ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಬೇಕು

ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಬೇಕು

ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಿಂತಕ ಹಾಗೂ ವಿಶ್ರಾಂತ ಉಪನ್ಯಾಸಕ ಜಿ.ಎಸ್.ಸುಭಾಷ್ ಚಂದ್ರ ಬೋಸ್ ಆಶಯ

ದಾವಣಗೆರೆ, ಮೇ 6- 110 ವರ್ಷಗಳ ಭವ್ಯ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಿ ರೂಪುಗೊಳ್ಳಬೇಕು. ಆಗ ಮಾತ್ರ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಉದ್ದೇಶ ಈಡೇರುತ್ತದೆ ಎಂದು ಸಾಂಸ್ಕೃತಿಕ ಚಿಂತಕ ಹಾಗೂ ವಿಶ್ರಾಂತ ಉಪನ್ಯಾಸಕ ಜಿ.ಎಸ್.ಸುಭಾಷ್ ಚಂದ್ರ ಬೋಸ್ ಅಭಿಪ್ರಾಯಪಟ್ಟರು. 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ  ಕುವೆಂಪು ಕನ್ನಡ ಭವನದಲ್ಲಿ ನಿನ್ನೆ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತ್ರವಲ್ಲದೇ ಅನೇಕ ಮಹನೀಯರು, ಅನೇಕ ಹಿರಿಯ ಸಾಹಿತಿಗಳು ಬೆಳೆಸಿದ್ದಾರೆ. 1970ರ ಈಚೆಗೆ ಸಾಹಿತ್ಯ ಪರಿಷತ್ತು ಅತ್ಯಂತ ಬೃಹತ್ತಾಗಿ ಬೆಳೆದಿದೆ. ಅನೇಕ ಸಮ್ಮೇಳನಗಳನ್ನು ನಾಡಿನ ವಿವಿಧ ಸ್ಥಳಗಳಲ್ಲಿ ಆಯೋಜಿಸಿ ಜನರಿಗೆ ಹತ್ತಿರವಾಗಲು ಪ್ರಯತ್ನಿಸಿದೆ‌. ಆದರೆ, ಜನ ಸಾಮಾನ್ಯರ ಪರಿಷತ್ತಾಗದೇ ಇರುವುದು ಖೇದಕರ ಎಂದರು.

`ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು’ ಎನ್ನುವ ವಿಷಯದ ಮೇಲೆ ಹರಪನಹಳ್ಳಿಯ ಎಡಿಬಿಎಫ್‌ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎ.ಎಂ.ರಾಜಶೇಖರಯ್ಯ ಉಪನ್ಯಾಸ ನೀಡಿ,  ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ಸಾಗಬೇಕಾದರೆ ಅದರ ನಡೆ ಹಳ್ಳಿಗಳ ಕಡೆಗೆ ಇರಬೇಕಾಗುತ್ತದೆ ಎಂದು ಹೇಳಿದರು. 

ಪ್ರಸ್ತುತ ಸಾಹಿತ್ಯ ಪರಿಷತ್ತು ಕೋಟಿ ಸದಸ್ಯತ್ವದ ಗುರಿಯನ್ನು ಹೊಂದಿದೆ. ಸದಸ್ಯತ್ವ ವನ್ನು ಪಡೆದರೆ ಸಾಲದು ತಳಮಟ್ಟದ ಹಾಗೂ ಉದಯೋನ್ಮುಖ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವೂ ಆಗಬೇಕು. `ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಬಾರಾ’ ಎನ್ನುವ ಕುವೆಂಪು ಅವರ ಕವನದಂತೆ ಯಾವಾಗ ಕನ್ನಡಿಗರು ಭಾರತಾಂಬೆ ಹಾಗೂ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರವನ್ನು ತಮ್ಮ ಮನೆಯಲ್ಲಿಟ್ಟು ಪೂಜೆ ಮಾಡುವ ದಿನಗಳು ಬರುತ್ತದೆಯೋ ಆಗ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರತ್ತ ಸಾಗಿದೆ ಎಂದರ್ಥ. ಆ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. 

ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ನೌಕರರ ಸಂಘದ ಅಖಿಲ ಭಾರತ ಕಾರ್ಯದರ್ಶಿ ಯಾಗಿ ನೇಮಕಗೊಂಡಿರುವ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರೂ ಆಗಿರುವ ಕೆನರಾ ಬ್ಯಾಂಕ್ ಉದ್ಯೋಗಿ ಕೆ.ರಾಘವೇಂದ್ರ ನಾಯರಿ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಭಿನಂದಿಸಲಾಯಿತು. 

ಸನ್ಮಾನ ಸ್ವೀಕರಿಸಿದ ನಾಯರಿ ಮಾತನಾಡಿ, ಸಂಸ್ಥಾಪನಾ ದಿನವನ್ನು ನಾಡಿನೆಲ್ಲೆಡೆ ಅರ್ಥ ಪೂರ್ಣವಾಗಿ ಆಚರಿಸಲಾಗುತ್ತಿದೆ. ಸಾಹಿತ್ಯ ಪರಿಷತ್ತು ಕನ್ನಡ-ಕನ್ನಡಿಗ-ಕರ್ನಾಟಕದೊಂದಿಗೆ ಹೇಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ ಎನ್ನುವುದರ ಬಗ್ಗೆ ಯುವಜನರಿಗೆ ತಿಳಿಹೇಳುವುದರ ಮೂಲಕ ಅವರನ್ನೂ ಸಾಹಿತ್ಯ ಪರಿಷತ್ತಿನೊಂದಿಗೆ ಬೆರೆಸಬೇಕು ಎಂದರು. 

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಪರಿಷತ್ತಿನ ಮೂಲ ಆಶಯದಂತೆ ನಮ್ಮ ಜಿಲ್ಲೆಯಲ್ಲಿ ಹಲವಾರು ಬರಹಗಾರರಿಗೆ, ಕವಿಗಳಿಗೆ, ಸಾಹಿತಿಗಳಿಗೆ, ವಾಗ್ಮಿಗಳಿಗೆ, ಕಲಾವಿದರುಗಳಿಗೆ ಅವಕಾಶವನ್ನು ಕಲ್ಪಿಸಿ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು. 

ತಮ್ಮ ಅಧ್ಯಕ್ಷಾವಧಿಯ ಕಳೆದ 30 ತಿಂಗಳುಗಳಲ್ಲಿ 3 ಜಿಲ್ಲಾ ಸಮ್ಮೇಳನಗಳನ್ನು ಹಾಗೂ 6 ತಾಲೂಕು ಸಮ್ಮೇಳನಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಹಾಗೆಯೇ ಜನರು ಕೂಡಾ ಸಾಹಿತ್ಯ ಪರಿಷತ್ತಿನ ಮೇಲೆ ಪ್ರೀತಿ, ಕಾಳಜಿ ಹಾಗೂ ಗೌರವವನ್ನು ಬೆಳೆಸಿಕೊಂಡು ಪರಿಷತ್ತು ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದರು.

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ, ಸಂಗೀತ ಶಿಕ್ಷಕ ರೇವಣಸಿದ್ದಪ್ಪ, ವಚನಾಮೃತ ಬಳಗದ ಸಂಸ್ಥಾಪಕರಾದ ಸೌಮ್ಯ ಸತೀಶ್ ಅವರುಗಳು ಸಮಾರಂಭದ ವೇದಿಕೆಯಲ್ಲಿ  ಉಪಸ್ಥಿತರಿದ್ದರು. 

ಪರಿಷತ್ತಿನ ಗೌರವ ಕಾರ್ಯದರ್ಶಿ ರೇವಣ ಸಿದ್ದಪ್ಪ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸಿ‌.ಜಿ.ಜಗದೀಶ್ ಕೂಲಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.   ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್‌ ವಂದಿಸಿದರು.

ಜಿಲ್ಲಾ ಮತ್ತು ತಾಲ್ಲೂಕು ಪರಿಷತ್ತಿನ ಪದಾ ಧಿಕಾರಿಗಳಾದ ಕೆ.ಎಸ್‌.ವೀರೇಶ್‌ ಪ್ರಸಾದ್, ಎನ್.ಎಸ್.ರಾಜು, ಎಸ್.ಎಂ. ಮಲ್ಲಮ್ಮ, ಜ್ಯೋತಿ ಉಪಾಧ್ಯಾಯ, ರುದ್ರಾಕ್ಷಿ ಬಾಯಿ, ಭೈರವೇಶ್ವರ, ನಾಗರಾಜ ಸಿರಿಗೆರೆ, ಪರಮೇಶ್ವರಪ್ಪ ದಾಗಿನಕಟ್ಟೆ, ಬೇತೂರು ಎಂ ಷಡಾಕ್ಷರಪ್ಪ, ಆರ್.ಶಿವಕುಮಾರ್ ಹಾಗೂ ಬ್ಯಾಂಕ್ ನೌಕರರ ಸಂಘದ ವಿಶ್ವನಾಥ್ ಬಿಲ್ಲವ, ಪರಶುರಾಮ, ಹೆಚ್‌.ಎಸ್.ತಿಪ್ಪೇಸ್ವಾಮಿ, ಜಿ.ರಂಗಸ್ವಾಮಿ, ಅಜಿತ್ ಕುಮಾರ್, ಹೆಚ್‌.ಸುಗೂರಪ್ಪ, ನಾಗೇಶ್ವರಿ ನಾಯರಿ, ಸಾಕಮ್ಮ, ಶ್ರೀಧರ ಪೆರೂರು, ಜ್ಞಾನೇಶ್ವರ ಮಾಳವಾಡೆ, ಅಣ್ಣಪ್ಪ ನಂದಾ,  ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಎ.ಮಹಾಲಿಂಗಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಶಿವಶಂಕರ್, ಡಾ.ಎಂ.ಕೆ.ಗೌಡ, ಸಿಂಗಾಪುರ ಪರಮೇಶ್ವರಪ್ಪ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: Content is protected !!