ನ್ಯಾಮತಿ: ದೇವಸ್ಥಾನ ಪ್ರವೇಶೋತ್ಸವ, ಧರ್ಮ ಸಭೆಯಲ್ಲಿ ತರಳಬಾಳು ಶ್ರೀ
ನ್ಯಾಮತಿ, ಮಾ.3- `ಪ್ರತಿಯೊಬ್ಬರೂ ಅಂತರಂಗದ ದನಿಗೆ ಓಗೊಟ್ಟು ಧರ್ಮ ಮಾರ್ಗದಲ್ಲಿ ನಡೆದರೆ ನೆಮ್ಮದಿಯ ಬದುಕು ಸಾಗಿಸಬಹುದು ಎಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಅವರು ನ್ಯಾಮತಿ ತಾಲ್ಲೂಕಿನ ಹಳೇಮಳಲಿ ಗ್ರಾಮದಲ್ಲಿ ಭಾನುವಾರ ಬಸವೇಶ್ವರ ಸ್ವಾಮಿಯ ನೂತನ ದೇಗುಲದ ಪ್ರವೇಶೋತ್ಸವ, ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ಗೋಪುರ ಕಳಸಾರೋಹಣ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಕ್ತರು ದೇಗುಲದ ಗರ್ಭಗುಡಿಯನ್ನು ಪವಿತ್ರ ತಾಣವಾಗಿ ಭಾವಿಸಿದಂತೆ ತನ್ನ ಮನಸ್ಸನ್ನೂ ಶುದ್ಧವಾಗಿಟ್ಟುಕೊಳ್ಳಬೇಕು. ದೇವರ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಎಂಬುದು ತಪ್ಪು ಕಲ್ಪನೆ. ಭಕ್ತರಲ್ಲಿ ಭಕ್ತಿ ಪ್ರತಿಷ್ಠಾಪನೆ ಆದಾಗ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.
ಸಂಸಾರದ ಸಮಸ್ಯೆಗಳಿಗಾಗಿ ಮನೆಯ ಹೆಣ್ಣು ಮಕ್ಕಳು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಬಾರದು. ಗ್ರಾಮದ ಗುರು, ಹಿರಿಯರ ಸಮ್ಮುಖದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಮನುಷ್ಯನಿಗೆ ಹಣದ ಮೇಲಿನ ವ್ಯಾಮೋಹ ಕಡಿಮೆಯಾಗಬೇಕು. ಗಳಿಸಿದ ಸಂಪತ್ತು ಧರ್ಮ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳುವ ವಿವೇಚನೆ ಮೈಗೂಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಸಭೆಯಲ್ಲಿ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತ ಭೀಷ್ಮ ಸ್ವಾಮೀಜಿ , ಶಾಸಕ ಡಿ.ಜಿ.ಶಾಂತನಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡೇರಿ ಜಿ.ವಿಶ್ವನಾಥ್, ಸಾಧು ವೀರಶೈವ ಸಮಾಜದ ಹೊನ್ನಾಳಿ ಘಟಕದ ಅಧ್ಯಕ್ಷ ಎಚ್.ಎ.ಹುಣಸಘಟ್ಟ ಗದ್ದಿಗೇಶ್, ಟಿ.ಗೋಪನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ.ಜಿ.ಪಿ.ಮಲ್ಲೇಶಪ್ಪ, ಶಿಕ್ಷಕ ಕರಿಬಸಪ್ಪ ಕವಿತ ಮಾತನಾಡಿದರು.
ವೇದಿಕೆಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಅರಕೆರೆ ಎ.ಬಿ.ಹನುಮಂತಪ್ಪ, ಡಿ.ಎಸ್.ಪ್ರದೀಪ್ಗೌಡ, ಸಾಧು ವೀರಶೈವ ಸಮಾಜದ ನ್ಯಾಮತಿ ಘಟಕದ ಅಧ್ಯಕ್ಷ ಕೋಡಿಕೊಪ್ಪ ಶಿವಣ್ಣ, ಹಳೇಮಳಲಿ ಗ್ರಾಮದ ಹಿರಿಯ ಮುಖಂಡರಾದ ಮಾವಿನಕೋಟಿ ಮಂಜಪ್ಪ, ಎಂ.ನಾಗರಾಜಪ್ಪ, ಪಿ.ಮಂಜಪ್ಪ, ಎಸ್.ಎಂ.ಚಂದ್ರಪ್ಪ, ಕೆ.ಆರ್.ಮಲ್ಲೇಶಪ್ಪ, ಎಂ.ಪಿ.ಷಡಾ ಕ್ಷರಿ, ಹಾಲಿನ ಡೈರಿ ಅಧ್ಯಕ್ಷ ಎಂ.ಗಣೇಶ್, ಎಂ.ಇ. ನವೀನ, ಜಿ.ಎಚ್.ಮಲ್ಲಿಕಾರ್ಜುನ, ಕೆ.ಎಸ್.ರಾಜಪ್ಪ, ಜಿ.ಪಿ.ರಮೇಶ್ಪಟೇಲ್, ಎಚ್.ಆರ್.ಮಲ್ಲೇಶಪ್ಪ, ಎಸ್.ಎಂ.ರಾಜು ಸೇರಿದಂತೆ ಇತರರಿದ್ದರು.