- ಮೇ 4ಕ್ಕೆ ಪ್ರಿಯಾಂಕ ಗಾಂಧಿ ಆಗಮನ ರೈತರಿಂದ ಆನೆ ಬಲ : ಎಸ್ಸೆಸ್ಸೆಂ
ದಾವಣಗೆರೆ, ಏ. 28 – ದೇಶದ ಬೆನ್ನೆಲುಬು ರೈತರು, ದಾವಣಗೆರೆ ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲು ಬಾಗಿರುವುದು ಸಂತಸದ ಸಂಗತಿ, ರೈತ ಸಂಘದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದು ದಾವಣಗೆರೆಯ ಕಾಂಗ್ರೆಸ್ ಅಭ್ಯರ್ಥಿಗೆ ಆನೆ ಬಲ ಬಂದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದ ಎಂಸಿಸಿ ಬಿ ಬ್ಲಾಕ್ನ ಕಾಂಗ್ರೆಸ್ ಪಕ್ಷದ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವ ಸಭೆಯಲ್ಲಿ ಮಾತನಾಡಿದರು.
ನಮಗೆ ಎಲ್ಲೇ ಹೋದರು ರೈತ ಸಂಘದವರು ಪರಿಚಿತರಾಗಿರುವರು, ಆನಗೋಡು ಗ್ರಾಮದಲ್ಲಿ ರೈತರ ಹುತಾತ್ಮ ಭವನ ಮಾಡಬೇಕು, ರೈತರ ಸಮುದಾಯ ಭವನ ನಿರ್ಮಿಸಬೇಕು, ಕೈಗೆಟಕುವ ದರದಲ್ಲಿ ಕೃಷಿ ಸಾಮಗ್ರಿಗಳು ಸಿಗಬೇಕು ಎಂಬ ಹಲವು ಬೇಡಿಕೆಗಳಿಗೆ ಅವುಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು.
ಕಾಂಗ್ರೆಸ್ ಅಭ್ಯರ್ಥಿಗೆ ಬಡ ರೈತನಿಂದ 20 ಸಾವಿರ
ಚುನಾವಣಾ ಖರ್ಚಿಗಾಗಿ ಯಲೋದಹಳ್ಳಿ ಬಡ ರೈತ ಕಾಳೇಶ್ ಅವರು ಸಭೆಯಲ್ಲಿ, ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಅವರಿಗೆ 20 ಸಾವಿರ ರೂಪಾಯಿ ಚುನಾವಣಾ ಖರ್ಚಿಗೆ ದೇಣಿಗೆ ನೀಡಿದರು. ಬಡ ರೈತನಾಗಿದ್ದರೂ ಯಲೋದಹಳ್ಳಿ ಕಾಳೇಶ್ ಅವರ ಸಹಾಯ ದೊಡ್ಡದು. ಅವರ ಅಭಿಮಾನ ಕೋಟಿ ಕೊಟ್ಟರು ಸಾಲದು, ಇದು ಗೆಲುವಿನ ಶುಭ ಸಂಕೇತ ಎಂದು ರೈತನ ಸೇವೆ ಸ್ಮರಿಸಿದರು.
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೊಡ್ಡ ಪ್ರಮಾಣದ ರೈತರಿಗೆ ಉಪಯೋಗ ಆಗಿದೆಯೇ ಹೊರತು ಸಣ್ಣ ಹಾಗೂ ಬಡ ರೈತರಿಗೆ ಉಪಯೋಗವಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ರೈತನ ಮಗಳು, ರೈತರ ಕಷ್ಟಗಳನ್ನು ಕಣ್ಣಾರೆ ಕಂಡವರು. ಕೃಷಿ ಪರಿಣಿತರಾಗಿರುವ ಅವರಿಗೆ ರೈತರ ಪ್ರತಿಯೊಂದು ವಿಚಾರಗಳಲ್ಲಿ ಅಪಾರವಾದ ಕಾಳಜಿ ಇದೆ. ನನ್ನಜ್ಜ ಹಾಗೂ ನಮ್ಮ ತಂದೆಯವರಿಗಿಂತ ಹೆಚ್ಚಿನ ರೀತಿಯಲ್ಲಿ ಸಮಸ್ಯೆಗಳನ್ನು ಫಾಲೋಅಪ್ ಮಾಡಿ ಸರಿಪಡಿಸುವರು ಎಂದರು.
ರೈತರ ಪ್ರತಿ ಹೋರಾಟದಲ್ಲಿ ನಾವುಗಳು ನಿಮ್ಮ ಜತೆ ಇರುತ್ತೇವೆ ಎಂದ ಅವರು ಮೇ 4 ರಂದು ಜಿಲ್ಲೆಗೆ ಪ್ರಿಯಾಂಕಾಗಾಂಧಿ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ. ತಾವುಗಳೆಲ್ಲ ಕುಟುಂಬ ಸಮೇತರಾಗಿ ಹಸ್ತದ ಗುರ್ತಿಗೆ ಮತ ನೀಡಿ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಜಿಲ್ಲಾ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ್, ಜಿಲ್ಲಾ ಸಂಚಾಲಕ ಟಿ.ಆರ್ ಗಿರಿಯಾಪುರ ಲಕ್ಷ್ಮಣ, ಚನ್ನಗಿರಿ ತಾಲ್ಲೂಕು ಅಧ್ಯಕ್ಷ ಯಲೋದಹಳ್ಳಿ ಕಾಳೇಶ್, ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಅಧ್ಯಕ್ಷ ಮಾಸಡಿ ಭರಮಪ್ಪ, ದಾವಣಗೆರೆ ತಾಲ್ಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ್, ಜಿಲ್ಲೆಯ ವಿವಿಧ ಭಾಗಗಳ ಮುಖಂಡರಾದ ಕರೆಕಟ್ಟೆ ಕಲಿಂವುಲ್ಲಾ, ಬೆಡಗನೂರು ಚಿದಾನಂದಪ್ಪ, ನಿರಂಜನಗೌಡ, ರಾಜು ಕಂಬಳಿ, ಬೊಮ್ಮನಹಳ್ಳಿ ಬಂಕೆ ಜಯಣ್ಣ, ದಾಗಿನಕಟ್ಟೆಯ ಶಾಂತರಾಜ್, ಸುರೇಶ್, ಹರಳೀಪುರ ಧರ್ಮಾಗೌಡರು, ಮಲ್ಲಶೆಟ್ಟಿಹಳ್ಳಿ ಕರಿಬಸಪ್ಪ, ಆಂಜನೇಯ ಮಿಲ್ ಶ್ರೀನಿವಾಸ್, ಯಲೋದಹಳ್ಳಿ ಶಶಿಕುಮಾರ್, ಕಣಿವೆ ಬಿಳಚಿ ಅಣ್ಣಪ್ಪ, ಕಂಚಿಗನಾಳ್ ಮನು, ಬೆಡ್ ಕಡೂರು ರವಿ, ಹೊದಿಗೆರೆ ರವಿ ಸೇರಿದಂತೆ ಇನ್ನು ಹಲವಾರು ರೈತರು ಈ ವೇಳೆ ಉಪಸ್ಥಿತರಿದ್ದರು.