ಯುವಜನರು ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು

ಜಗಳೂರಿನ ಕಾರ್ಯಕ್ರಮದಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಕಳಕಳಿ

ಜಗಳೂರು, ಏ.14- ವಿದ್ಯಾರ್ಥಿ ಯುವಜನರು ಸಂವಿಧಾನ ಶಿಲ್ಪಿ  ಡಾ. ಅಂಬೇಡ್ಕರ್  ಅವರ   ಹೋರಾಟದ ಜೀವನ ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಳ್ಳ ಬೇಕು ಎಂದು ಶಾಸಕ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ಕಿವಿಮಾತು ಹೇಳಿದರು.

ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ  130ನೇ  ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಬಾಲ್ಯದಿಂದಲೇ ಸಾಕಷ್ಟು  ಕಷ್ಟಗಳ ಮಧ್ಯೆ, ವಿದೇಶಗಳಲ್ಲಿ ಶಿಕ್ಷಣ ಪಡೆದು ದೇಶಕ್ಕೆ ಶ್ರೇಷ್ಠ ಸಂವಿಧಾನ ರಚಿಸಿದ ಫಲವಾಗಿ ಇಂದು ಪ್ರತಿಯೊಬ್ಬರೂ ಮೀಸಲಾತಿ ಪಡೆದು, ಉನ್ನತ ಹುದ್ದೆಗಳನ್ನು ಅಲಂಕರಿಸಿ,  ಸಮಾಜದಲ್ಲಿ  ಗೌರವಯುತ ಬದುಕು
ಸಾಗಿಸುತ್ತಿದ್ದಾರೆ. ಸಂವಿಧಾನ ರಚಿಸಿದ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವರ ಮಾರ್ಗದರ್ಶ ನದಡಿ ಸಾಗೋಣ ಎಂದ ಅವರು,
ದಲಿತ ಸಮುದಾಯಗಳು ಮೂಲ ಕುಲಕಸುಬುಗಳಿಗೆ ಸೀಮಿತವಾಗದೆ ಮಕ್ಕಳಿಗೆ ಶಿಕ್ಷಣ ಕೊಡಿಸಿ
ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನ್ ನಾಯಕ ಧಾರಾವಾಹಿ ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಮೂಡಿಸಿ, ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ಸಮಾನತೆಗೆ ಸಾಕ್ಷಿಯಾಗಿದ್ದು, ವಾಹಿನಿ ಮುಖ್ಯಸ್ಥರ ಕಾರ್ಯ ಶ್ಲಾಘನೀಯ ಎಂದರು. 

ಶೀಘ್ರದಲ್ಲಿ  ತಾಲ್ಲೂಕಿನ ಕೆರೆಗಳು ಭರ್ತಿ: ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ  57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ಜೂನ್‌-ಜುಲೈ ವೇಳೆಗೆ ಮೊದಲ ಹಂತದಲ್ಲಿ 17 ಕೆರೆಗಳಿಗೆ  ನೀರು ಭರ್ತಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಉಪನ್ಯಾಸಕ ಬಿ. ನಾಗಲಿಂಗಪ್ಪ, 45 ಲಕ್ಷ ಪುಸ್ತಕ ಅಭ್ಯಾಸ ಮಾಡಿ, 26 ಪದವಿ ಪಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಂದಿನ ವಿದ್ಯಾರ್ಥಿ ಯುವ ಸಮೂಹಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದರು.

ತಾ.ಪಂ. ಸದಸ್ಯ ಬಸವರಾಜ್, ದಲಿತ ಮುಖಂಡ ಭಾರತ್ ಗ್ಯಾಸ್ ಮಾಲೀಕ ಓಬಣ್ಣ, ವಕೀಲರಾದ ಹನುಮಂತಪ್ಪ, ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತಾ ಶಿವಣ್ಣ, ಜಿ.ಪಂ‌. ಸದಸ್ಯ ಎಸ್.ಕೆ. ಮಂಜುನಾಥ್   ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ತಾ.ಪಂ. ಸದಸ್ಯರಾದ ತಿಮ್ಮೇಶ್, ಪ.ಪಂ. ಸದಸ್ಯರಾದ ಲುಕ್ಮಾನ್, ನಿರ್ಮಲ, ನವೀನ್, ದೇವರಾಜ್, ಲೋಲಾಕ್ಷಮ್ಮ  ಮಂಜಮ್ಮ, ಪಾಪಲಿಂಗಪ್ಪ, ತಹಶೀಲ್ದಾರ್ ಡಾ. ನಾಗ ವೇಣಿ, ತಾ.ಪಂ. ಇಓ ಮಲ್ಲಾನಾಯ್ಕ, ಪ.ಪಂ. ಮುಖ್ಯಾಧಿಕಾರಿ ರಾಜು ಡಿ. ಬಣಕಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ದಲಿತ ಸಂಘ ಟನೆ ಮುಖಂಡರಾದ ಸತೀಶ್, ಕುಬೇಂದ್ರಪ್ಪ, ಹನುಮಂತಪ್ಪ, ಸತ್ಯಮೂರ್ತಿ ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!