ಯುಪಿಎಸ್‌ಸಿ ಟಾಪರ್‌ ಸೌಭಾಗ್ಯ ಬೀಳಗಿಮಠ ಅವರಿಗೆ ಸಿದ್ಧಗಂಗಾ ಸಂಸ್ಥೆ ಅಭಿನಂದನೆ

ಯುಪಿಎಸ್‌ಸಿ ಟಾಪರ್‌ ಸೌಭಾಗ್ಯ ಬೀಳಗಿಮಠ ಅವರಿಗೆ ಸಿದ್ಧಗಂಗಾ ಸಂಸ್ಥೆ ಅಭಿನಂದನೆ

ದಾವಣಗೆರೆ, ಏ. 17 – ನಗರದ ಸಿದ್ಧಗಂಗಾ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಸೌಭಾಗ್ಯ ಬೀಳಗಿಮಠ್ ಅವರು ಯುಪಿಎಸ್‌ಸಿಯಲ್ಲಿ ರಾಷ್ಟ್ರಮಟ್ಟದಲ್ಲಿ 101 ನೇ ರ‍್ಯಾಂಕ್ , ರಾಜ್ಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ಸಿದ್ಧಗಂಗಾ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲ್ಯಾಘಿಸಿ ಅಭಿನಂದಿಸಲು ಇಂದು ಸಂಜೆ ಸಂಸ್ಥೆಯ ಆವಣದಲ್ಲಿ ಸಮಾರಂಭ ಏರ್ಪಡಿಸಲಾಗಿತ್ತು. ಶಾಲಾ-ಕಾಲೇಜಿನ ಸಿಬ್ಬಂದಿ ವರ್ಗದವರು ಮತ್ತು ಪಿಯುಸಿ ಮಕ್ಕಳು ಸೌಭಾಗ್ಯ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಸೌಭಾಗ್ಯ ಅವರ ತಂದೆ ಶರಣಯ್ಯ ಸ್ವಾಮಿ ಮತ್ತು ತಾಯಿ ಶರಣಮ್ಮ   ದಂಪತಿಯಲ್ಲದೇ, ಧಾರವಾಡದಲ್ಲಿ ಅವರಿಗೆ ಮಾರ್ಗದರ್ಶನ ನೀಡಿದ ಅಶ್ವಿನಿ ದಂಪತಿ ಜೊತೆಗಿದ್ದರು.

ಕಿರಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸೌಭಾಗ್ಯ, ಶ್ರದ್ಧೆ ಮತ್ತು ಗುರಿ ಇದ್ದರೆ ಯಾವುದೂ ಅಸಾಧ್ಯವಲ್ಲ. ಗುರಿ ದೊಡ್ಡದಿರಲಿ, ಗುರಿ ತಲುಪುವಲ್ಲಿ ಅಚಲತೆ ಇರಲಿ ಎಂದರು. 

ತಂದೆ ಶರಣಯ್ಯ ಮಾತನಾಡಿ, ಮಧ್ಯಮ ವರ್ಗದ ನಮಗೆ ಸಿದ್ಧಗಂಗಾ ಸಂಸ್ಥೆ ಉಚಿತ ಶಿಕ್ಷಣ ನೀಡಿ ಸಹಾಯ ಮಾಡಿದೆ. ಅದಕ್ಕೆ ನಾನು ಋಣಿ ಎಂದರು. ನಿಮ್ಮಲ್ಲೂ ಅನೇಕರು ಸಾಧನೆಯ ಹಾದಿಯಲ್ಲಿದ್ದೀರಿ. ನಿಮ್ಮ ಕನಸುಗಳು ನನಸಾಗಲಿ ಎಂದು ಮಾರ್ಗದರ್ಶಿ ಅಶ್ವಿನಿ ಅವರು ಶುಭ ಹಾರೈಸಿದರು.

ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್‌ ಡಿಸೌಜ ಅವರು ಸೌಭಾಗ್ಯ, ಅಶ್ವಿನಿ ದಂಪತಿ, ಶರಣಯ್ಯ ದಂಪತಿಗಳನ್ನು ಸನ್ಮಾನಿಸಿದರು. 

ಡಾ. ಜಯಂತ್‌ ಅವರು ತಮ್ಮ ಸಂಸ್ಥೆಯ ವಿದ್ಯಾರ್ಥಿನಿಯ ಸಾಧನೆಯನ್ನು ಹೆಮ್ಮೆಯಿಂದ ಕಿರಿಯ ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ಸೌಭಾಗ್ಯ ಅವರ ಕಾಲೇಜಿನ ದಿನಗಳನ್ನು ಮೆಲುಕು ಹಾಕಿದರು. 

ಪ್ರಾಚಾರ್ಯರಾದ ವಾಣಿಶ್ರೀ, ಸಂಸ್ಥೆಯ ಕಾರ್ಯ ದರ್ಶಿ ಡಿ. ಎಸ್.‌ ಹೇಮಂತ್‌ ಮತ್ತು ಎಲ್ಲಾ ಉಪನ್ಯಾಸಕರು ಸೌಭಾಗ್ಯ ಅವರ ಸಾಧನೆಯನ್ನು ಅಭಿನಂದಿಸಿ ಹರಸಿದರು.

error: Content is protected !!