ಮಲೇಬೆನ್ನೂರು, ಜು. 18 – ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಧಾವಿಸಿ ದರೆ ಮಕ್ಕಳ ದಾಖಲಾತಿ ಹೆಚ್ಚುತ್ತದೆ. ಜೊತೆಗೆ ಸರ್ಕಾರಿ ಶಾಲೆಗಳ ಉಳಿವಿಗೆ ಕಾರಣವಾಗುತ್ತದೆ ಎಂದು ಇಂಡಿಯಾ ಸುಧಾರ್ ಟ್ರಸ್ಟ್ ಸದಸ್ಯ ಸುಧೀಂದ್ರ ಅವರು ಅಭಿಪ್ರಾಯಪಟ್ಟರು.
ಸಲಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.
ಇಂಡಿಯಾ ಸುಧಾರ್ ಸಂಸ್ಥೆ ಸಿನೋಪ್ಸಿಸ್ ಕಂಪನಿಯ ಸಹಯೋಗದಲ್ಲಿ ಹರಿಹರ ತಾಲ್ಲೂಕಿನ 27 ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು 5 ಪ್ರೌಢ ಶಾಲೆಗಳ ಒಟ್ಟು 4195 ಮಕ್ಕಳಿಗೆ 17600 ನೋಟ್ ಪುಸ್ತಕಗಳನ್ನು ಈ ವರ್ಷ ವಿತರಿಸಲಾಗಿದೆ ಎಂದರು.
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಅಶ್ಪಾಕ್ ಅಹಮದ್ ಅವರು, ಇಂಡಿಯಾ ಸುಧಾರ್ ಸಂಸ್ಥೆಯ ಮುಖ್ಯಸ್ಥ ವಿನೋದ್ ಮುರ್ಗೋಡ್ ಹಾಗೂ ಶಿಕ್ಷಕ ಕಿರಣ್ ಕುಮಾರ್ ಹೆಗಡೆ ಅವರಿಗೆ ಶಾಲಾ ಸಿಬ್ಬಂದಿ ಹಾಗೂ ಮಕ್ಕಳ ಪರವಾಗಿ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ಸುನೀತಾ, ಉಪಾಧ್ಯಕ್ಷ ಹೋಬಳಿ ರಾಜಪ್ಪ, ಗ್ರಾಮ ಪಂಚಾಯಿತಿ ಸದಸ್ಯ ವಿಜಯಕುಮಾರ್, ಮೈಲಾರಪ್ಪ, ಶಿಕ್ಷಕರಾದ ಮಲ್ಲಿಕಾರ್ಜುನ, ಪರಶುರಾಮ, ಉಮಾ ಹಾಗೂ ಬಿ. ಸಿ. ರಮೇಶ್ ಹಾಜರಿದ್ದರು.