ಶ್ರೀಮಂತಿಕೆ ಬದುಕಿನ ಹಪಾಹಪಿ ಎಲ್ಲರಲ್ಲೂ ಹೆಚ್ಚಾಗಿದೆ

ಶ್ರೀಮಂತಿಕೆ ಬದುಕಿನ ಹಪಾಹಪಿ ಎಲ್ಲರಲ್ಲೂ ಹೆಚ್ಚಾಗಿದೆ

ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ

ಚಿತ್ರದುರ್ಗ, ಅ. 6- ಆಧುನಿಕತೆಯ ಭರಾಟೆಯಲ್ಲಿ ಶ್ರೀಮಂತಿಕೆಯ ಬದುಕು ಸಾಗಿಸ ಬೇಕೆಂಬ ಹಪಾಹಪಿ ಎಲ್ಲರಲ್ಲೂ ಹೆಚ್ಚಾಗಿದೆ. ಇದ ರಿಂದಾಗಿ ವ್ಯಕ್ತಿಯ ಸಂಬಂಧಗಳಿಗೆ ಪೆಟ್ಟು ಬೀಳುತ್ತಿದೆ ಎಂದು ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.

ಶ್ರೀ ಮುರುಘರಾಜೇಂದ್ರ ಮಠದಲ್ಲಿ ಗುರುವಾರ ನಡೆದ ಮೂವತ್ಮೂರನೇ ವರ್ಷದ ಹತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.

ಸತಿ-ಪತಿಗಳ ಜೀವನ ಕೊನೆಯ ತನಕ ಇರುತ್ತದೆ. ಹೆಂಡತಿಯನ್ನು ಸೇವಕಿಯಾಗಿ ನೋ ಡುವ ಮನೋ ಭಾವದಿಂದ ಪತಿ ಹೊರಬರಬೇಕು. ಸಂಸಾರದಲ್ಲಿ ಪ್ರತಿಷ್ಠೆ ಇಣುಕಿ ಹಾಕಿದಾಗ ಜೀವನ ಕೆಡುತ್ತದೆ. ಮನಸ್ಸಿಗೆ ನೋವಾಗುವ ಪ್ರಸಂಗಗಳು ಘಟಿಸಬಾರದು. ದ್ವೇಷದ ಜಾಗದಲ್ಲಿ ಪ್ರೀತಿ ಅರಳಬೇಕು. ಅತ್ತೆ – ಮಾವ – ಸೊಸೆ ಮಧ್ಯೆ ಪ್ರೀತಿ ವಾತ್ಸಲ್ಯ ಇರಬೇಕು. ಹಾಗಾದಾಗ ಸಂಸಾರದ ಹಾದಿ ಸುಗಮವಾಗಿರಲು ಸಾಧ್ಯ ಎಂದರು.

ಶ್ರೀ ಬಸವ ಪ್ರಸಾದ ಸ್ವಾಮಿಗಳು ಮಾತನಾಡಿ, ಚಿತ್ರದುರ್ಗ ನಗರವು ಐತಿಹಾಸಿಕವಾದುದು. ಅತ್ಯಂತ ಪ್ರಾಚೀನ ಪರಂಪರೆ ಹೊಂದಿರುವ  ಶ್ರೀಮಠವು ಅಂತರರಾಷ್ಟ್ರೀಯ ಖ್ಯಾತಿ ಪಡೆದಿದೆ. ಇದೊಂದು ತಾಯಿ ಹೃದಯದ ನೆಲೆ. ನೂರಾರು ಸಾಧಕರ ನೆಲೆವೀಡು. ಇಲ್ಲಿ ನಡೆಯುತ್ತಿರುವ ಸಾಮೂಹಿಕ ಕಲ್ಯಾಣ ಮಹೋತ್ಸವ ವಿಶ್ವ ದಾಖಲೆಯಾಗಿದೆ. ಶ್ರೀಮಠಕ್ಕೆ ಒದಗಿರುವ ಎಡರು ತೊಡರುಗಳು ಆದಷ್ಟು ಬೇಗ ನಿವಾರಣೆಯಾಗಲಿ. ನೂತನ ವಧು-ವರರಲ್ಲಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಇಟ್ಟುಕೊಳ್ಳುವತ್ತ ಕಾಳಜಿ ಇರಲಿ. ದುಶ್ಚಟಗಳಿಂದ ದೂರವಿರಿ. ಉತ್ತಮ ವಿಚಾರಗಳು ನಿಮ್ಮೊಳಗೆ ಸದಾ ಇರಲಿ ಎಂದು ಹಾರೈಸಿದರು.

ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮಿಗಳು ಮಾತನಾಡಿ, ಮಾನವನ ಬದುಕು ಅರಳಬೇಕಿದೆ. ಗೃಹಸ್ಥಾಶ್ರಮ ಪವಿತ್ರವಾದುದು. ಇಂದಿನ ಯುವಪೀಳಿಗೆ ದುಶ್ಚಟಗಳಿಗೆ ದಾಸರಾಗದೆ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕು. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಬೇಕೆಂದರು.

ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮಿಗಳು ವೇದಿಕೆಯಲ್ಲಿದ್ದರು. ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಚಿತ್ರದುರ್ಗದ
ಶ್ರೀ ಬಸವ ಮುರುಘೇಂದ್ರ ಸ್ವಾಮಿಗಳು,
ಈಚಲ ನಾಗೇನಹಳ್ಳಿಯ ಶ್ರೀ ಗೋವಿಂದ ಸ್ವಾಮಿಗಳು, ಪೈಲ್ವಾನ್ ತಿಪ್ಪೇಸ್ವಾಮಿ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ತೋಟಪ್ಪ ಉತ್ತಂಗಿ ಸಂಗಡಿಗರು ಪ್ರಾರ್ಥಿಸಿದರು. ಟಿ.ಪಿ. ಜ್ಞಾನಮೂರ್ತಿ ಸ್ವಾಗತಿಸಿದರು. ಪ್ರಕಾಶ ದೇವರು ನಿರೂಪಿಸಿದರು.

error: Content is protected !!