ದುಷ್ಟ ಪದ್ಧತಿ, ವಾಮಾಚಾರ ಪ್ರತಿಬಂಧ, ನಿರ್ಮೂಲನೆ ಕಾಯ್ದೆ ಬಗ್ಗೆ ಜಾಗೃತಿ ಅವಶ್ಯಕ

ಜಗಳೂರು, ಅ.4- ವಾಮಾಚಾರ ಹಾಗೂ ಅಂತಹ ಇತರೆ ಅಮಾನವೀಯ ದುಷ್ಟ, ದುರಾ ಚಾರ ಪದ್ಧತಿಗಳನ್ನು ಪ್ರತಿಬಂಧಿಸುವುದಕ್ಕಾಗಿ ಸರ್ಕಾರ  ಯುಕ್ತವಾದ ಕಾನೂನು ಮತ್ತು ಸಾಮಾಜಿಕ ಕ್ರಮ ತೆಗೆದುಕೊಳ್ಳುವುದು ಅತ್ಯಂತ ಅವಶ್ಯಕತೆ ಇರುವುದರಿಂದ ಈ ಕಾಯ್ದೆಯ ಬಗ್ಗೆ ಪರಿಶಿಷ್ಟ ಜನಾಂಗದವರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಆಯುಕ್ತರು (ಬೆಂಗಳೂರು) ಹಾಗೂ ಉಪ ನಿರ್ದೇಶಕರು (ದಾವಣಗೆರೆ) ಇವರ ಆದೇಶದ ಮೇರೆಗೆ  `ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಅಧಿನಿಯಮ 2017 ಮತ್ತು ನಿಯಮಗಳು 2020′ ಈ  ಕಾಯ್ದೆ ಪ್ರತಿಯನ್ನು ಹಸ್ತಾಂತರ ಮಾಡಿ ಮಾತನಾಡಿದರು.

ತಾಲ್ಲೂಕು ದಂಡಾಧಿಕಾರಿ ಡಾ.ನಾಗವೇಣಿ,  ಪೊಲೀಸ್ ಇಲಾಖೆಯ ಆರಕ್ಷಕ ವೃತ್ತ ನಿರೀಕ್ಷಕ (ಸಿಪಿಐ) ದುರುಗಪ್ಪ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರಾಜು ಡಿ. ಬಣಕಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿ ಕಾರಿ ಮಲ್ಲನಾಯ್ಕ ಅವರಿಗೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪುಸ್ತಕವನ್ನು ಹಸ್ತಾಂತರ ಮಾಡಿದರು.

ದುಷ್ಟ ಮತ್ತು ದುರಾಚಾರಗಳಿಂದ ಸಮಾಜದಲ್ಲಿನ ಸಾಮಾನ್ಯ ಜನರನ್ನು ರಕ್ಷಿಸುವ ದೃಷ್ಟಿಯಿಂದ ಸಮಾಜದ ಸಾಮಾನ್ಯ ಜನರನ್ನು ಶೋಷಿಸುವ ಮತ್ತು ಅದರಿಂದಾಗಿ ಸಮಾಜದ ಸಾಮಾಜಿಕ ವ್ಯವಸ್ಥೆಯನ್ನೇ ಹಾಳು ಮಾಡುವ ದುರಾಚಾರದಲ್ಲಿ ವಿಶ್ವಾಸ ಹುಟ್ಟಿಸಿ ಮೋಸ ಮಾಡುವವರು ಮತ್ತು ಮಾಟಗಾರರು ಸಾಮಾನ್ಯವಾಗಿ ವಾಮಾಚಾರವೆಂದು ಕರೆಯಲಾಗುವ ಅಮಾನವೀಯ ದುಷ್ಟ ಮತ್ತು ದುರಾಚಾರ ಪದ್ಧತಿಗಳ ವಿರುದ್ಧ ಸಮರ ಸಾರುವುದಕ್ಕಾಗಿ ಮತ್ತು ಅವುಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ಹಾಗೂ ಸಮಾಜದಲ್ಲಿನ ಜಾಗೃತಿ ಮೂಡಿಸಲು ಪ್ರತಿ ಯೊಬ್ಬರೂ ಪ್ರಯತ್ನಿಬೇಕು ಎಂದರು.

ಅರಿವನ್ನು ಮೂಡಿಸುವುದಕ್ಕೆ ಹಾಗೂ ಆರೋಗ್ಯಕರ ಮತ್ತು ಸುರಕ್ಷಿತ ಸಾಮಾಜಿಕ ಪರಿಸರವನ್ನು ಸೃಷ್ಠಿಸುವುದಕ್ಕಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗಾಗಿ ಒಂದು ಅಧಿನಿಯಮವಾಗಿ ಕಾಯ್ದೆ ಜಾರಿಗೆ ಬಂದಿದೆ ಎಂದರು.

ವಾಮಾಚಾರಗಳು ಹಾಗೂ ದುಷ್ಟ ಶಕ್ತಿಗಳಿಂ ದಾಗಿ ಮೋಸ ಮಾಡುವವರು ಕೈಯಲ್ಲಿ ಸಿಕ್ಕ ಸಮಾ ಜದಲ್ಲಿನ ಸಾಮಾನ್ಯ ಜನರು ಶೋಷಣೆಗೆ ಒಳಗಾಗದಂತೆ ಜಾಗೃತಿ ಮೂಡಿಸಬೇಕು ಎಂದರು.

ಸಾಮಾನ್ಯ ಜನರ ನಂಬಿಕೆಗಳನ್ನು ಹಾಳು ಮಾಡಿ  ಸಮಾಜದಲ್ಲಿ ಭಯ ಉಂಟು ಮಾಡು ತ್ತಿರುವ ಮಾಟಗಾರರು ಮತ್ತು ಮಂತ್ರವಾದಿ ಗಳೆಂದು ಹೇಳಿಕೊಂಡು ಹಾಗೂ ಸಮಾಜ ವಿರೋಧಿ ಹಾನಿಕಾರಕ ಚಟುವಟಿಕೆಗಳು ಮತ್ತು ಅವರ ದುರಾಚಾರ ಪದ್ಧತಿಗೆ ಬಲಿಯಾಗುತ್ತಿರುವ ಸಾಮಾನ್ಯ ಜನರನ್ನು ರಕ್ಷಣೆ ಮಾಡುವುದಕ್ಕಾಗಿ ಕಾಯ್ದೆಯು ಉಪಯುಕ್ತವಾಗಿದೆ ಎಂದು ಮಹೇಶ್ ತಿಳಿಸಿದ್ದಾರೆ.

error: Content is protected !!