ನ್ಯಾಮತಿ, ಮೇ 30- ಕಳೆದ ರಾತ್ರಿ ಸುರಿದ ಭಾರೀ ಗಾಳಿ-ಮಳೆಗೆ ತಾಲ್ಲೂಕಿನ ಕುರುವಾ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ ನೀಡಿ ಮಳೆಹಾನಿ ವೀಕ್ಷಿಸಿದರು.
ಇದೇ ವೇಳೆ ಮಾತನಾಡಿದ ರೇಣುಕಾಚಾರ್ಯ ಸೋಮವಾರ ಸುರಿದ ಭಾರೀ ಗಾಳಿ-ಮಳೆಯಿಂದಾಗಿ ಕುರುವಾ ಗ್ರಾಮದಲ್ಲಿ ಬೃಹಧಾಕಾರದ ಎರಡು ಮರಗಳು ಮನೆಗಳ ಮೇಲೆ ಬಿದ್ದ ಪರಿಣಾಮ 3 ಮನೆಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದರು.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿ ಖುದ್ದು ಮಳೆಹಾನಿ ವೀಕ್ಷಿಸಿದ್ದೇನೆಂದ ರೇಣುಕಾಚಾರ್ಯ, ಮರಗಳು ಮನೆಗಳ ಮೇಲೆ ಬಿದ್ದ ಪರಿಣಾಮ ಈರಮ್ಮ-ಕರಿಬಸಪ್ಪ, ಲಲಿತಮ್ಮ-ಬಸವರಾಜಪ್ಪ, ಮಹೇಶ್ವರಪ್ಪ ಎಂಬುವವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದ್ದರೆ, ವಿನಯ್ ಕುಮಾರ್ ಅವರ ಗೊಬ್ಬರದ ಅಂಗಡಿಯ ಮೇಲ್ಚಾವಣಿ ಹಾರಿ ಹೋಗಿದ್ದು ಗೊಬ್ಬರದ ಅಂಗಡಿಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ ಎಂದರು.
ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಇಡೀ ಗ್ರಾಮ ಕಳೆದ ರಾತ್ರಿಯಿಂದ ಕತ್ತಲೆಯಲ್ಲಿ ಕಾಲ ಕಳೆಯ ಬೇಕಾಗಿದ್ದು ಕೂಡಲೇ ಅಧಿಕಾರಿಗಳು, ವಿದ್ಯುತ್ ವ್ಯವಸ್ಥೆ ಸರಿ ಮಾಡುವಂತೆ ಅಧಿಕಾರಿಗಳಿಗೆ ಕರೆ ಮಾಡಿ ಎಚ್ಚರಿಸಿದರು.
ಬೇಸರ ವ್ಯಕ್ತ ಪಡಿಸಿದ ರೇಣುಕಾಚಾರ್ಯ : ಮನೆಗಳ ಮೇಲೆ ಮರ ಬಿದ್ದು ಜಖಂ ಆಗಿದ್ದನ್ನು ಕಂಡು ರೇಣುಕಾಚಾರ್ಯ ಬೇಸರ ವ್ಯಕ್ತ ಪಡಿಸಿದರಲ್ಲದೇ, ಕೂಡಲೇ ಅಧಿಕಾರಿಗಳು ವರದಿ ಸಿದ್ದಪಡಿಸುವಂತೆ ತಿಳಿಸಿದ ಅವರು, ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.