ಮುರುಘಾಮಠದಲ್ಲಿ ಶೂನ್ಯಪೀಠಾರೋಹಣ, ಪಲ್ಲಕ್ಕಿ ಉತ್ಸವ

ಮುರುಘಾಮಠದಲ್ಲಿ ಶೂನ್ಯಪೀಠಾರೋಹಣ, ಪಲ್ಲಕ್ಕಿ ಉತ್ಸವ

ಚಿತ್ರದುರ್ಗ,  ಅ. 26-  ಚಿತ್ರದುರ್ಗದ ಶೂನ್ಯಪೀಠ ಪರಂಪರೆಯ ಮುರುಘಾ ಮಠದಲ್ಲಿ   ಕಳೆದ ಅ. 21ನೇ ತಾರೀಖಿನಿಂದ ನಡೆದುಕೊಂಡು ಬಂದಿರುವ ಶರಣ ಸಂಸ್ಕೃತಿ ಉತ್ಸವದಲ್ಲಿಂದು ಶೂನ್ಯಪೀಠಾರೋಹಣ ಕಾರ್ಯಕ್ರಮ ಜರುಗಿತು. ಧರ್ಮಗುರು ಬಸವಣ್ಣ ಮತ್ತು ಶೂನ್ಯ ಪೀಠದ ಪ್ರಥಮ ಅಧ್ಯಕ್ಷ ಅಲ್ಲಮ ಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತ ಪ್ರತಿಗಳ ಮೆರವಣಿಗೆ ನಡೆಸಲಾಯಿತು.  

ಶ್ರೀ ಮುರುಗಿ ಶಾಂತವೀರ ಮಹಾಸ್ವಾಮಿಗಳ ಕಂಚಿನ ಪುತ್ಥಳಿಯನ್ನು ಇಡುವುದರ ಮೂಲಕ ಶೂನ್ಯ ಪೀಠಾರೋಹಣ ಮಾಡಲಾಯಿತು.  

ಬಂಗಾರದ ಕಿರೀಟ, ಬಂಗಾರದ ಪಾದುಕೆಗಳು ಹಾಗೂ ಕರ್ತೃ ಮುರುಘೇಶನಿಗೆ ಬಂಗಾರದ ರುದ್ರಾಕ್ಷಿ ಸರ ಹಾಕುವುದರ ಮೂಲಕ ಪ್ರಧಾನ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರು ಹಾಗೂ ಶ್ರೀ ಮುರುಘಾಮಠದ ಆಡಳಿತಾಧಿಕಾರಿ ಶ್ರೀಮತಿ ಬಿ.ಎಸ್.ರೇಖಾ, ಶರಣ ಸಂಸ್ಕೃತಿ ಉತ್ಸವ-2023ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಉಸ್ತುವಾರಿ ಶ್ರೀಗಳಾದ ಶ್ರೀ ಬಸವಪ್ರಭು ಸ್ವಾಮಿಗಳು, ಎಸ್.ಜೆ.ಎಂ.ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಎಂ.ಭರತ್‍ಕುಮಾರ್, ಶರಣ ಸಂಸ್ಕೃತಿ ಉತ್ಸವ-2023ರ ಕಾರ್ಯಾಧ್ಯಕ್ಷ    ಕೆ.ಸಿ.ನಾಗರಾಜ್‍ ಅವರುಗಳ  ನೇತೃತ್ವದಲ್ಲಿ ಶೂನ್ಯ ಪೀಠಾರೋಹಣ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ನಾಡಿನ ವಿವಿಧ ಮಠಾಧೀಶರು,  ಸಾಧಕರು, ಭಕ್ತರು, ಎಸ್.ಜೆ.ಎಂ.ವಿದ್ಯಾಪೀಠದ
ಆಡಳಿತ ಮಂಡಳಿ ಸದಸ್ಯರು, ಶಾಲಾ-
ಕಾಲೇಜುಗಳ ಮುಖ್ಯಸ್ಥರುಗಳು, ನೌಕರ
ವರ್ಗದವರು ಹಾಗೂ ಜನ ಸಮೂಹದ ಜಯ ಘೋಷಣೆಗಳೊಂದಿಗೆ ಶ್ರೀಮಠದಲ್ಲಿ ಶೂನ್ಯ ಪೀಠಾರೋಹಣವನ್ನು ಸಾಕ್ಷೀಕರಿಸಿದರು. ವಿವಿಧ ಕಲಾತಂಡಗಳು ಶ್ರೀಮಠದ ರಾಜಾಂಗಣದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.

ಶ್ರೀಮಠದ ಪ್ರಾಂಗಣದಲ್ಲಿ ಅಲ್ಲಮ ಪ್ರಭುದೇವರ ಮತ್ತು ಧರ್ಮಗುರು ಬಸವಣ್ಣನವರ ಮತ್ತು ಪ್ರಾಚೀನ ಹಸ್ತ ಪ್ರತಿಗಳನ್ನು ಪಲ್ಲಕ್ಕಿಯಲ್ಲಿ ಇಡುವುದರ ಮೂಲಕ ಪ್ರಧಾನ  ಆಡಳಿತಾಧಿಕಾರಿಗಳು  ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯು ಜಾನಪದ ಕಲಾತಂಡಗಳೊಂದಿಗೆ ಶ್ರೀಮಠದ ಆವರಣದಲ್ಲಿ ವಿವಿಧ ಶಾಖಾ ಮಠಾಧೀಶರು, ಹರ ಗುರು ಚರಮೂರ್ತಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

error: Content is protected !!