ಮಲೇಬೆನ್ನೂರು, ಮಾ. 26- ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ಬ್ರಹ್ಮ ರಥೋತ್ಸವವು ಮಂಗಳವಾರ ಮಧ್ಯಾಹ್ನ ಸಂಭ್ರಮದಿಂದ ಜರುಗಿತು.
ಶ್ರೀ ಬಸವೇಶ್ವರ, ಶ್ರೀ ಬೀರಲಿಂಗೇಶ್ವರ ದೇವರ ಸಮ್ಮುಖದಲ್ಲಿ ನಡೆದ ಬ್ರಹ್ಮ ರಥೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಉಪ ತಹಶೀಲ್ದಾರ್ ಆರ್. ರವಿ ಅವರು ಸಂಪ್ರದಾಯದಂತೆ ರಥಕ್ಕೆ ಪೂಜೆ ಸಲ್ಲಿಸಿ ರಥದ ಗಾಲಿಗೆ ತೆಂಗಿನಕಾಯಿ ಒಡೆದರು.
ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀಧರ್, ಅಣ್ಣಪ್ಪ, ದೇವಸ್ಥಾನ ಕಮಿಟಿಯ ಗೌಡ್ರ ಪರಮೇಶ್ವರಪ್ಪ, ಗೌಡ್ರ ತೀರ್ಥಪ್ಪ, ಕೆ.ಜಿ. ಬಸವನಗೌಡ್ರು, ಹರೀಶ್ ಗೌಡ್ರ, ಕೆ. ತೀರ್ಥಪ್ಪ, ಆರ್.ಜೆ.ಬಸವರಾಜಪ್ಪ, ಮಾಗಾನಹಳ್ಳಿ ರಮೇಶ್, ಬಾರಿಕೇರ ಚಂದ್ರಪ್ಪ, ಪ್ರಧಾನ ಅರ್ಚಕರಾದ ಸಂಜೀವ್ ಶ್ರೀನಿವಾಸ್, ರಾಜೀವ್ ಭೀಮರಾವ್ ಸೇರಿದಂತೆ ಗ್ರಾಮಸ್ಥರು ಈ ವೇಳೆ ಹಾಜರಿದ್ದರು.
ವಿವಿಧ ಕಲಾ-ಮೇಳಗಳು ಬ್ರಹ್ಮ ರಥೋತ್ಸವಕ್ಕೆ ಮೆರಗು ತಂದವು. ನಂತರ ಹರಿಸೇವೆ, ಭಕ್ತಾದಿಗಳಿಂದ ಹರಕೆ, ಬಾಯಿಬೀಗ, ಕಿವಿ ಚುಚ್ಚುವುದು, ಜವಳ, ದಿಂಡು ಉರುಳು ಸೇವೆ ಸೇರಿದಂತೆ ವಿವಿಧ ಹರಕೆಗಳು ನಡೆದವು.
ಬೆಳಿಗ್ಗೆ ಗಜ ಉತ್ಸವ ನಡೆಯಿತು. ಬುಧವಾರ ಬೆಳಗಿನ ಜಾವ ಸ್ವಾಮಿಯ ಮಹಾ ರಥೋತ್ಸವ ಜರುಗಲಿದ್ದು, ಬೆಳಿಗ್ಗೆ 11.30ಕ್ಕೆ ಸಾಮೂಹಿಕ ವಿವಾಹ, ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಾಯಂಕಾಲ 4 ಗಂಟೆಗೆ ಮುಳ್ಳೋತ್ಸವ ನಡೆಯಲಿದೆ.