ಹೊನ್ನಾಳಿಯಲ್ಲಿ ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ

ಹೊನ್ನಾಳಿಯಲ್ಲಿ ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ

ಹೊನ್ನಾಳಿ, ಏ. 3 – ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಉದ್ಘೋಷವನ್ನು ಆದಿ ಜಗದ್ಗುರುಗಳಾದ ಶ್ರೀ ರೇಣುಕಾಚಾರ್ಯರು ಮಾಡಿ ಮನು ಕುಲದ ಒಳಿತನ್ನು ಬಯಸಿದರು ಎಂದು ಬೇಡ ಜಂಗಮ ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಪಂಚಾಕ್ಷರಯ್ಯ ಬೈರನಹಳ್ಳಿ ಹೇಳಿದರು.

ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.

ವೀರಶೈವ ಧರ್ಮ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರು ಸಮಾಜದಲ್ಲಿ ಸಮಾನತೆಯನ್ನು ಕಾಣಬೇಕು. ಮೇಲು, ಕೀಳು ಭಾವನೆಯ ತೊಲಗಿಸಿ ಎಲ್ಲರೂ ಮಾನವತ್ವವನ್ನು ಹೊಂದಿ ಮನುಷ್ಯರಾಗಿ ಬಾಳಬೇಕು ಎಂದು ವಿಶ್ವದ ಮನುಕುಲಕ್ಕೆ ಸಾರಿದರು ಎಂದು ಹೇಳಿದರು.

ಧರ್ಮಾಚರಣೆ ಕಾರ್ಯ ಕೈಗೊಂಡ ಜಗದ್ಗುರುಗಳಾದ ರೇಣುಕಾಚಾರ್ಯರು ಭಾರತದಲ್ಲಿ ಶ್ರೀಮದ್ ರಂಭಾಪುರಿ, ಶ್ರೀಮದ್ ಉಜೈಯಿನಿ, ಶ್ರೀಮದ್ ಕೇದಾರ, ಶ್ರೀಮದ್ ಶ್ರೀಶೈಲ ಹಾಗೂ ಶ್ರೀಮದ್ ಕಾಶಿ ಎಂಬ ಪಂಚ ಪೀಠಗಳನ್ನು ಸ್ಥಾಪಿಸಿ, ಪ್ರತಿ ಪೀಠಕ್ಕೆ ಜಗದ್ಗುರುಗಳ ನೇಮಕ ಕೈಗೊಂಡು, ಪೀಠಗಳು ಸದಾ ಧರ್ಮಾಚರಣೆಯಲ್ಲಿ ತೊಡಗಿಸಿಕೊಳ್ಳುವಂತೆ ಆದೇಶಿಸಿದರು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಭಾರತದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಇದ್ದು ಧರ್ಮದ ಆಚರಣೆ ಸದಾ ಚಾಲನೆಯಲ್ಲಿದೆ ಎಂದರು. ಪ್ರತಿಯೊಬ್ಬ ವ್ಯಕ್ತಿ ಧರ್ಮದಿಂದ ಬಾಳಬೇಕು ಎಂದು ಹೇಳಿರುವ ಜಗದ್ಗುರು ರೇಣುಕಾಚಾರ್ಯರು ಸದಾ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ್ದಾರೆ, ಅವರ ತತ್ವಾದರ್ಶಗಳನ್ನು ಪಾಲಿಸುವುದು ನಮ್ಮ ಧರ್ಮವಾಗಬೇಕು. ಸರ್ಕಾರದಿಂದ ಮಹಾತ್ಮರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಿರುವುದು ಸರಿಯಷ್ಟೆ,  ಎಲ್ಲಾ ಮಹಾತ್ಮರ ನಡೆನುಡಿಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಹಾತ್ಮರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.

ಬೇಡ ಜಂಗಮ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಸ್ವಾಮಿ, ಉಪಾಧ್ಯಕ್ಷ ಬಸಯ್ಯ, ಸಮಾಜದ ಹಿರಿಯ ಮುಖಂಡರುಗಳಾದ ಎಚ್.ಎಂ. ಗಂಗಾಧರಯ್ಯ, ಕುಳಗಟ್ಟೆ ಪರಮೇಶ್ವರಯ್ಯ, ಎಂ.ಎಸ್. ಶಾಸ್ತ್ರಿ ಹೊಳೆಮಠ, ಎಂ. ಶಿವಶಂಕರಯ್ಯ, ನಾಗರಾಜಯ್ಯ, ಸಾಲಿಮಠ, ದಯಾನಂದಸ್ವಾಮಿ, ಕೊಟ್ರಸ್ವಾಮಿ, ಎ.ಜಿ. ಸುನಂದ, ಬೆನಕನಹಳ್ಳಿ ಬಸಯ್ಯ, ಕುಳಗಟ್ಟೆ ಬಸವರಾಜಯ್ಯ, ಜಗದೀಶಯ್ಯ, ಮಹಾಬಲಯ್ಯ, ಸೊರಟೂರು ರುದ್ರಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!