ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ

ಕೊಟ್ಟೂರು, ಮಾ.10- ನಮ್ಮ ರಾಜ್ಯದಲ್ಲಿ ಯಾವುದೇ ಬಿಜೆಪಿ ನಾಯಕರು ಪಕ್ಷ ತೊರೆದು  ಕಾಂಗ್ರೆಸ್‌ಗೆ ಹೋಗುತ್ತಾರೆಂಬುದು ಸುಳ್ಳು ಸುದ್ದಿ.  ಬಿಜೆಪಿಯಿಂದ ಯಾವುದೇ ಶಾಸಕ ಅಥವಾ ಮುಖಂಡರು ಹೊರಗೆ ಹೋಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತವನ್ನು ಇಡೀ ದೇಶದ ಜನತೆ ನೋಡಿದ್ದಾರೆ.  ಮುಂಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುವುದು ಖಚಿತ ಎಂದು ಸಚಿವ ಸಿ.ಅಶ್ವತ್ಥ್‌ ನಾರಾಯಣ ಹೇಳಿದರು.

ಕೂಡ್ಲಿಗಿಯ ಬಿಜೆಪಿ ಮುಖಂಡರೊಬ್ಬರ ಮನೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ  ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದ ಅವರು, ಕೊಟ್ಟೂರು ಹೊರವಲಯದ  ಹೆಲಿಪ್ಯಾಡ್‌ನಲ್ಲಿ ಬಂದಿಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ. ನಮ್ಮ ಬಿಜೆಪಿ ಸರ್ಕಾರ ಬಡವರ ಮನೆ ಬಾಗಿಲಿಗೆ ಪ್ರತಿಯೊಂದು ಯೋಜನೆಗಳು ಮುಟ್ಟುವಂತೆ ಮಾಡಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ರೈತ ವರ್ಗದ ಕುಟುಂಬಗಳಿಗೆ ನೆರವಾಗಿದ್ದೆಂದರೆ ಅದು ಬಿಜೆಪಿ ಸರ್ಕಾರ ಮಾತ್ರ ಎಂದು ಹೇಳಿದರು. 

ನಂತರ ಚಾಮರಾಜನಗರ ಜಿಲ್ಲೆ ಉಸ್ತುವಾರಿ ಸಚಿವರಿದ್ದರೂ ಅಲ್ಲಿ ನಡೆದ ಪಕ್ಷದ ಕಾರ್ಯಕ್ರಮಕ್ಕೆ ವಿ.ಸೋಮಣ್ಣ ಗೈರಾಗಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ಅವರು ಬೇರೆ ಯಾವುದೋ ಕೆಲಸ ನಿಮಿತ್ತ ಗೈರಾಗಿರಬಹುದು. ಅಲ್ಲದೇ ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಹೀಗೆಂದ ಮಾತ್ರಕ್ಕೆ ಅವರು ಪಕ್ಷವನ್ನೇ ಬಿಡುತ್ತಾರೆ ಎಂಬುದು ಸರಿಯಲ್ಲ. ಮತ್ತೊಬ್ಬ ಸಚಿವ ನಾರಾಯಣಗೌಡರು ಸಹ ಬಿಜೆಪಿ ಬಿಡೋದಿಲ್ಲ. ಅವರಿಗೆ ಬಿಜೆಪಿ  ಟಿಕೆಟ್ ಗ್ಯಾರಂಟಿ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಬಿ. ವಿಕ್ರಂ, ಪದಾಧಿಕಾರಿಗಳಾದ ಕಾಮಶೆಟ್ಟಿ ಕೊಟ್ರೇಶ್, ಡಾ.  ರಾಕೇಶ್‌, ಬುಲ್ ಶ್ರೀನಿವಾಸ್‌ ಹಾಗು ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.

error: Content is protected !!