ದಾವಣಗೆರೆ, ಮಾ.13- ಹೊಸಪೇಟೆ-ತೋರಣಗಲ್ ರಸ್ತೆಯಲ್ಲಿರುವ ಧರ್ಮಸಾಗರದ ಸಿದ್ಧಾರ್ಥ ಧ್ಯಾನ ಮಂದಿರದ ಸಭಾಂಗಣದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶಿವಪ್ಪ ಬಿ. ಮನಗೂಳಿ ಮಾತನಾಡುತ್ತಾ, ಅಂದಿನ ದಿನಗಳಲ್ಲಿನ ಕೆಲಸದ ಒತ್ತಡದ ನಡುವೆಯೂ ಸಾರ್ವಜನಿಕರಿಗೆ ನೀಡಿದ ಉತ್ತಮ ಸೇವೆಯನ್ನು ಸ್ಮರಿಸಿದರು. ರಘುನಾಥ ರಾವ್ ತಾಪ್ಸೆ, ಚಂದ್ರಶೇಖರ್ ಮಾತನಾಡುತ್ತಾ ನಿವೃತ್ತಿ ನಂತರ ರಾಜ್ಯದ ವಿವಿಧೆಡೆ ಹಂಚಿ ಹೋಗಿದ್ದ ನಿವೃತ್ತ ಸಹೋದ್ಯೋಗಿಗಳು ಈ ಕಾರ್ಯಕ್ರಮದ ಮೂಲಕ ಒಂದೆಡೆ ಕಲೆತಿರುವುದು ಸಂತಸ ತಂದಿದೆಯೆಂದರು.
ನಿವೃತ್ತ ಸಿಬ್ಬಂದಿಗಳಾದ ಗುರುನಾಥ, ಭಾನು, ಶಾರದಂಬಾಳ್, ದುರ್ಗಾಬಾಯಿ, ಚಿತ್ರಾನಾಯಕ್, ನಾಗರಾಜ್, ಜಾಲಿ ನಟರಾಜ್, ಅಶ್ವತ್ಥನಾರಾಯಣ, ರಾಮಾಂಜ ನೇಯ, ಕೆ.ಸಿದ್ದಪ್ಪ, ಕೋಡಿಹಳ್ಳಿ ನಿಂಗಪ್ಪ, ರುದ್ರಯ್ಯ, ರಾಮಸ್ವಾಮಿ, ಆನಂದರಾವ್, ಬಸವರಾಜ, ಮೊದಲಾದವರು ಈ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಯೋಜಕ ಜಿ.ತಿಪ್ಪಣ್ಣ ಅತಿಥಿಗಳನ್ನು ಸ್ವಾಗತಿಸಿದರು, ಚಂದ್ರಶೇಖರ್ ನಿರೂಪಿಸಿ, ವಂದಿಸಿದರು.