ದಾವಣಗೆರೆ ಏ 29- ಭಾರತ ದೇಶ ಅಷ್ಟೇ ಅಲ್ಲ, ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿದೆ ಎ೦ದು ಸಂಸದ ಜಿ. ಎಂ.ಸಿದ್ದೇಶ್ವರ ಹೇಳಿದರು.
ಇಂದಿಲ್ಲಿ ಮೋದಿ ಅವರ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ನವರು ನಮ್ಮ ಬಗ್ಗೆ ಇಲ್ಲ ಸಲ್ಲದ ಆಪಾದನೆ ಮಾಡುತ್ತಲೇ ಬಂದಿದ್ದಾರೆ. ಅವರ ಆಪಾದನೆ ನಮ್ಮ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ. ಹೀಗಾಗಿ ಕಳೆದ 20 ವರ್ಷಗಳಿಂದ ನಾನು ಈ ಕ್ಷೇತ್ರದ ಸಂಸದನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ನನಗೆ ಆಡಳಿತ ಗೊತ್ತಿಲ್ಲ, ಪಾನ್ ಪರಾಗ್ ತಯಾರಿಸಿ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಉದ್ಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ ಅವರೂ ಸಹ ಪಾನ್ ಪರಾಗ್ ತಯಾರಿಕೆಯಲ್ಲಿ ಮಗ್ನನಾಗಿರುವುದು ಎಷ್ಟು ಸಮಂಜಸ ಎಂದು ಸಿದ್ದೇಶ್ವರ ಪ್ರಶ್ನಿಸಿದರು.
ಮಹಿಳೆ ಅಡುಗೆ ಮನೆಗೆ ಸೀಮಿತ ಎಂದು ಬಿಂಬಿಸಿರುವ ಕಾಂಗ್ರೆಸ್ ನವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದೇಶ್ವರ ಅವರು, ತಮ್ಮ ಪತ್ನಿ ಕಳೆದ 20 ವರ್ಷ ರಾಜಕೀಯದ ಅನುಭವ ಹೊಂದಿದ್ದಾರೆ. ನಮ್ಮ ತಂದೆಯವರು ಸೇರಿದಂತೆ ನನ್ನೊಂದಿಗೆ ಪ್ರತಿ ಹಂತದಲ್ಲೂ ರಾಜಕೀಯದ ಏರುಪೇರುಗಳನ್ನು ಕಂಡಿದ್ದಾರೆ.
ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನಮ್ಮ (ಪತ್ನಿಯ) ಅಭ್ಯರ್ಥಿಯು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ ಸಿದ್ದೇಶ್ವರ ಅವರು, ಕಾಂಗ್ರೆಸ್ ಅಭ್ಯರ್ಥಿ ದಂತ ವೈದ್ಯರು, ಆದರೆ ರಾಜಕೀಯ ಅನುಭವದ ಕೊರತೆ ಇದೆ ಎಂದು ಲೇವಡಿ ಮಾಡಿದರು.
ನಾನು ಸಂಸದನಾದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಸುಮಾರು ಸಾವಿರಾರು ಕೋಟಿ ರೂ. ಗಳ ಅನುದಾನ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ನಾವುಗಳು ನರೇಂದ್ರ ಮೋದಿಯವರ ಸಾರಥ್ಯದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಹಾಗಾದರೆ ಅವರು ರಾಹುಲ್ ಗಾಂಧಿಯವರನ್ನು ಬಿಂಬಿಸಲಿ ಎಂದು ಪ್ರಶ್ನೆ ಮಾಡಿದರು.