ಮಲೇಬೆನ್ನೂರು, ಮಾ.27- ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ಮಹಾರಥೋತ್ಸವವು ಬುಧವಾರ ಬೆಳಗಿನ ಜಾವ ಸಕಲ ವಾದ್ಯಗಳೊಂದಿಗೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ 10 ಗಂಟೆಗೆ ದೇವರು ಭೇಟೆ ಆಡಿ ಬಂದ ನಂತರ ದೇವಸ್ಥಾನದಲ್ಲಿ ಸಾಮೂಹಿಕ ಮದುವೆಗಳು ನಡೆದವು.
ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರಥೋತ್ಸವದ ಅಂಗವಾಗಿ ಸಂಜೆ ನಡೆದ ಹನುಮಂತ ದೇವರ ಮುಳ್ಳೋತ್ಸವ ನೋಡಲು ಕುಂಬಳೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಜನ ಆಗಮಿಸಿದ್ದರು.
ಮೊದಲಿಗೆ ಭೂತಪ್ಪನನ್ನು ಹೊತ್ತ ವ್ಯಕ್ತಿ ಮುಳ್ಳು ತುಳಿದ ನಂತರ ಹರಕೆ ಹೊತ್ತ ಜನರು ಮುಳ್ಳು ತುಳಿದು ಭಕ್ತಿ ಸಮರ್ಪಿಸಿದರು.
ಈ ವೇಳೆ ಹನುಮಂತ ದೇವರ ಕುದುರೆ ವಾಹನದ ಮೇಲೆ ಕುಣಿಯುವ ದೃಶ್ಯ ಎಲ್ಲರ ಗಮನ ಸೆಳೆದರು.
ಗ್ರಾಮದ ಶ್ರೀ ಬಸವೇಶ್ವರ, ಶ್ರೀ ಬೀರಲಿಂಗೇಶ್ವರ, ಶ್ರೀ ಮಾರೆಮ್ಮ, ಶ್ರೀ ಉಡಸಲಾಂಬಿಕೆ ಮತ್ತು ನಿಟ್ಟೂರಿನ ಶ್ರೀ ಆಂಜನೇಯ ಸ್ವಾಮಿ ದೇವರುಗಳು ಸಾನ್ನಿಧ್ಯ ವಹಿಸಿದ್ದವು. ರಾತ್ರಿ ಕಂಕಣ ವಿಸರ್ಜನೆ ಹಾಗೂ ಓಕುಳಿ, ಭೂತಗಳ ಮಣೇವು ಸೇವೆಯೊಂದಿಗೆ ರಥೋತ್ಸವಕ್ಕೆ ತೆರೆ ಎಳೆಯಲಾಯಿತು.