ಜಗಳೂರು, ಮಾ. 25 – ಕುಡಿ ಯುವ ನೀರಿನ ಪೂರೈಕೆಗಾಗಿ ಆಗ್ರಹಿಸಿ ತಾಲ್ಲೂಕಿನ ಅಣಬೂರು ಗ್ರಾಮ ಪಂಚಾ ಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಅಣಬೂರು ಗೊಲ್ಲರಹಟ್ಟಿ ಗ್ರಾಮಸ್ಥರು ಖಾಲಿ ಕೊಡ ಕೈಯ್ಯಲ್ಲಿ ಹಿಡಿದು ಕುಡಿಯುವ ನೀರು ಪೂರೈಕೆಗೆ ಮನವಿ ಮಾಡಿದರು.
ಮುಖಂಡರಾದ ಮಹಾಲಿಂಗಪ್ಪ ಎಚ್.ಎಂ. ಹೊಳೆ ಮಾತನಾಡಿ, ಗೊಲ್ಲರಹಟ್ಟಿ ಗ್ರಾಮದಲ್ಲಿ 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಕೇವಲ ಒಂದೇ ಒಂದು ಬೋರ್ ವೆಲ್ ಲಭ್ಯವಿದೆ. ಇದರಿಂದ ಗ್ರಾಮದ ಸಂಪೂರ್ಣ ಕುಟುಂಬಗಳಿಗೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.
ಮತ್ತೊಂದು ಬೋರ್ ವೆಲ್ ಕೊರೆದಿದ್ದರೂ ವಿದ್ಯುತ್ ಸಂಪರ್ಕವಿಲ್ಲದೆ ಬಳಕೆಯಾಗುತ್ತಿಲ್ಲ. ಆರ್.ಆರ್. ನಂಬರ್ ಪಡೆಯದಿರುವುದು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಗ್ರಾಮದ ಮುಖಂಡ ಸಣ್ಣ ಬಾಲಪ್ಪ ಮಾತನಾಡಿ, ಗ್ರಾಮದಿಂದ ಹರಿದು ಹೋಗುವ ಚರಂಡಿ ನೀರು ಮಿಶ್ರಿತವಾದ ಕೊಳವೆ ಬಾವಿ ನೀರನ್ನೇ ಸೇವಿಸುವ ಅನಿವಾರ್ಯತೆ ಎದುರಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಕಳೆದ ಒಂದು ತಿಂಗಳಿನಿಂದ ಮನವಿ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮುದಿಯಪ್ಪ, ಗುಡ್ಡಪ್ಪ, ಹೆಚ್.ಜಿ.ಸಣ್ಣಕಾಟಪ್ಪ, ಸಣ್ಣಬಾಲಪ್ಪ, ಬಾಲಪ್ಪ, ಈರಮ್ಮ, ಕಾಟಮ್ಮ, ನಾಗೇಂದ್ರಪ್ಪ, ಬಾಲರಾಜ್ ಕುಮಾರ್, ಚೇತನ್, ಕಾಂತರಾಜ್, ಮಂಜುನಾಥ, ನಾಗರಾಜ್, ಸೇರಿದಂತೆ ಗ್ರಾಮಸ್ಥರು ಪ್ರತಿಭಟಣೆಯಲ್ಲಿ ಭಾಗವಹಿಸಿದ್ದರು.