ಕಲಾ ಬರಹಗಾರನಲ್ಲಿನ ಕಲೆಗಾರಿಕೆಗೆ ಕಾರಣವಾದ ಕೋವಿಡ್-19 ಲಾಕ್‌ಡೌನ್‌

ಕೋವಿಡ್ 19ರ ಕಾರಣದಿಂದ ಲಾಕಡೌನ್ ಆದ ದಿನಗಳಲ್ಲಿ ಏನು ಮಾಡಬೇಕು ಎಂದು ತೋಚದೆ ಮಂಕಾಗಿ ಕುಳಿತವರು ಅದೆಷ್ಟೋ ಜನ ಆದರೆ ಕೆಲವು ಕಲಾವಿದರು ಕೋವಿಡ್-19ರ ಬಗ್ಗೆಯೇ ಅನೇಕ ಚಿತ್ರಗಳನ್ನು ರಚಿಸಿದರು, ಕೆಲವು ಬರಹಗಾರರು ಅದರ ಬಗ್ಗೆ ಕವನ ಬರೆದರು, ಹರಟೆ ಬರೆದರು, ಇನ್ನೂ ಕೆಲವರು (ಸಿನೆಮಾರಂಗ) ಹತಾಶರಾಗಿ, ತೀವ್ರವಾದ ಖಿನ್ನತೆಗೆ ಒಳಗಾಗಿ ಪ್ರಾಣವನ್ನು ಬಿಟ್ಟರು ಇನ್ನೂ ಕೆಲವರು ಇದೇ ಸಂದರ್ಭದಲ್ಲಿ ಕಾಣೆಯಾಗಿದ್ದ/ಮರೆತೇಬಿಟ್ಟಿದ್ದ ತಮ್ಮ ಆಸಕ್ತಿಯನ್ನು ಪ್ರತಿಭೆಯನ್ನು ಕೆದಕಿ, ಹೊರತೆಗೆದು ಚಿತ್ರ, ಶಿಲ್ಪ ಮೊದಲಾದ ಸೃಜನಶೀಲ ಅಭಿವ್ಯಕ್ತಿಗಳಲ್ಲಿ ಹೊರ ಹೊಮ್ಮಿಸಿದರು. ಅಂತಹವರಲ್ಲಿ ದಾವಣಗೆರೆಯ ದತ್ತಾತ್ರೇಯ ಎನ್. ಭಟ್ ಕೂಡಾ ಒಬ್ಬರು.

ದತ್ತಾತ್ತ್ರೇಯ ಭಟ್ಟರು ಕಲಾ ಇತಿಹಾಸ ಭೋದನೆಯಲ್ಲಿ, ಕಲಾ ಬರಹಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜ್ಯದ ದೃಶ್ಯಕಲಾ ವಲಯದಲ್ಲಿ ಒಬ್ಬ ಕಲಾ ಇತಿಹಾಸ ಬೋಧಕರಾಗಿ ಕಲಾ ಬರಹಗಾರರಾಗಿ ಗುರುತಿಸಿಕೊಂಡಿರುವಿರಷ್ಟೆ. ಆದರೆ ಲಾಕ್‌ಡೌನ್ ದಿನಗಳಲ್ಲಿ ನಾಲ್ಕಾರು ಜಲವರ್ಣ ಕೃತಿಗಳನ್ನು ಅನೇಕ ರೇಖಾ ಚಿತ್ರಗಳನ್ನು ರಚಿಸಿದ್ದಾರೆ.

ಒಂದಿಷ್ಟು ಜಲವರ್ಣ ಚಿತ್ರಗಳನ್ನು ಮತ್ತು ರೇಖಾಚಿತ್ರಗಳನ್ನು ಮುಖಪುಸ್ತಕದಲ್ಲಿ (ಫೇಸ್‌ಬುಕ್‌) ಹಂಚಿಕೊಂಡಿದ್ದು ಒಬ್ಬ ಕಲಾವಿದನಾದ ನನಗೆ ಅವು ಬಹಳ ಗಮನಾರ್ಹವಾದವುಗಳು, ಸೃಜನಶೀಲತೆಯ ಹೊಳಹಿನಿಂದ ಕೂಡಿದವುಗಳಾಗಿ ಕಂಡು ಬರುತ್ತವೆ. ಜಲವರ್ಣ ಚಿತ್ರಗಳು ಅಷ್ಟೋಂದು ಗಮನಾರ್ಹವಾದ ಅಭಿವ್ಯಕ್ತಿಗಳೆಂದು ಹೇಳಲು ಸಾಧ್ಯವಿಲ್ಲವಾದರೂ ರೇಖಾ ಚಿತ್ರಗಳು ನನ್ನನ್ನು ತುಂಬಾ ಸೆಳೆದವು. ಭಟ್ಟರು ಸ್ವಭಾವ ರೇಖಾ ಚಿತ್ರವನ್ನು (Portrait Drawing) ರಚಿಸಿದ್ದು ಅದರಲ್ಲಿ ತನ್ನನ್ನೇ ತಾನು ವಿಡಂಬನೆ ಮಾಡಿಕೊಂಡಿದ್ದು ಮುಖ್ಯವಾಗಿ ಗಮನ ಸೆಳೆಯುತ್ತದೆ. ಸ್ವಾಭಾವಿಕವಾಗಿ ಸಾರ್ವಜನಿ ಕರೆದುರು ತಮ್ಮನ್ನೇ ತಾವು ವಿಡಂಬನೆ ಮಾಡಿ ಕೊಳ್ಳುವುದನ್ನು ಯಾವ ವ್ಯಕ್ತಿಯು ಇಷ್ಟಪಡು ವುದಿಲ್ಲ ಆದರೆ ಭಟ್ಟರು ಯಾವ ಮುಲಾಜಿಲ್ಲದೆ ತಮ್ಮ ಮನೋ ಸಾಮ್ರಾಜ್ಯದ ತಲ್ಲಣಗಳನ್ನು, ಹಪಹಪಿಗಳನ್ನು ರೇಖೆಗಳ ಮೂಲಕ ಅಭಿವ್ಯಕ್ತಿಸಿದ್ದಾರೆ.

ಗಣೇಶ ಇವರನ್ನು ಲಾಕ್‌ಡೌನ್ ಸಂದರ್ಭ ದಲ್ಲಿ ವಿಪರೀತ ಮನ ತಟ್ಟಿದ ದೇವರೆಂದು ಕಂಡು ಬರುತ್ತದೆ. ಏಕೆಂದರೆ ಕುಳಿತ ಗಣಪತಿ, ಸುಬ್ರಮಣ್ಯ ನೊಡನೆ ಆಡುತ್ತಿರು ಗಣಪ ಚಂದ್ರನನ್ನು ಶಪಿಸುತ್ತಿರುವ ಗಣಪ ಮೊದಲಾದ ಕಲ್ಪನೆಗಳನ್ನು ತಮಮ ರೇಖೆಗಳಲ್ಲಿ ಮೂಡಿಸಿದ್ದಾರೆ. ರೇಖಾಚಿತ್ರಗಳಲ್ಲಿ ಒಂದಿಷ್ಟು ಅಂಶಗಳ ಮಟ್ಟಿಗೆ ಹೆಬ್ಬಾರರ ರೇಖೆಗಳ ಲಕ್ಷಣ ಕಂಡು ಬರುತ್ತದೆ. ಆದರೆ ರೇಖೆಗಳನ್ನು ಎಳೆಯುವ ಭರದಲ್ಲಿ ಅಲ್ಲಲ್ಲಿ ನೈಜ ಶೈಲಿಯ ಚಿತ್ರದ ಲಕ್ಷಣ ವಿಶೇಷತೆಗಳು ಭಂಗಗೊಂಡಿದ್ದು ಕಂಡು ಬರುವ ಅಂಶ, ಗಣಪನನ್ನು ರೇಖಿಸಿದ ಭಂಗಿ ಒಟ್ಟಾರೆ ಸನ್ನಿವೇಶವನ್ನು ಕಲ್ಪಿಸಿದ ಪರಿ ಭಟ್ಟರಲ್ಲಿನ ಸೃಜನ ಶೀಲತೆಯ ಝಲಕ್ ಅನಾವರಣಗೊಳಿಸುತ್ತದೆ. 

ವಿಶ್ವರೂಪ ರೇಖಾಚಿತ್ರ ಇಲ್ಲಿ ಉಲ್ಲೇಖಸಿಲೇ ಬೇಕಾದುದು ಈ ಚಿತ್ರದಲ್ಲಿ ಸಾಂಪ್ರದಾಯಿಕ ಮತ್ತು ಸಮಕಾಲೀನ ಸಂಯೋಜನೆ ಏರ್ಪಟ್ಟಿದೆ. ವಿಶ್ವರೂಪದಲ್ಲಿ ಮೊಸಳೆ, ಹಂಸ, ಹುಂಜ ಆಕಳು, ಹಂದಿ, ನಾಯಿ, ಹುಲಿ, ಮೊದಲಾದ ಆಕಾರಗಳು, ತರಕಾರಿಗಳು ಮತ್ತು ಬಸ್ಸು ಆಟೋರಿಕ್ಷಾ, ವಿಮಾನದ ಕಲ್ಪನೆಕೊಡುವ ಆಕಾರ ಇವೆಲ್ಲಾ ಸಮಕಾಲಿನ ಆಕೃತಿಗಳು ಸೇರಿವೆ. 

ಒಬ್ಬ ದೃಶ್ಯ ಕಲಾವಿದನಾಗಿ ಕಲಾ ಇತಿಹಾಸ ಭೋದನೆ ಮತ್ತು ಕಲಾ ಬರಹಗಾರಿಕೆ ವಿಮರ್ಶೆ ಇವುಗಳಲ್ಲಿ ಮಗ್ನರಾದ ದತ್ತಾತ್ರೇಯ ಭಟ್ಟರ ರೇಖಾ ಚಿತ್ರಗಳು ನನಗೆ ಅತ್ಯಂತ ಕುತೂಹಲಭರಿತವಾದ ಅಭಿವ್ಯಕ್ತಿಗಳಂತೆ ಕಂಡುಬಂದವು. ಅನೇಕ ವರ್ಷಗಳ ಕಾಲ  ಕುಂಚ ಪೆನ್ ಮತ್ತು ಇಂಕ್ ಇವನ್ನೆಲ್ಲಾ ಮರೆತಿದ್ದ ಕಲಾವಲಯದ ಚಿಂತಕನೊಬ್ಬ ಜಾಗ್ರತನಾದರೆ ಆತನಿಂದ ಏನೆಲ್ಲಾ ಹೊಸ ಹೊಸ ಪರಿಕಲ್ಪನೆಗಳಿಂದ ಕೂಡಿದ ಚಿತ್ರಗಳು ಮೂಡಿಬರಲು ಸಾಧ್ಯ ಎಂಬುದಕ್ಕೆ ಇವರ ರೇಖಾ ಚಿತ್ರಗಳು ಉದಾಹರಣೆಗಳಾಗುತ್ತವೆಯೆನೋ, ಭಟ್ಟರು ಕುಂಚ, ಪೆನ್ ಮತ್ತು ಇಂಕ್ ಹಿಡಿಯಲು ತುಂಬಾ ತಡ ಮಾಡಿದರು ಎನಿಸುತ್ತದೆ. ತಮ್ಮ ಬೋಧನೆಯ ನಡುವೆ ಸಾಕಷ್ಟು ಮುಂಚೆಯೇ ರೇಖಾಭಿವ್ಯಕ್ತಿ ವರ್ಣ ಚಿತ್ರಾಭಿವ್ಯಕ್ತಿಯತ್ತ ಗಮನ ಹರಿಸಿದ್ದರೆ ತುಂಬಾ ವಿಶ್ಲೇಷಣಾತ್ಮಕ, ಚಿಂತನಾತ್ಮಕ ತೀವ್ರ ಸೃಜನಾತ್ಮಕ ಚಿತ್ರಗಳು ಇವರಿಂದ ಮೂಡಿಬರುವ ಸಾಧ್ಯತೆಗಳು ಇದ್ದವು ಏನೆ ಇರಲಿ ತುಂಬಾ ತಡವಾದರು ಪರವಾಗಿಲ್ಲ, ದತ್ತಾತ್ರೇಯ ಭಟ್ಟರು ಕುಂಚ, ಪೆನ್ ಮತ್ತು ಇಂಕನ್ನು ಮರೆತಿಲ್ಲ ಎಂಬ ಸಮಾಧಾನದೊಂದಿಗೆ ಇದೇ ರೀತಿ ಚಿತ್ರ ರಚನೆಯಲ್ಲಿ ತಮ್ಮ ಲಕ್ಷ್ಯವನ್ನು ಹರಿಯಬಿಡಲಿ ಎಂದು ಆಶಿಸುವೆ ಮತ್ತು ಅದು ನನ್ನಂತಯೇ ಅವರ ಅನೇಕ ದೃಶ್ಯ ಕಲಾ ಮಿತ್ರರ ಅಪೇಕ್ಷ ಕೂಡಾ.


ಶಿವಶಂಕರ್ ಸುತಾರ್
ದಾವಣಗೆರೆ.
[email protected]

error: Content is protected !!