ಪರೋಪಕಾರಿ ಜೀವನ ಸಾಗಿಸಿ

ಪರೋಪಕಾರಿ ಜೀವನ ಸಾಗಿಸಿ

ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಚಿತ್ರದುರ್ಗ, ಮೇ 11 – ಅನಂತ ಜಾತಿಯ ಮರಗಳು ಹಣ್ಣನ್ನು ಕೊಡುತ್ತಾ ಪರೋಪಕಾರ ಮಾಡುತ್ತಿವೆ. ಸಮಾಜಕ್ಕೆ ಹಸು, ಎಮ್ಮೆ, ನದಿಗಳು ಪರೋಪಕಾರಿಯಾಗಿರುವಂತೆ ಮನುಷ್ಯನು ಸಹ ಭೂಮಿ ಮೇಲೆ ಪರೋಪಕಾರಿಯಾಗಿ ನೆಮ್ಮದಿಯ ಜೀವನ ಸಾಗಿಸಬೇಕು ಎಂದು ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.

ಶ್ರೀ ಮುರುಘರಾಜೇಂದ್ರ ಮಠದಲ್ಲಿ ಮೊನ್ನೆ ನಡೆದ ಮುವತ್ಮೂರನೇ ವರ್ಷದ ಐದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸತಿ – ಪತಿಗಳೊಂದಾದ ಭಕ್ತಿ ಶಿವಂಗೆ ಹಿತವಾಗಿರುತ್ತದೆ. ದಾಂಪತ್ಯದಲ್ಲಿ ಬಿರುಕು ಬರಬಾರದು. ಅದುವೇ ಆದರ್ಶ ಬದುಕು ಎನಿಸಿಕೊಳ್ಳುವುದು ಎಂದು ಶ್ರೀಗಳು ಪ್ರತಿಪಾದಿಸಿದರು.

ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಲಿಂ. ಮಲ್ಲಿಕಾರ್ಜುನ ಶ್ರೀಗಳು 17 ನೇ ಜಗದ್ಗುರುಗಳಾಗಿ ಶ್ರೀಮಠವನ್ನು ಮುನ್ನಡೆಸಿದರು. ಮಠದ ಪಕ್ಕದ ತೆಂಗಿನ ತೋಟವನ್ನು ಅಭಿವೃದ್ಧಿ ಪಡಿಸಿದರು. ಶ್ರೀಗಳು ತುಂಬಾ ಸಾತ್ವಿಕರು ನಿಸ್ವಾರ್ಥಿಗಳು. ಶ್ರೀಮಠವು ಅನುಭವ ಮಂಟಪವನ್ನು ನಿರ್ಮಿಸಿ ಸರ್ವಸಮಾಜಗಳು ಸಾವಿರಾರು ಜನರಿಗೆ ಪ್ರತಿನಿತ್ಯ ಅನ್ನ ದಾಸೋಹವನ್ನು ಮಾಡುತ್ತಿದ್ದು, ಪ್ರತಿ ತಿಂಗಳು ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ಏರ್ಪಡಿಸಿ ಎಲ್ಲ ವರ್ಗದವರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ವಿವಾಹಗಳನ್ನು ನಡೆಸಿಕೊಂಡು ಬರುತ್ತಿರುವುದು ಸಾಮಾಜಿಕ ಕಳಕಳಿಯ ಧ್ಯೋತಕವಾಗಿದೆ ಎಂದು ನುಡಿದರು.

ಶ್ರೀ ಬಸವ ನಾಗಿದೇವ ಸ್ವಾಮಿಗಳು ಮಾತನಾಡಿ, ಇನ್ನೊಬ್ಬರಿಗೆ ಕೇಡನ್ನು ಬಯಸದ ದಾರಿಯಲ್ಲಿ ಸಾಗಬೇಕು. ಹಿಂದೆ ನಾವು ಒಳ್ಳೆಯದನ್ನು ಮಾಡಿದರೆ ಇಂದು ಅದರ ಫಲವನ್ನು ಉಣ್ಣುತ್ತೇವೆ. ನಾವು ಯಾವುದೇ ದುರ್ಬುದ್ಧಿಗೆ ಒಳಗಾಗಬಾರದು. ಅಂತಹ ಗುಣಗಳು ಬರಬಾರದು ಎಂದರು.

ಶ್ರೀ ಬಸವ ಬೀರೇಶ್ವರ ಸ್ವಾಮಿಗಳು, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರಿದ್ದರು.

ಇದಕ್ಕು ಮುನ್ನ ಶ್ರೀ ಜಯವಿಭವ ಮುರುಘ ರಾಜೇಂದ್ರ ಸ್ವಾಮೀಜಿಯವರ ಸ್ಮರಣೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜ್ಯರು ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ 10 ಜೋಡಿಗಳ ವಿವಾಹ ನೆರವೇರಿತು. ಉಮೇಶ್ ಪತ್ತಾರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವೀರಭದ್ರಯ್ಯ ಸ್ವಾಗತಿಸಿದರು. ಚಿನ್ಮಯಿ ದೇವರು ನಿರೂಪಿಸಿದರು.

error: Content is protected !!