ಬಡದಾಳ್-ತಾರಾನಾಥ್ ಸೇರಿ ಹಲವರಿಗೆ ಮಾಧ್ಯಮ ಮಾಣಿಕ್ಯ ಪ್ರಶಸ್ತಿ

ಬಡದಾಳ್-ತಾರಾನಾಥ್ ಸೇರಿ ಹಲವರಿಗೆ ಮಾಧ್ಯಮ ಮಾಣಿಕ್ಯ ಪ್ರಶಸ್ತಿ - Janathavani

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಾಡಿದ್ದು ಕಾರ್ಯಕ್ರಮ

ದಾವಣಗೆರೆ, ಜೂ. 1- ಒಂದು ಪತ್ರಿಕೆ ರೂಪುಗೊಂಡು, ಅದು ಓದುಗರ ಕೈಗೆ ಸೇರುವ ಹಿನ್ನೆಲೆಯಲ್ಲಿನ ಶ್ರಮಿಕರಾದ ಪತ್ರಿಕಾ ಕಚೇರಿಯ ಎಂಟು ವಿಭಾಗಗಳ ನಿರ್ವಾಹಕ ರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ `ಮಾಧ್ಯಮ ಮಾಣಿಕ್ಯ’ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ.

ಪ್ರತಿ ವರ್ಷ ಜುಲೈ 1ರ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಪುರಸ್ಕೃತರಿಗೆ ಫಲಕ, ಗೌರವ ಧನ, ಫಲ-ಪುಷ್ಪಗಳನ್ನೊಳ ಗೊಂಡಂತೆ  `ಮಾಧ್ಯಮ ಮಾಣಿಕ್ಯ’ ಪ್ರಶಸ್ತಿ ನೀಡಲಾಗುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

2022ರ ಸಾಲಿನಿಂದ ಈ ಪ್ರಶಸ್ತಿ ನೀಡಲುದ್ದೇಶಿಸಲಾಗಿದ್ದು, ಜೂನ್ 4ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್‌ನಲ್ಲಿರುವ ಬ್ರಹ್ಮಾಕುಮಾರೀಸ್ ಸಂಸ್ಥೆಯ ಶಿವಧ್ಯಾನ ಮಂದಿರದಲ್ಲಿ ಏರ್ಪಾಡಾಗಿರುವ ಸಮಾರಂಭದಲ್ಲಿ 2022ರ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೂ ಮೊದಲು ಬೆಿಳಿಗ್ಗೆ 9.30ಕ್ಕೆ ಸಂಘದ ಜಿಲ್ಲಾ ಘಟಕದ 2022-23ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಏರ್ಪಾಡಾಗಿದೆ.

ವರದಿಗಾರರ ವಿಭಾಗದಲ್ಲಿ ಹಿರಿಯ ಪತ್ರಕರ್ತ `ಕನ್ನಡಪ್ರಭ’ದ ನಾಗರಾಜ್ ಬಡದಾಳ್, ವಿದ್ಯುನ್ಮಾನ ವಿಭಾಗದಲ್ಲಿ ಹಿರಿಯ ಪತ್ರಕರ್ತ `ದೂರದರ್ಶನ’ದ ಎ.ಎಲ್. ತಾರಾನಾಥ್, ಛಾಯಾಗ್ರಾಹಕ ವಿಭಾಗದಲ್ಲಿ ವಿವೇಕ್ ಎಲ್. ಬದ್ದಿ, `ಜನತಾವಾಣಿ’ಯ ಪುಟ ವಿನ್ಯಾಸಕರಾದ ಶ್ರೀಮತಿ ಟಿ.ಎನ್. ಮಂಜುಳಾ ನಾಗರಾಜ್, ಜಾಹೀರಾತು ವಿಭಾಗದಲ್ಲಿ  ಸಾಯಿ ಅಡ್ವರ್ಟೈಸರ್ಸ್‌ನ ಬಿ.ಎನ್. ಸಾಯಿಪ್ರಸಾದ್, ಮುದ್ರಣ ವಿಭಾಗದಲ್ಲಿ ಮಂಜು ಮುದ್ರಣದ ಎಂ. ನಾಗರಾಜ್, ಸಿಬ್ಬಂದಿ ವಿಭಾಗದಲ್ಲಿ ಹಿರಿಯ ತಂತ್ರಜ್ಞ ಬುಡೇನ್ ಸಾಬ್, ಪತ್ರಿಕಾ ವಿತರಕ ವಿಭಾಗದಲ್ಲಿ ಹಿರಿಯ ಪತ್ರಿಕಾ ವಿತರಕ ಎ.ಕೆ. ಶಿವಬಸಪ್ಪ ಅವರುಗಳು `ಮಾಧ್ಯಮ ಮಾಣಿಕ್ಯ’ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.

ಅಲ್ಲದೇ, 2022-23ನೇ ಸಾಲಿನಲ್ಲಿ ವಿವಿಧ ಪ್ರಶಸ್ತಿಗಳ ಪುರಸ್ಕೃತ ಪತ್ರಕರ್ತರನ್ನು `ಮಾಧ್ಯಮ ಚೂಡಾಮಣಿ’ ಬಿರುದು ನೀಡಿ ಸನ್ಮಾನಿಸಲಾಗುತ್ತದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, `ಕರ್ನಾಟಕ ಎಕ್ಸ್‌ಪ್ರೆಸ್’ ಸಂಪಾದಕ ಕೆ. ಚಂದ್ರಣ್ಣ, ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ `ನಗರವಾಣಿ’  ಸಹ ಸಂಪಾದಕ ಬಿ.ಎನ್. ಮಲ್ಲೇಶ್, ಕೆಯುಡ ಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್, `ಪ್ರಜಾವಾಣಿ’ಯ ಚಂದ್ರಹಾಸ ಹಿರೇಮಳಲಿ ಮತ್ತು ಎಲ್. ಮಂಜುನಾಥ್, `ವಿಜಯ ವಾಣಿ’ಯ ಎನ್.ಡಿ.ಶಾಂತಕುಮಾರ್, ಹರಿಹರದ `ಲೋಕಪ್ರಭಾ’ ಸಂಪಾದಕರಾದ ಶ್ರೀಮತಿ ಡಿ.ಎನ್. ಶಾಂಭವಿ ನಾಗರಾಜ್ ಅವರುಗಳನ್ನು ಗೌರವಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಮ್ಮಂದಿರ ದಿನಾಚರಣೆ ಅಂಗವಾಗಿ ಮಹಿಳಾ ಪತ್ರಕರ್ತರನ್ನು `ಮಾಧ್ಯಮ ರತ್ನ’ ಬಿರುದು ನೀಡಿ ಗೌರವಿಸಲಾಗುತ್ತದೆ. ಜೊತೆಗೆ, ಅನಾರೋಗ್ಯದಿಂದ ಬಳಲುತ್ತಿರುವ 8 ಜನ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಯಿಂದ ಸಹಾಯ ಧನದ ಚೆಕ್ ವಿತರಿಸಲಾಗುತ್ತದೆ.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ದಿವ್ಯ ಸಾನ್ನಿಧ್ಯದಲ್ಲಿ, ಬ್ರಹ್ಮಾಕುಮಾರೀಸ್ ಸಂಸ್ಥೆಯ ಹುಬ್ಬಳ್ಳಿ ವಲಯದ ನಿರ್ದೇಶಕರಾದ ರಾಜಯೋಗಿ ಬ್ರಹ್ಮಾಕುಮಾರ ಬಸವರಾಜ ರಾಜಋಷಿ ಕಾರ್ಯಕ್ರಮವನ್ನು ಉದ್ಘಾಟಿಸುವರು.

ತೋಟಗಾರಿಕೆ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು `ಮಾಧ್ಯಮ ಮಾಣಿಕ್ಯ’ ಪ್ರಶಸ್ತಿ ಪ್ರದಾನ ಮಾಡುವರು. ಬಾಪೂಜಿ ವಿದ್ಯಾಸಂಸ್ಥೆ  ಆಡಳಿತ ಮಂಡಳಿ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮಹಿಳಾ ಪತ್ರಕರ್ತರನ್ನು ಗೌರವಿಸುವರು. ಹಿರಿಯ ಕೈಗಾರಿಕೋದ್ಯಮಿ ಅಥಣಿ ವೀರಣ್ಣ ಮತ್ತು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರುಗಳು ವಿವಿಧ ಪ್ರಶಸ್ತಿಗಳ ಪುರಸ್ಕೃತ ಪತ್ರಕರ್ತರನ್ನು ಸನ್ಮಾನಿಸುವರು.  `ಜನತಾವಾಣಿ’ ಸಂಪಾದಕ ಎಂ.ಎಸ್.ವಿಕಾಸ್ ಮತ್ತು ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಅವರುಗಳು ಅನಾರೋಗ್ಯದಿಂದಿರುವ ಪತ್ರಕ ರ್ತರಿಗೆ ಸಹಾಯ ಧನದ ಚೆಕ್ ವಿತರಿಸುವರು.

ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಕೆಯುಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ದೇವರಮನೆ ಶಿವಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಆರ್. ನಾಗಭೂಷಣರಾವ್, ಲಯನ್ಸ್ ಕ್ಲಬ್ ಉಪಾಧ್ಯಕ್ಷ ಮಹಾಂತೇಶ್ ವಿ. ಒಣರೊಟ್ಟಿ ಅವರುಗಳು ಮುಖ್ಯ ಅತಿಥಿಗಳಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ. ಫಕೃದ್ಧೀನ್, ರಾಜ್ಯಸಮಿತಿ ಸದಸ್ಯ ಕೆ. ಚಂದ್ರಣ್ಣ,  ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ., ಒಡೆಯರ್, ಜಿಲ್ಲಾ ಖಚಾಂಚಿ ಎನ್.ವಿ. ಬದರಿನಾಥ್ ಮತ್ತಿತರರಿದ್ದರು.

error: Content is protected !!