ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿಯವರ 16ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಶ್ಲ್ಯಾಘನೆ
ಮಲೇಬೆನ್ನೂರು, ಏ.3- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಥಮ ಪೀಠಾಧಿಪತಿಯಾಗಿದ್ದ ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿಯವರ 16ನೇ ವರ್ಷದ ಪುಣ್ಯಾರಾಧನೆಯನ್ನು ವಿವಿಧೆಡೆ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿರುವ ಶ್ರೀ ಪುಣ್ಯಾನಂದ ಪುರಿ ಶ್ರೀಗಳವರ ಗದ್ದುಗೆಗೆ ವಿಶೇಷ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಪುಣ್ಯಾನಂದ ಪುರಿ ಶ್ರೀಗಳ ಸತತ ಪರಿಶ್ರಮದಿಂದಾಗಿ ವಾಲ್ಮೀಕಿ-ನಾಯಕ ಸಮಾಜ ಇವತ್ತು ಒಟ್ಟಾರೆ ಸಮಾ ಜದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಶ್ರೀಗಳಿಂದಾಗಿ ಸಮಾಜಕ್ಕೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಶಕ್ತಿ ಸಿಕ್ಕಿದೆ. ನಿಮ್ಮ ವೈಯಕ್ತಿಕ ವಿಚಾರಗಳು ಏನೇ ಇರಲಿ. ಸಮಾಜದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗುವ ಮೂಲಕ ಪುಣ್ಯಾನಂದ ಪುರಿ ಶ್ರೀಗಳ ಪರಿಶ್ರಮಕ್ಕೆ ಮನ್ನಣೆ ನೀಡಬೇಕೆಂದು ಸಮಾಜದ ಬಂಧುಗಳಿಗೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮನವಿ ಮಾಡಿದರು. ಕಷ್ಟ ಕಾಲದಲ್ಲಿ ಸಮಾಜದ ಪ್ರಥಮ ಗುರುಗಳಾಗಿ ಸಮಾಜವನ್ನು ಸಂಘಟಿಸಿದ ಕೀರ್ತಿ ಪುಣ್ಯಾನಂದ ಪುರಿ ಶ್ರೀಗಳಿಗೆ ಸಲ್ಲುತ್ತದೆ ಎಂದರು.
ಶಾಸಕ ಎಸ್. ರಾಮಪ್ಪ, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಧರ್ಮದರ್ಶಿಗಳಾದ ನಲುವಾಗಲು ನಾಗರಾಜಪ್ಪ, ಕೆ.ಬಿ. ಮಂಜಣ್ಣ, ಹರ್ತಿಕೋಟಿ ವೀರೇಂದ್ರ ಸಿಂಹ, ಹಾಸನದ ಮಹೇಶ್, ನಿವೃತ್ತ ಎಸಿಪಿ ಪಂಪಾಪತಿ, ಬಿಜೆಪಿ ಮುಖಂಡ ಕೂಡ್ಲಿಗಿಯ ಬಂಗಾರಿ ಹನುಮಂತು, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ನಿವೃತ್ತ ಶಿಕ್ಷಕ ಭಾನುವಳ್ಳಿ ಪುಟ್ಟಪ್ಪ, ಜಿಗಳಿ ಕ್ಯಾಂಪಿನ ಎನ್. ಪ್ರಸಾದ್ರಾವ್, ತಾ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಾರ್ವತಿ ಬೋರಯ್ಯ, ಜಿಲ್ಲಾ ವಾಲ್ಮೀಕಿ ಮಹಿಳಾ ಸಂಘದ ಶ್ರೀಮತಿ ವಿಜಯಶ್ರೀ ಮಹೇಂದ್ರಕುಮಾರ್, ಹರಿಹರದ ಮಕರಿ ಪಾಲಾಕ್ಷಪ್ಪ, ರಾಜನಹಳ್ಳಿ ಭೀಮಣ್ಣ, ಪುಣ್ಯಾನಂದ ಪುರಿ ಶ್ರೀಗಳ ಪ್ರತಿಮೆಯ ದಾನಿಗಳಾದ ಶ್ರೀಮತಿ ಸುಮಿತ್ರ ಕೆ.ಹೆಚ್. ಓಬಳಪ್ಪ ಪುತ್ರರಾದ ಚೇತನ್ ಸಚ್ಚಿನ್, ಪತ್ರಕರ್ತ ಜಿಗಳಿ ಪ್ರಕಾಶ್ ಸೇರಿದಂತೆ ವಿವಿಧ ತಾಲ್ಲೂಕಿನ ಭಕ್ತರು ಭಾಗವಹಿಸಿದ್ದರು.