ಮಠದ ಸ್ವಾಮೀಜಿ ಆಗುವುದು ಕಷ್ಟವಲ್ಲ, ಒಂದು ಮನೆಯ ಸೊಸೆಯಾಗುವುದು ಕಷ್ಟ

ಮಠದ ಸ್ವಾಮೀಜಿ ಆಗುವುದು ಕಷ್ಟವಲ್ಲ, ಒಂದು ಮನೆಯ ಸೊಸೆಯಾಗುವುದು ಕಷ್ಟ

ಶ್ರೀ ತರಳಬಾಳು ಜಗದ್ಗುರುಗಳ ವಿಶ್ಲೇಷಣೆ

ಚಿತ್ರದುರ್ಗ, ಮಾ.3- ಮಠದ ಸ್ವಾಮೀಜಿಗಳಾಗುವುದು ಕಷ್ಟವೇನಲ್ಲ. ಒಂದು ಮನೆಯ ಸೊಸೆಯಾಗುವುದು ತುಂಬಾ ಕಷ್ಟ. ಗಂಡನ ಮನೆಯಲ್ಲಿ ಎಲ್ಲರಿಗೂ ಹೊಂದಿಕೊಂಡು ಬಾಳುವುದು ಇನ್ನು ಕಠಿಣ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕಳೆದ 2 ರಂದು ನಿಧನರಾದ ಸಿರಿಗೆರೆ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ರಾ.ವೆಂಕಟೇಶ ಶೆಟ್ಟಿಯವರ ಪತ್ನಿ ಶ್ರೀಮತಿ ಸುಕನ್ಯಾರವರ ಆತ್ಮಶಾಂತಿಗಾಗಿ ವಾಸವಿ ಮಹಲ್ ರಸ್ತೆಯಲ್ಲಿರುವ ಕನ್ಯಕಾ ಮಹಲ್‍ನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ವೈಕುಂಠ ಸಮಾರಾಧನೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.

ತಂದೆ – ತಾಯಿಯನ್ನು ಬಿಟ್ಟು ಹೆಣ್ಣು ಗಂಡನ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಸುಲಭವಲ್ಲ. ಮನುಷ್ಯನ ಜೀವನದಲ್ಲಿ ಜನನ – ಮರಣ ಸಾಮಾನ್ಯ. ಹೃದಯದ ಭಾವನೆಗಳನ್ನು ದುಡ್ಡಿನಲ್ಲಿ ಅಳೆಯಬಾರದು. ಆರ್ಯವೈಶ್ಯ ಸಮಾಜದವರು ಯಾರಾದರೂ ಮೃತಪಟ್ಟಾಗ ಅಂತ್ಯಕ್ರಿಯೆಯಾಗುವ ತನಕ ಎಲ್ಲವನ್ನು ನಿಭಾಯಿಸಿ ಮಾನವೀಯತೆ ಮೆರೆಯುತ್ತಾರೆ. ಸಮುದ್ರದ ಅಡಿಯಲ್ಲಿ ಕಪ್ಪೆಚಿಪ್ಪು, ಮುತ್ತುರತ್ನಗಳು ಸಿಗುತ್ತವೆ. ಅಕ್ಕಮಹಾದೇವಿ, ವಾಸವಿ ಜೀವನದಲ್ಲಿ ಒಂದು ತೆರನಾದ ಕಷ್ಟಗಳು ಎದುರಾಗುತ್ತವೆ. ಇವರಿಬ್ಬರ ಜೀವನದಲ್ಲಿಯೂ ಅಧ್ಯಾತ್ಮಿಕ ಸೆಳೆತವಿತ್ತು. ಆರ್ಯವೈಶ್ಯ ಸಮಾಜದವರಿಗೆ ಮತ್ತೊಬ್ಬರ ಕಷ್ಟಕ್ಕೆ ಮರುಗುವ ಗುಣವಿದೆ ಎಂದು ಶ್ಲ್ಯಾಘಿಸಿದರು.

ಆರ್ಯವೈಶ್ಯ ಸಮಾಜಕ್ಕೂ ನಮ್ಮ ಮಠಕ್ಕೂ ಒಡನಾಟವಿದೆ. ಭಗವದ್ಗೀತೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳದ ಮೂರ್ಖರು. ನಾನಾ ರೀತಿಯ ವ್ಯಾಖ್ಯಾನಗಳನ್ನು ಮಾಡುತ್ತಾರೆಂದರು.

ಯಾವುದೇ ಕೆಲಸವನ್ನು ಮಾಡುವಾಗ ಫಲಾ ಪೇಕ್ಷೆಯನ್ನು ಬಯಸಬಾರದು. ರಾ.ವೆಂಕಟೇಶ ಶೆಟ್ಟಿಯವರು ತಮ್ಮ ಪತ್ನಿಯ ಸೇವೆಯನ್ನು ಪ್ರೀತಿ ಯಿಂದ ಮಾಡಿದ್ದಾರೆ, ಕರ್ತವ್ಯವೆಂದುಕೊಳ್ಳಲಿಲ್ಲ. ಎಲ್ಲರ ಜೀವನದಲ್ಲಿ ಬಾಲ್ಯ, ಯೌವ್ವನ, ಮುಪ್ಪು ಇದ್ದೇ ಇರುತ್ತದೆ.  ಆತ್ಮಕ್ಕೂ – ಶರೀರಕ್ಕೂ ಸಂಬಂಧ ವಿದೆ. ಮನುಷ್ಯನ ಜೀವನಕ್ಕೂ ಮರಗಿಡಗಳಿಗೂ ವ್ಯತ್ಯಾಸವಿದೆ. ಶ್ರೀಮತಿ ಸುಕನ್ಯಾ ವೆಂಕಟೇಶ್‍ರವರು ದೈಹಿಕವಾಗಿ ಅಗಲಿರಬಹುದು. ಆದರೆ, ಮಾನಸಿಕವಾಗಿ ಅವರ ಪತಿ ಮತ್ತು ಕುಟುಂಬದವರ ಮನದಲ್ಲಿದ್ದಾರೆಂದು ಹೇಳಿದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಸನ್ಯಾಸ ಜೀವನಕ್ಕಿಂತ ದಾಂಪತ್ಯ ಜೀವನ ದೊಡ್ಡದು ಎಂದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಗಂಡನ ಆಗು-ಹೋಗುಗಳಿಗೆ ಹೆಂಡತಿ ಆಶ್ರಯ ಮುಖ್ಯ ಎಂದರು.  

ರಾ.ವೆಂಕಟೇಶ ಶೆಟ್ಟಿ ಮಾತನಾಡಿ, ನನ್ನ ಪತ್ನಿ ಸುಕನ್ಯಾ 48 ವರ್ಷಗಳ ಕಾಲ ನನ್ನ ಜೊತೆ ಸಂಸಾರ ನಡೆಸಿ, ಈಗ ಅಗಲಿರುವ ನೋವು ಸಹಿಸಿಕೊಳ್ಳಲು ಆಗುತ್ತಿಲ್ಲ. ಮರಕ್ಕೆ ಬೇರಿನಂತಿದ್ದರು. ಗಂಡ-ಹೆಂಡತಿ ನಡುವೆ ಪರಸ್ಪರ ಪ್ರೀತಿಯಿರುತ್ತದೆ. ಅನಾರೋಗ್ಯಕ್ಕೆ ತುತ್ತಾದಾಗ ಸ್ವಲ್ಪವೂ ಬೇಸರಪಟ್ಟುಕೊಳ್ಳದೇ ಪ್ರೀತಿಯಿಂದ ನನ್ನ ಹೆಂಡತಿಯ ಸೇವೆ ಮಾಡಿದ್ದೇನೆ. ಕರ್ತವ್ಯ ಅಂದುಕೊಳ್ಳಲಿಲ್ಲ. ಈಗಲೂ ನನ್ನ ಜೊತೆಯಲ್ಲಿಯೇ ಇದ್ದಾಳೆಂದುಕೊಂಡಿದ್ದೇನೆ. ನನಗೂ ಮತ್ತು ನನ್ನ ಕುಟುಂಬಕ್ಕೂ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅನುಗ್ರಹವಿದೆ. ಎಲ್ಲರನ್ನು ಕೈಹಿಡಿದು ಮೇಲಕ್ಕೆತ್ತಿದ್ದಾರೆ. ಈಗ ನನ್ನ ಕುಟುಂಬದ ಎಲ್ಲರೂ ಸುಖವಾಗಿದ್ದಾರೆಂದು ಭಾವುಕರಾದರು.

ಕಾಶಿ ವಿಶ್ವನಾಥ ಶೆಟ್ಟಿ, ಟಿ.ವಿ.ಸುರೇಶ್‍ಗುಪ್ತ ಇನ್ನು ಅನೇಕರು ಮಾತನಾಡಿದರು.

error: Content is protected !!