ಸಾಸ್ವೇಹಳ್ಳಿ ಯೋಜನೆ ತಂದಿದ್ದು ನಾನು, ಮಾಡಾಳು : ಸಿದ್ದೇಶ್ವರ

ಸಾಸ್ವೇಹಳ್ಳಿ ಯೋಜನೆ ತಂದಿದ್ದು ನಾನು, ಮಾಡಾಳು : ಸಿದ್ದೇಶ್ವರ

ಚನ್ನಗಿರಿ, ಸಂತೆಬೆನ್ನೂರಿನಲ್ಲಿ ಬೃಹತ್ ರೋಡ್ ಶೋ : ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ

ಚನ್ನಗಿರಿ, ಮೇ 1- ತಾಲ್ಲೂಕಿಗೆ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ತಂದಿದ್ದು ನಾನು ಮತ್ತು ಆಗ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ. ಸಿರಿಗೆರೆ ಶ್ರೀಗಳ ಸಹಕಾರದಿಂದ ನಾವು ಯೋಜನೆ ತಂದಿದ್ದು, ಇದಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ಚನ್ನಗಿರಿ, ಸಂತೆಬೆನ್ನೂರಿನಲ್ಲಿ ಪತ್ನಿ ಗಾಯಿತ್ರಿ ಸಿದ್ದೇಶ್ವರ ಪರ ಇಂದು ರೋಡ್ ಶೋ ನಡೆಸಿ ಮಾತನಾಡಿದ ಅವರು, ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಇಷ್ಟೊತ್ತಿಗೆ ಪೂರ್ತಿಗೊಂಡು ಕೆರೆಗಳಿಗೆ ನೀರು ತುಂಬಿಸಬೇಕಿತ್ತು. ಆದರೆ, ಯಾರೋ ಒಬ್ಬರು ನ್ಯಾಯಾಲಯಕ್ಕೆ ಹೋಗಿದ್ದರಿಂದ ಅನುಷ್ಠಾನ ವಿಳಂಬವಾಗಿದೆ. ನ್ಯಾಯಾಲಯದಲ್ಲಿನ ಪ್ರಕರಣ ಇತ್ತೀಚೆಗಷ್ಟೇ ಕ್ಲಿಯರ್ ಆಗಿದೆ. ಬರುವ ಮಳೆಗಾಲದಲ್ಲಿ ಚನ್ನಗಿರಿ ತಾಲ್ಲೂಕಿನ ಎಲ್ಲಾ ಕೆರೆ ತುಂಬಿಸಲಾಗುವುದು. ಈ ಯೋಜನೆಗೂ ಕಾಂಗ್ರೆಸ್ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಕಳೆದರೂ ಒಂದೇ ಒಂದು ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮಾಡಾಳು ವಿರೂಪಾಕ್ಷಪ್ಪ ಚನ್ನಗಿರಿ ಪಟ್ಟಣದ ಯುಜಿಡಿಗೆ ಅಂತ 100 ಕೋಟಿ ರೂ. ಅನುದಾನ ತಂದಿದ್ದರು. ಈಗಿನ ಶಾಸಕರು ಆ ಅನುದಾನ ಬಳಸಿಕೊಂಡು ಕೆಲಸ ಮಾಡತ್ತಿದ್ದಾರೆ. ನಾವು ಹಣ ತರುವುದು, ಕೆಲಸ ಮಾಡುವುದು. ಕಾಂಗ್ರೆಸ್‌ನವರು ಬಂದು ಶಂಕುಸ್ಥಾಪನೆ, ಉದ್ಘಾಟನೆ ಮಾಡುವುದು ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಗಿರಿ ಅಡಕೆ ನಾಡು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮೊನ್ನೆ ಚನ್ನಗಿರಿಗೆ ಬಂದಾಗ ಹೇಳ್ತಿದ್ರು ನಾವು ಪಾನ್ ಮಸಾಲ, ಗುಟ್ಖಾ ತಯಾರು ಮಾಡ್ತಿವಿ, ನಿಮ್ಮ ಆರೋಗ್ಯ ಕೆಡುತ್ತದೆ ಎಂದು. ಇದೇ ಎಸ್.ಎಸ್.ಮಲ್ಲಿಕಾರ್ಜುನ್ `ಫೈರ್’ ಅನ್ನೋ ಹೆಸರಿನಲ್ಲಿ ಗುಟ್ಖಾ ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ. ಕಲ್ಲೇಶ್ವರ ಮಿಲ್ ಪಕ್ಕದಲ್ಲೇ ಫ್ಯಾಕ್ಟರಿ ಮಾಡಿಕೊಂಡಿದ್ದಾರೆ. ಈಗ ಅವರ ಪತ್ನಿ ದಂತ ವೈದ್ಯೆ ಬಂದು ನಿಮ್ಮ ಹಲ್ಲು ಕ್ಲೀನ್ ಮಾಡ್ತಾರಂತೆ. ಮಲ್ಲಿಕಾರ್ಜುನ್ ಬಾಯಿ ಬಿಟ್ಟರೆ ಬರೀ ಸುಳ್ಳೇ ಹೇಳುವುದು ಎಂದು ಚಾಟೀ  ಬಿಸಿದರು.

ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಚನ್ನಗಿರಿ ತಾಲ್ಲೂಕು ಮೊದಲು ಗ್ರಾಮದ ರೀತಿ ಇತ್ತು. ನಾನು ಮತ್ತು ಸಿದ್ದೇಶಣ್ಣ ಚನ್ನಗಿರಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ನೀವು ಪ್ರತಿ ನಿತ್ಯ ಓಡಾಡುವ ಸಿಸಿ ರಸ್ತೆ ನಾವು ಮಾಡಿಸಿದ್ದು. 100 ಹಾಸಿಗೆ ಆಸ್ಪತ್ರೆ, ಚನ್ನಗಿರಿ ಕೆರೆ ಅಭಿವೃದ್ಧಿ, ಉಬ್ರಾಣಿ ಏತ ನೀರಾವರಿ ಯೋಜನೆ, ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಹೀಗೆ ಹತ್ತ ಹಲವು ಯೋಜನೆ ತರುವುದಕ್ಕೆ ಸಿದ್ದೇಶಣ್ಣನ ಶ್ರಮವೂ ಇದೆ. ಹೀಗಾಗಿ ಈ ಬಾರಿ ಗಾಯಿತ್ರಿ ಸಿದ್ದೇಶ್ವರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ದೆಹಲಿಗೆ ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನ ಮಂತ್ರಿ ಆಗಬೇಕು ಎಂಬುದು ಇಡೀ ಭಾರತೀಯರ ಆಶಯ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದನ್ನು ಕಣ್ತುಂಬಿಕೊಳ್ಳಲು ವಿಶ್ವವೇ ಕಾಯುತ್ತಿದೆ. ಅಂತಹ ಕ್ಷಣ ನಮ್ಮ ಕಣ್ಮುಂದೆ ಬರಬೇಕು ಅಂದರೆ ಗಾಯಿತ್ರಿ ಅಕ್ಕ ಇಲ್ಲಿಂದ ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದು ಸಂಸತ್ತಿಗೆ ಹೋಗಬೇಕು. ಆಗ ಮಾತ್ರ ನರೇಂದ್ರ ಮೋದಿ ಜೀ ಅವರ ಕೈ ಬದಲಪಡಿಸಲು ಸಾಧ್ಯ ಎಂದು ಕೆರೆ ನೀಡಿದರು.

ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ತುಮ್ ಕೋಸ್ ಮಾಜಿ ಅಧ್ಯಕ್ಷ ಹೆಚ್.ಎಸ್.ಶಿವಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್ ಮತ್ತು ಇತರರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.

error: Content is protected !!