಗೂ ಹಿರಿಯ ನಾಗರಿಕರಿಗೆ ಬ್ಯಾಟರಿ ಚಾಲಿತ ಕಾರ್ ಹಾಗೂ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಶುಚಿ, ರುಚಿ ಊಟ, ತಿಂಡಿ ಪೂರೈಸುವ ಕ್ಯಾಂಟೀನ್ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ಒತ್ತಾಯಿಸಿದ್ದಾರೆ. ರಾತ್ರಿ ವೇಳೆ ಪ್ರಯಾಣಿಕರ ಸುರಕ್ಷತೆಗೆ ಪೊಲಿಸ್ ಇಲಾಖೆಯವರು ಗಸ್ತು ಹೆಚ್ಚಿಸಬೇಕು ಎಂದು ದಾವಣಗೆರೆಯ ನೈರುತ್ಯ ರೈಲ್ವೆ ಪ್ರಯಾಣಿಕರ ಸಂಘ ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಕೋರಿದೆ.