ದೇವರ ಮೂರ್ತಿಗಳ ಮೆರವಣಿಗೆ ಸಂಬಂಧ ಗಲಾಟೆ

ನ್ಯಾಮತಿ ತಾಲ್ಲೂಕಿನಲ್ಲಿ ಘಟನೆ, ಗ್ರಾಮಸ್ಥರಿಂದ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

ನ್ಯಾಮತಿ, ಏ.4- ತಾಲ್ಲೂಕಿನ  ಕುರುವ ಗಡ್ಡೆ ರಾಮೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮಾದನಬಾವಿ ಗ್ರಾಮಸ್ಥರು ಬೀರಲಿಂಗೇಶ್ವರ ಸ್ವಾಮಿ, ರಂಗನಾಥ ಸ್ವಾಮಿ, ಮುರುಡಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಪಕ್ಕದ ಬಸವನಹಳ್ಳಿ ಗ್ರಾಮದ ಮುಖಾಂತರ ಮೆರವಣಿಗೆ ಮೂಲಕ ತೆರಳುವಾಗ ಎರಡೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ಕಲ್ಲು ತೂರಾಟ ನಡೆದಿದೆ.

ರಥೋತ್ಸವದ ನಂತರ ಮಾದನಬಾವಿ ಗ್ರಾಮಸ್ಥರು ಬಸವನಹಳ್ಳಿ ಮೂಲಕವೇ ಮರಳಿ ಬರುವುದು ವಾಡಿಕೆ. ಮಾದನಬಾವಿ ಗ್ರಾಮಸ್ಥರನ್ನು ತಡೆಯುವ ಸಲುವಾಗಿ ಬಸವನಹಳ್ಳಿ ಗ್ರಾಮಸ್ಥರು ಗುಂಪುಗೊಂಡಿದ್ದರಿಂದ ಎರಡೂ ಗ್ರಾಮಗಳಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ.

ಎರಡೂ ಗ್ರಾಮಗಳ ಮಧ್ಯೆ ದೇವರ ವಿಚಾರದಲ್ಲಿ ಪೂರ್ವದಿಂದ ತಕರಾರು ಇದೆ. `ಯುಗಾದಿ ಚಂದ್ರದರ್ಶನ ನಂತರ ಗಡ್ಡೆ ರಾಮೇಶ್ವರಕ್ಕೆ ಉತ್ಸವ ಮೂರ್ತಿಗಳನ್ನು ಬಸವನಹಳ್ಳಿ ಮೂಲಕ ತೆಗೆದುಕೊಂಡು ಹೋಗುತ್ತೇವೆ. ಆ ವಿಚಾರವಾಗಿ ಬಸವನಹಳ್ಳಿ ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ’ ಎಂದು ಮಾದನಬಾವಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಮಾದನಬಾವಿ ಗ್ರಾಮಸ್ಥರು ಗ್ರಾಮದ ಮೂಲಕ ತೆರಳುವಾಗ ಗಲಾಟೆ ಮಾಡಿದರು ಎಂದು ಬಸವನಹಳ್ಳಿ ಗ್ರಾಮಸ್ಥರು ಪ್ರತ್ಯಾರೋಪ ಮಾಡಿದ್ದಾರೆ.

ಭಾನುವಾರ ಗೋವಿನಕೋವಿ ಬಳಿ ಮಾದನಬಾವಿ ಶ್ರೀ ಬೀರಲಿಂಗೇಶ್ವರ ದೇವರನ್ನು ಪೊಲೀಸರೇ ಟ್ರ್ಯಾಕ್ಟರ್‍ಗಳ ಮೂಲಕ ಬಸವನಹಳ್ಳಿ ಮಾರ್ಗದಲ್ಲೇ ತೆಗೆದುಕೊಂಡು ಹೋಗಿ ಮಾದನಬಾವಿ ಗ್ರಾಮದ ದೇಗುಲಕ್ಕೆ ದೇವರನ್ನು ಒಪ್ಪಿಸಿದ್ದಾರೆ. 

ಬಸವನಹಳ್ಳಿ ಗ್ರಾಮದ ಜನರು ಬಸವನಹಳ್ಳಿ ಗ್ರಾಮಕ್ಕೆ ತೆರಳಿದರೆ ಮಾದನಬಾವಿ ಗ್ರಾಮದ ಜನರನ್ನು ಬಸವನಹಳ್ಳಿ ಗ್ರಾಮ ಹೊರತು ಪಡಿಸಿ ಬೇರೆ ಮಾರ್ಗವಾಗಿ ಹೋಗಿ ಎಂದು ಪೊಲೀಸರು ಸೂಚಿಸಿದ್ದಾರೆ. ಎರಡೂ ಗ್ರಾಮಗಳಲ್ಲಿ 144ನೇ ಸೆಕ್ಷನ್ ಜಾರಿಗೊಳಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್‍ಪಿ ರಾಮಗೊಂಡ ಬಿ. ಬಸರಗಿ, ಚನ್ನಗಿರಿ ಸಿಪಿಐ ಮಧು, ಹರಿಹರ ಸಿಪಿಐ ಸತೀಶ್, ಹೊನ್ನಾಳಿ ಎಸ್‍ಐ ಬಸವನಗೌಡ, ನ್ಯಾಮತಿ ಎಸ್‍ಐ ಪಿ.ಎಸ್. ರಮೇಶ್, ಹದಡಿ ಎಸ್‍ಐ ರೂಪಾ ತೆಂಬದ್ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

error: Content is protected !!