ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ 51ನೇ ವರ್ಷದ ಸಂಭ್ರಮ

ದೇಶದ ಆರ್ಥಿಕತೆಯನ್ನು ಆಮೂಲಾಗ್ರವಾಗಿ ಬದ ಲಾಯಿಸಿದ ಕೀರ್ತಿ 1969ರ ಜುಲೈ 19ರಂದು ಕೇಂದ್ರ ಸರ್ಕಾರದಿಂದ ಘೋಷ ಣೆಯಾದ `ಬ್ಯಾಂಕ್ ರಾಷ್ಟ್ರೀಕರಣ’ ಕ್ಕೆ ಸಲ್ಲುತ್ತದೆ. ಅಂದು ಪ್ರಧಾನಿಗಳಾಗಿದ್ದ ದಿ|| ಇಂದಿರಾಗಾಂಧಿಯವರು ತೆಗೆದುಕೊಂಡ ಐತಿಹಾಸಿಕ ನಿರ್ಧಾರದ  ಫಲವಾಗಿ ಬ್ಯಾಂಕಿಂಗ್ ಸೌಲಭ್ಯ ಮತ್ತು ಸೇವೆ ದೇಶದ ಮೂಲೆ ಮೂಲೆಗೆ ತಲುಪುವಂತಾಯಿತು. ಬ್ಯಾಂಕ್ ರಾಷ್ಟ್ರೀಕರಣವು ದೇಶದ ಲಕ್ಷೋ ಪಲಕ್ಷ ವಿದ್ಯಾವಂತ ತರುಣರಿಗೆ ಬ್ಯಾಂಕು ಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗಾವ ಕಾಶವನ್ನು ನೀಡಿತು. ಕೋಟ್ಯಾಂತರ ದೇಶವಾಸಿಗಳಿಗೆ ಸ್ವಉದ್ಯೋಗ ಕಲ್ಪಿಸಿಕೊ ಳ್ಳಲು ರಹದಾರಿಯನ್ನು ಕಲ್ಪಿಸಿತು. ವಿದ್ಯಾ ರ್ಥಿಗಳಿಗೆ ತಮ್ಮ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸಾಲ ಸೌಲಭ್ಯ ಸಿಗುವಂತಾಯಿತು. ವ್ಯವಹಾರಸ್ಥರಿಗೆ ತಮ್ಮ ವಹಿವಾಟುಗಳನ್ನು ಗಣನೀಯವಾಗಿ ವೃದ್ಧಿಸಿ ಕೊಳ್ಳಲು ಸಹಕಾರಿಯಾಯಿತು. ಯುವಕ ರಿಗೆ, ಮಹಿಳೆಯರಿಗೆ, ರೈತರಿಗೆ ಹೊಸ ಆಶಾಕಿರಣದ ಉದಯವಾಯಿತು. ಇದೆಲ್ಲ ಕ್ಕಿಂತ ಹೆಚ್ಚಾಗಿ ಜನಸಾಮಾನ್ಯರು ತಮ್ಮ ದುಡಿಮೆಯ ಉಳಿಕೆಯ ಪಾಲನ್ನು ಸರ್ಕಾರಿ ಒಡೆತನದ ಬ್ಯಾಂಕುಗಳಲ್ಲಿ ಇಟ್ಟರೆ ಹೆಚ್ಚು ಸುರಕ್ಷಿತ ಎನ್ನುವ ಆತ್ಮವಿಶ್ವಾಸ ಬರಲು ಸಾಧ್ಯವಾಯಿತು. 1969ರ ಜುಲೈ 19ರಂದು ದೇಶದ 14 ಪ್ರಮುಖ ಖಾಸಗಿ ಬ್ಯಾಂಕುಗಳನ್ನು ಹಾಗೂ ತರುವಾಯ 1980ರ ಏಪ್ರಿಲ್ 15ರಂದು ಮತ್ತೆ 6 ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಸರ್ಕಾರದ ಒಡೆತನಕ್ಕೆ ಸೇರ್ಪಡೆಗೊಳಿಸಲಾಯಿತು.

ಇಂದಿರಾಗಾಂಧಿಯವರ ನಿರ್ಧಾರ ಐತಿಹಾಸಿಕವಾದುದು : 1969 ರಲ್ಲಿ ಕೇಂದ್ರ ಸರ್ಕಾರದ ನೇತೃತ್ವವನ್ನು ವಹಿಸಿದ್ದ ಅಂದಿನ ಪ್ರಧಾನಿಗಳಾಗಿದ್ದಂತಹ ದಿ. ಶ್ರೀಮತಿ ಇಂದಿರಾ ಗಾಂಧಿಯವರ ಬ್ಯಾಂಕ್ ರಾಷ್ಟ್ರೀಕರಣದ ಧೀರೋದಾತ್ತ ನಿರ್ಧಾರ ವನ್ನು ಯಾರಾದರೂ ಮೆಚ್ಚಲೇಬೇಕಾದದ್ದು. ಏಕೆಂದರೆ ಆ ಸಂದರ್ಭದಲ್ಲಿ ಖಾಸಗಿ ಬ್ಯಾಂಕುಗಳು ಬೃಹತ್ ಮತ್ತು ಪ್ರಭಾವಿ ಬಂಡವಾಳಶಾಹಿಗಳ ಬಿಗಿಮುಷ್ಠಿಯಲ್ಲಿ ದ್ದವು. ಟಾಟಾ ಕುಟುಂಬವು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವನ್ನು, ಬಿರ್ಲಾ ಕುಟುಂಬವು ಯುಕೋ ಬ್ಯಾಂಕನ್ನು, ದಾಲ್‍ ಚಂದ್‌, ಹೀರಾಚಂದ್ ಕುಟುಂಬವು ಬ್ಯಾಂಕ್ ಆಫ್ ಬರೋಡಾವನ್ನು, ಚೆಟ್ಟಿ ಯಾರ್ ಕುಟುಂಬವು ಇಂಡಿಯನ್ ಬ್ಯಾಂಕನ್ನು, ಮಣಿಪಾಲದ ಪೈ ಕುಟುಂಬವು ಸಿಂಡಿಕೇಟ್ ಬ್ಯಾಂಕನ್ನು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯವು ವಿಜಯಾ ಬ್ಯಾಂಕನ್ನು ಸ್ಥಾಪಿಸಿ ತಮ್ಮ ಕುಟುಂಬದ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಅವರೆಲ್ಲರ ತೀವ್ರ ವಿರೋಧವನ್ನು ಲೆಕ್ಕಿಸದೇ  ಇಂದಿರಾ ಗಾಂಧಿಯವರು ತೆಗೆದುಕೊಂಡ ಬ್ಯಾಂಕ್ ರಾಷ್ಟ್ರೀಕರಣದ ನಿರ್ಧಾರ ನಿಜಕ್ಕೂ ಐತಿಹಾಸಿಕವಾದುದು. ಇಡೀ ದೇಶ ಈ ನಿರ್ಧಾರವನ್ನು ಬೆಂಬಲಿಸಿತು ಮತ್ತು ಕೊಂ ಡಾಡಿತು. ಜಾಗತಿಕ ಮಟ್ಟದಲ್ಲೂ ಇದಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ದೇಶದ ಅತ್ಯಂತ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

ಬ್ಯಾಂಕ್ ರಾಷ್ಟ್ರೀಕರಣವು ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಸ್ವರೂಪವನ್ನೇ ಆಮೂಲಾಗ್ರವಾಗಿ ಬದಲಾಯಿಸಿತು. ಗ್ರಾಮೀಣ ಭಾಗದಲ್ಲಿ ಸಾವಿರಾರು ಬ್ಯಾಂಕ್ ಶಾಖೆಗಳು ತೆರೆಯಲ್ಪಟ್ಟವು. ದೇಶದ ಜನತೆಯ ಉಳಿತಾಯದ ಹಣಕ್ಕೆ ಭದ್ರತೆ ಮತ್ತು ಸುರಕ್ಷೆ ಸಿಕ್ಕಿತು. ಖಾಸಗಿ ಬ್ಯಾಂಕು ಗಳಿಂದ ಸಾಲ ನೀಡುವಲ್ಲಿ ಯಾವ ಕ್ಷೇತ್ರಗ ಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತೋ ಅವು ಸಾಲ ವಿತರಣೆಯ ಆದ್ಯತಾ ವಲಯದ ಕ್ಷೇತ್ರಗಳಾಗಿ ಪರಿಗಣಿಸಲ್ಪಟ್ಟವು. ಕೃಷಿ, ಉದ್ಯೋಗ ಸೃಷ್ಠಿ, ಬಡತನ ನಿರ್ಮೂಲನೆ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆಗಳು ಮುಂತಾದ ವಲಯಗಳಿಗೆ ಬ್ಯಾಂಕುಗಳು ಹೆಚ್ಚು ಹೆಚ್ಚು ಸಾಲ ನೀಡಲು ಆರಂಭಿಸಿದವು.  ದೇಶದ ಆರ್ಥಿಕ ಬೆಳವಣಿ ಗೆಗೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಬಹುದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಲು ಆರಂಭಿಸಿದವು. 1975ರಲ್ಲಿ ಸರ್ಕಾರವು ಸುಗ್ರೀವಾಜ್ಞೆಯ  ಮೂಲಕ ಪ್ರಾಂತೀಯ  ಗ್ರಾಮೀಣ ಬ್ಯಾಂಕುಗಳನ್ನು (Regional Ruarl Bank) ಸ್ಥಾಪಿಸಿತು. 1982ರಲ್ಲಿ ನಬಾರ್ಡ್ (Nabarad) ಹಾಗೂ ಎಕ್ಸಿಮ್ (Exim) ಬ್ಯಾಂಕುಗಳ ಸ್ಥಾಪನೆಯಾಯಿತು. ಲೀಡ್‍ಬ್ಯಾಂಕ್ ವ್ಯವಸ್ಥೆ ಸಾಕಾರಗೊಂಡಿತು. ದತ್ತು ಗ್ರಾಮ ಯೋಜನೆ ಅಸ್ತಿತ್ವಕ್ಕೆ ಬಂದಿತು. ಹೀಗೆ ಹತ್ತು ಹಲವಾರು ಯೋಜನೆಗಳ ಮೂಲಕ ಹಣಕಾಸು ಸೇವಾ ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ಬ್ಯಾಂಕ್ ರಾಷ್ಟ್ರೀಕರಣವೇ ಮುನ್ನುಡಿಯಾಗಿತ್ತು ಎನ್ನುವುದು ಅತ್ಯಂತ ಗಮನಾರ್ಹ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ – ಬ್ಯಾಂಕ್ ರಾಷ್ಟ್ರೀಕರಣದ ಚಾಂಪಿ ಯನ್ : ರಾಷ್ಟ್ರೀಕರಣದ ರೂವಾರಿಗಳು ಎಂದು ನಾವು ಹೇಗೆ  ಇಂದಿರಾ ಗಾಂಧಿಯವರನ್ನು ಸ್ಮರಿಸುತ್ತೇವೆಯೋ ಅದೇ ರೀತಿಯಲ್ಲಿ ಬ್ಯಾಂಕ್ ರಾಷ್ಟ್ರೀಕರಣಕ್ಕಾಗಿ ಸುದೀರ್ಘವಾದ 2 ದಶಕಗಳ ಹೋರಾಟ ಮಾಡಿದ ಕೀರ್ತಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(AIBEA) ಕ್ಕೆ ಸಲ್ಲುತ್ತದೆ. 1946ರಲ್ಲಿ ಉದಯವಾದ ಈ ಸಂಘಟನೆ ಬ್ಯಾಂಕ್ ರಾಷ್ಟ್ರೀಕರಣದ ವಿಷಯವನ್ನು ಎತ್ತಿಕೊಂಡು, ಆ ಕುರಿತಾಗಿ ಬೇಡಿಕೆಯಿಟ್ಟು, ಅದನ್ನು ಸಾಕಾರಗೊಳಿಸಲು ಆಂದೋಲನ ವನ್ನು ಆರಂಭಿಸಿ, ಹೋರಾಟ ಮಾಡಿದ ಏಕೈಕ ಬ್ಯಾಂಕ್ ಕಾರ್ಮಿಕ ಸಂಘಟನೆ. ಆದ ಕಾರಣ “ಬ್ಯಾಂಕ್ ರಾಷ್ಟ್ರೀಕರಣದ ಚಾಂಪಿಯನ್” ಎಂಬ ಹೆಗ್ಗಳಿಕೆಗೆ  “ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ’ (AIBEA) ಪಾತ್ರವಾಯಿತು. ಸಂಘದ ಸದಸ್ಯರು, ಹಿತೈಷಿಗಳು, ಎಡಪಂಥೀಯ ಹೋರಾಟಗಾರರು, ಆರ್ಥಿಕ ತಜ್ಞರು, ಪತ್ರಕರ್ತರು, ಪುರೋಗಾಮಿ ಗುಂಪುಗಳು, ಜನಪರ ಸಂಘಟನೆಗಳು, ಎಐಟಿಯುಸಿ ನೇತೃತ್ವದ ಕಾರ್ಮಿಕ ವರ್ಗ ಹೀಗೆ ಹತ್ತು, ಹಲವು ಸಂಘ-ಸಂಸ್ಥೆಗಳ ಸಹಕಾರ ದೊಂದಿಗೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಚಳುವಳಿಯನ್ನು ನಡೆಸಿತ್ತು. ಎಐಬಿಇಎ ಸದಸ್ಯರು ಸಂಸತ್ತಿನ ಹೊರಗೆ ಪ್ರತಿಭಟನೆ, ಚಳುವಳಿಗಳನ್ನು ನಡೆಸುತ್ತಿದ್ದರೆ ಅತ್ತ ಎಐಬಿಇಎನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ 1957ರಿಂದ 1967ರವರೆಗೆ ಸಂಸತ್ ಸದಸ್ಯರಾಗಿದ್ದ ದಿ|| ಕಾಂ|| ಪ್ರಭಾತ್ ಕಾರ್‍ರವರು ಸಂಸತ್ತಿನ ಒಳಗೆ ಬ್ಯಾಂಕ್ ರಾಷ್ಟ್ರೀಕರಣದ ಅಗತ್ಯವನ್ನು ಸರ್ಕಾರಕ್ಕೆ ಮನದಟ್ಟು ಮಾಡುತ್ತಿದ್ದರು. ಇದರ ನಡುವೆ 1947 ಮತ್ತು 1969ರ ಮಧ್ಯಕಾಲದಲ್ಲಿ ಸಾಲು ಸಾಲಾಗಿ 477 ಖಾಸಗೀ ಬ್ಯಾಂಕುಗಳು ಮುಚ್ಚಲ್ಪಟ್ಟವು. ಇದು ಆತಂಕಕ್ಕೆ ಮತ್ತು ಅನುಮಾನಕ್ಕೆ ಕಾರಣವಾಯಿತು. ಖಾಸಗಿ ವ್ಯಕ್ತಿಗಳು ಸ್ಥಾಪಿಸುವ ಬ್ಯಾಂಕುಗಳು ಅವರ ಖಾಸಗಿ ವ್ಯವಹಾರಗಳಿಗೆ ಮಾತ್ರ ಬಳಕೆಯಾಗುತ್ತಿದ್ದವೇ ವಿನಃ ದೇಶದ ಏಳಿಗೆಗಾಗಿ ಅಲ್ಲ ಎನ್ನುವುದನ್ನು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಕೇಂದ್ರ ಸರ್ಕಾರಕ್ಕೆ ಅರ್ಥ ಮಾಡಿಸಿತು. ಇದೆಲ್ಲದರ ಫಲವಾಗಿ 1969ರಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು.

ಬ್ಯಾಂಕುಗಳು ಅಂದು-ಇಂದು 1969-2020 : 1969ರಲ್ಲಿ ಒಂದು ಲಕ್ಷದಷ್ಟಿದ್ದ ಬ್ಯಾಂಕ್ ಉದ್ಯೋಗಿಗಳ ಸಂಖ್ಯೆ ಇಂದು 1 ಮಿಲಿಯನ್ ಗಡಿ ಮುಟ್ಟಿದೆ.  8200ರಷ್ಟು ಇದ್ದ ಬ್ಯಾಂಕ್ ಶಾಖೆಗಳ ಸಂಖ್ಯೆ ಇಂದು 1,50,000ದ ಗಡಿ ದಾಟಿದೆ. ರೂ.5000 ಕೋಟಿಯಷ್ಟು ಇದ್ದ ಠೇವಣಿಯ ಪ್ರಮಾಣ ಇಂದು ರೂ. 138.50 ಲಕ್ಷ ಕೋಟಿ ಯಾಗಿದೆ. ರೂ.3500 ಕೋಟಿಯಷ್ಟು ಇದ್ದ ಸಾಲ ನೀಡುವಿಕೆಯ ಪ್ರಮಾಣ ಇಂದು ರೂ.101.83 ಲಕ್ಷ ಕೋಟಿಯ ಷ್ಟಾಗಿದೆ. 1969ರ ಪೂರ್ವದಲ್ಲಿ ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ಇರದೇ ಇದ್ದಂತಹ ಬ್ಯಾಂಕ್ ಶಾಖೆಗಳು ಇಂದು ಆ ಭಾಗದಲ್ಲಿ 52463 ಶಾಖೆಗಳು ಇವೆ. ಆದ್ಯತಾ ವಲಯಕ್ಕೆ ಸಾಲವನ್ನೇ ನೀಡಿರದಿದ್ದ ಬ್ಯಾಂಕುಗಳು ಇಂದು ಒಟ್ಟು ಸಾಲ ನೀಡುವಿಕೆಯಲ್ಲಿ  ಶೇ. 40ರಷ್ಟು ಸಾಲವನ್ನು ಆ ವಲಯಕ್ಕೆ ಮೀಸಲಾಗಿರಿಸುತ್ತಿವೆ. ಈ ಅಂಕಿ ಅಂಶಗಳ ಮೂಲಕ ನಾವು ಬ್ಯಾಂಕ್ ರಾಷ್ಟ್ರೀಕರಣದ ಮಹತ್ವವನ್ನು ಅರಿಯ ಬಹುದಾಗಿದೆ. ಬ್ಯಾಂಕುಗಳ ಮುಖವನ್ನೇ ನೋಡದ ಗ್ರಾಮೀಣ ಪ್ರದೇಶದ ಜನರು, ರೈತರು, ಕುಶಲಕರ್ಮಿಗಳು, ನಿರುದ್ಯೋಗಿ ವಿದ್ಯಾ ವಂತರು, ಅನಕ್ಷರಸ್ಥರು, ಆರ್ಥಿಕ ದುರ್ಬಲರು, ಕಾರ್ಮಿಕರು, ದಿನಗೂಲಿ ಗಳು, ವಿದ್ಯಾರ್ಥಿಗಳು, ಮಹಿಳೆಯರು, ಶೋಷಿತರು,
ದಮನಿತರು ಇಂದು ಹೆಮ್ಮೆಯಿಂದ ಬ್ಯಾಂಕಿಂಗ್ ಸೌಲಭ್ಯವನ್ನು ಅನುಭವಿಸುವಂತಾಗಿದೆ ಮತ್ತು ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. “ನಮ್ಮ ದೇಶ-ನಮ್ಮ ಬ್ಯಾಂಕು” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ. ಕ್ಲಾಸ್ ಬ್ಯಾಂಕಿಂಗ್ ವ್ಯವಸ್ಥೆ ಮಾಸ್ ಬ್ಯಾಂಕಿಂಗ್ ವ್ಯವಸ್ಥೆಯಾಗಿ ಪರಿವರ್ತಿತವಾಯಿತು. ಇದು ಬ್ಯಾಂಕ್ ರಾಷ್ಟ್ರೀಕರಣದ ಅಪ್ರತಿಮ ಸಾಧನೆ.

ಸರ್ಕಾರಿ ಬ್ಯಾಂಕುಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು : ಪ್ರಸ್ತುತ ನಮ್ಮ ದೇಶದ ರಾಷ್ಟ್ರೀಕೃತ ಬ್ಯಾಂಕಿಂಗ್ ಕ್ಷೇತ್ರವು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಯಾವ ಕಾಂಗ್ರೆಸ್ ನೇತೃತ್ವದ ಸರ್ಕಾರ 1969ರಲ್ಲಿ ಬ್ಯಾಂಕ್ ರಾಷ್ಟ್ರೀಕರಣ ಮಾಡಿತ್ತೋ ಅದೇ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರ 1991ರ ನಂತರದ ವರ್ಷಗಳಲ್ಲಿ ಖಾಸಗೀಕರಣ, ಜಾಗತೀಕರಣ, ಉದಾರೀಕರಣ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯ ಹೆಸರಿನಲ್ಲಿ “ರಾಷ್ಟ್ರೀಕರಣ” ನೀತಿಯನ್ನೇ ಬುಡ ಮೇಲಾಗಿಸುವ ಕೆಲಸಕ್ಕೆ ಅಡಿಗಲ್ಲು ಹಾಕಿದ್ದು ದುರಂತ ಎಂತಲೇ ಹೇಳಬಹುದು. 1991ರ ನಂತರದ ಕಾಲದಲ್ಲಿ ಬಂದಂತಹ ಎಲ್ಲ ಸರ್ಕಾರಗಳು ಬ್ಯಾಂಕ್ ರಾಷ್ಟ್ರೀಕರಣ ನೀತಿಯನ್ನು ಎಷ್ಟು ಸಾಧ್ಯವೋ ಅಷ್ಟು ದುರ್ಬಲಗೊಳಿಸುತ್ತಿವೆ. ಇದು ಖಂಡಿತವಾಗಿಯೂ ಆಕ್ಷೇಪಣೀಯ. ಸರ್ಕಾರಿ ಒಡೆತನದ ಬ್ಯಾಂಕುಗಳಲ್ಲಿನ ಸರ್ಕಾರದ ಬಂಡವಾಳ ಹಿಂತೆಗೆತ, ಬ್ಯಾಂಕುಗಳಲ್ಲಿ ವಿದೇಶೀ ಬಂಡವಾಳದ ಒಳಹರಿವು, ಖಾಸಗೀಕರಣದ ಹುನ್ನಾರ, ಬ್ಯಾಂಕುಗಳ ಅವೈಜ್ಞಾನಿಕ ವಿಲೀನ ಪ್ರಕ್ರಿಯೆ, ಬ್ಯಾಂಕುಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಯನ್ನು ಮಾಡದೇ ಇರುವುದು. ಹೊಸ ತಲೆಮಾರಿನ ಗ್ರಾಹಕರ ಅಗತ್ಯಗಳಿಗೆ ತಕ್ಕನಾಗಿ ಸೇವೆಯನ್ನು ಮೇಲ್ದರ್ಜೆಗೆ ಏರಿಸಲು ಅನಗತ್ಯ ವಿಳಂಬ ಮಾಡುತ್ತಿರುವುದು, ಖಾಸಗೀ ಕಂಪನಿಗಳಿಗೆ ಬ್ಯಾಂಕ್‍ಗಳನ್ನು ತೆರೆಯಲು ಅನುಮತಿ ನೀಡುತ್ತಿರುವುದು, ಅಂಚೆ ಸೇವೆಯಲ್ಲಿ ವಿಫಲತೆಯನ್ನು ಕಾಣುತ್ತಿರುವ ಅಂಚೆ ಕಛೇರಿಗಳಿಗೆ ಬ್ಯಾಂಕನ್ನು ಆರಂಭಿಸಲು ಅನುಮತಿ ನೀಡಿರುವುದು ಮುಂತಾದ ಹತ್ತು ಹಲವು ರಾಷ್ಟ್ರೀಕರಣ ವಿರೋಧಿ ನೀತಿಯಿಂದಾಗಿ ಇಂದು ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿಂಗ್ ವ್ಯವಸ್ಥೆ ಜರ್ಝರಿತಗೊಂಡಿದೆ. ಇದರ ನಡುವೆ ವಸೂಲಾಗದ ಕೆಟ್ಟ ಸಾಲ(Bad Loans) ದ ಪ್ರಮಾಣ ಬೆಟ್ಟದಷ್ಟು ಬೆಳೆಯುತ್ತಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗುತ್ತಿದೆ.    

ಸಾಲ ವಸೂಲಾತಿಯು ಕ್ಲುಪ್ತ ಸಮಯದಲ್ಲಿ ಆಗದೇ ಹೋದಲ್ಲಿ ಬ್ಯಾಂಕಿನ ಅನುತ್ಪಾದಕ ಸಾಲದ (Non Performing Asset) ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ. ಇದರಿಂದ ಬ್ಯಾಂಕಿನ ಮೇಲೆ ಸಾರ್ವಜನಿಕರಿಗಿರುವ ವಿಶ್ವಾಸಾರ್ಹತೆ ಕುಂಠಿತಗೊಳ್ಳುತ್ತದೆ. 

2015ರವರೆಗೆ ಲಕ್ಷಾಂತರ ಕೋಟಿ ರೂಪಾಯಿಗಳ ಲಾಭವನ್ನು ಗಳಿಸುತ್ತಿದ್ದ ರಾಷ್ಟ್ರೀಕೃತ ಬ್ಯಾಂಕುಗಳು (2015ರಲ್ಲಿ ದೇಶದ ರಾಷ್ಟ್ರೀಕೃತ ಬ್ಯಾಂಕುಗಳ ಒಟ್ಟಾರೆ ನಿರ್ವಹಣಾ ಲಾಭ ರೂ. 137817-00 ಕೋಟಿಗಳಷ್ಟಿತ್ತು)ಒಮ್ಮಿಂದೊಮ್ಮೆಲೇ  ನಷ್ಟವನ್ನು ತೋರಿಸಲು ಆರಂಭಿಸಿದವು. ಇದಕ್ಕೆ ಕಾರಣ ದೇಶದ ಖಾಸಗೀ ಬೃಹತ್ ಬಂಡವಾಳಶಾಹಿಗಳು ತಾವು ತೆಗೆದುಕೊಂಡ ಕೋಟ್ಯಾಂತರ ರೂಪಾಯಿಗಳ ಸಾಲವನ್ನು ಉದ್ದೇಶಪೂರ್ವಕವಾಗಿ ಮರುಪಾವತಿ ಮಾಡದಿರುವುದು. ಸಾಲ ಮರುಪಾವತಿ ಮಾಡಲು ಸಮರ್ಥರಿರುವವರೇ ಸಾಲ ಮನ್ನಾ, ಬಡ್ಡಿ ಮನ್ನಾ ಮುಂತಾದ ಯೋಜನೆಗಳತ್ತ ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಬ್ಯಾಂಕುಗಳು ಹಾಗೂ ಸರ್ಕಾರಗಳು ಕಳೆದೊಂದು ದಶಕಗಳಲ್ಲಿ ಸುಮಾರು ರೂ. 627243 ಕೋಟಿಗಳಷ್ಟು ಪ್ರಮಾಣದ ಸಾಲವನ್ನು ಮನ್ನಾ ಮಾಡಿದ್ದಾರೆ. ಬ್ಯಾಂಕುಗಳು ಗಳಿಸುತ್ತಿರುವ ಲಕ್ಷಾಂತರ ಕೋಟಿ ರೂಪಾಯಿಗಳ ಲಾಭಾಂಶವನ್ನು ಖಾಸಗಿ ಬಂಡವಾಳಶಾಹಿಗಳು ಲೂಟಿ ಮಾಡುತ್ತಿದ್ದಾರೆ. 2019ರ ಮಾರ್ಚ್ ಅಂತ್ಯದ ಲೆಕ್ಕಪತ್ರದಲ್ಲಿ ದಾಖಲಾಗಿರುವಂತೆ 2018-19 ಒಂದೇ ಹಣಕಾಸು ವರ್ಷದಲ್ಲಿ ರೂ. 196849 ಕೋಟಿ ಸಾಲ ಮನ್ನಾ ಆಗಿದೆ. 

2009ರಲ್ಲಿ 6966 ಕೋಟಿಗಳು, 2010 ರಲ್ಲಿ 11185 ಕೋಟಿಗಳು, 2011 ರಲ್ಲಿ 17794 ಕೋಟಿಗಳು, 2012ರಲ್ಲಿ 15551 ಕೋಟಿಗಳು, 2013 ರಲ್ಲಿ 27013 ಕೋಟಿಗಳು, 2014 ರಲ್ಲಿ 32595 ಕೋಟಿಗಳು, 2015ರಲ್ಲಿ 49976 ಕೋಟಿಗಳು, 2016ರಲ್ಲಿ 59400 ಕೋಟಿಗಳು,2017ರಲ್ಲಿ 81684 ಕೋಟಿಗಳು, 2018ರಲ್ಲಿ 128230 ಕೋಟಿಗಳು, 2019ರಲ್ಲಿ 196849 ಕೋಟಿಗಳು ಹಾಗೂ ಒಟ್ಟಾರೆಯಾಗಿ 2009 ರಿಂದ 2019ರವರೆಗೆ ಒಟ್ಟು  627243 ಕೋಟಿ ರೂಪಾಯಿಗಳ ಸಾಲ ಮನ್ನಾ ಆಗಿದೆ.

ಆದರೆ ವಿಶೇಷತೆ ಎಂದರೆ ಈಗಲೂ ರಾಷ್ಟ್ರೀಕೃತ ಬ್ಯಾಂಕುಗಳು ಲಾಭವನ್ನೇ ದಾಖಲಿಸುತ್ತಿವೆ.  ಆದರೆ ವಸೂಲಾಗದ ಸಾಲವನ್ನು ಸರಿದೂಗಿಸಲು ಮೀಸಲು ನಿಧಿಯನ್ನು ತೆಗೆದಿರಿಸುತ್ತಿರುವುದೇ ನಷ್ಟವನ್ನು ದಾಖಲಿಸಲು ಕಾರಣವಾಗಿದೆ. 2019ರ ಮಾರ್ಚ್ ಅಂತ್ಯದಲ್ಲಿ ದಾಖಲಿಸಿದ ಲಾಭ ರೂ. 149804 ಕೋಟಿಗಳು. ವಸೂಲಾಗದ ಸಾಲಕ್ಕಾಗಿ ಮೀಸಲು ನಿಧಿ ತೆಗೆದಿರಿಸಿದ ಮೊತ್ತ ರೂ. 216410 ಕೋಟಿಗಳು. ಇದರ ಪರಿಣಾಮವಾಗಿ ಬ್ಯಾಂಕುಗಳು ದಾಖಲಿಸಿದ ನಿವ್ವಳ ನಷ್ಟ ರೂ. 66606 ಕೋಟಿಗಳು.

ಈ ಎಲ್ಲ  ಬೆಳವಣಿಗೆಗಳ  ವಿರುದ್ಧ 4 ಲಕ್ಷ ಬ್ಯಾಂಕ್ ಉದ್ಯೋಗಿಗಳ ಸದಸ್ಯತ್ವವನ್ನು ಹೊಂದಿರುವ ವಿಶ್ವದ ಅತೀ ದೊಡ್ಡ  ಬ್ಯಾಂಕ್ ಕಾರ್ಮಿಕ ಸಂಘಟನೆಯಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(AIBEA)  ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬರುತ್ತಿದೆ. “ಬ್ಯಾಂಕುಗಳು ಗಳಿಸುವ ಲಾಭವು ದೇಶದ ಜನರ ಕಲ್ಯಾಣಕ್ಕೆ ಬಳಕೆಯಾಗಬೇಕೇ ಹೊರತು ಖಾಸಗೀ ಕಂಪನಿಗಳ ಲೂಟಿಗಾಗಿ ಅಲ್ಲ” ಎನ್ನುವುದು ಸಂಘದ ಸ್ಪಷ್ಟವಾದ ಧ್ಯೇಯವಾಗಿದೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ತನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಹೆಚ್.ವೆಂಕಟಾಚಲಂ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಜಯ್ ಮಾಂಜ್ರೇಕರ್ ಅವರ ನೇತೃತ್ವದಲ್ಲಿ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಳಿಸುವುದಕ್ಕಾಗಿ ಹಲವಾರು ಹೋರಾಟಗಳನ್ನು ರೂಪಿಸುತ್ತಿದೆ. ಕೇಂದ್ರ ಸರ್ಕಾರವು ಸಾಲ ವಸೂಲಾತಿಗಾಗಿ ಕಠಿಣ ಕಾನೂನು ಕ್ರಮಗಳನ್ನು ರೂಪಿಸಬೇಕು, ಸಾಲ ಮರುಪಾವತಿ ಮಾಡದವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು, ಅವರ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು, ಅವರ ಆಸ್ತಿಗಳನ್ನು ಬ್ಯಾಂಕುಗಳು ಮುಟ್ಟುಗೋಲು ಹಾಕಿಕೊಳ್ಳಬೇಕು ಎನ್ನುವುದು ಹೋರಾಟದ ಪ್ರಮುಖ ಬೇಡಿಕೆಗಳಾಗಿವೆ.


ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ 51ನೇ ವರ್ಷದ ಸಂಭ್ರಮ - Janathavani – ಕೆ ರಾಘವೇಂದ್ರ ನಾಯರಿ, 
ಬ್ಯಾಂಕ್ ಕಾರ್ಮಿಕ ಮುಖಂಡರು, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ರಿ.),
ಮೊ. 98443 14543
[email protected]

error: Content is protected !!