ಮಲೇಬೆನ್ನೂರು ಧಾರ್ಮಿಕ ಕಾರ್ಯಕ್ರಮದಲ್ಲಿ ರಂಭಾಪುರಿ ಜಗದ್ಗುರುಗಳ ಕರೆ
ಮಲೇಬೆನ್ನೂರು, ಏ. 28- ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದು, ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳು ಏನೆಲ್ಲಾ ಆರೋಪ-ಪ್ರತ್ಯಾರೋಪ ಮಾಡುತ್ತಿವೆ. ನೀವು ಮಾತ್ರ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಸಜ್ಜನರನ್ನು ಆಯ್ಕೆ ಮಾಡಿ ಎಂದು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಜನತೆಗೆ ಕಿವಿಮಾತು ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ 3 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮೊನ್ನೆ ಹಮ್ಮಿಕೊಂಡಿದ್ದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.
ನಾಡಿನ ಹಾಗೂ ಜನರ ಹಿತಕಾಯುವ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ, ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಹೊಂದಿರುವ, ಧರ್ಮ ರಕ್ಷಣೆ, ಸಮಾಜದಲ್ಲಿ ಶಾಂತಿ, ಸಾಮರಸ್ಯ ಕಾಪಾಡುವ ನಾಯಕನನ್ನು ನಿಮ್ಮ ಮತದಾನದಿಂದ ಗೆಲ್ಲಿಸಿ ಎಂದು ಸ್ವಾಮೀಜಿ ಕರೆ ನೀಡಿದರು.
ಕಲಿಯುಗದಲ್ಲಿ ನೀವು ಏನೇ ಮಾಡಿದರೂ ದೇವರು ಪ್ರತ್ಯಕ್ಷವಾಗುವುದಿಲ್ಲ. ಆದರೆ ಗುರು-ಹಿರಿಯರಲ್ಲಿ ನೀವು ತೋರಿಸುವ ನಿಜವಾದ ಭಕ್ತಿ, ಆಚರಣೆಗಳಿಂದಾಗಿ ದೇವರನ್ನು ಕಾಣಬಹುದು. ಭಾರತದ ಸನಾತನ ಸಂಸ್ಕೃತಿಯಲ್ಲಿ ಮೂರುವರೆ ಮುಹೂರ್ತಕ್ಕೆ ವಿಶೇಷ ಮನ್ನಣೆ ಇದ್ದು, ಹಾಗಾಗಿ ಯುಗಾದಿ, ವಿಜಯದಶಮಿ, ದೀಪಾವಳಿ, ಅಕ್ಷಯ ತೃತೀಯ, ಬಸವೇಶ್ವರರ ಜಯಂತಿಗಳು ವಿಶೇಷ ಸ್ಥಾನಮಾನ ಪಡೆದುಕೊಂಡಿವೆ. ಈ ದಿನ ಎಲ್ಲಾ ಕಡೆ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತವೆ ಎಂದು ಶ್ರೀಗಳು ವಿವರಿಸಿದರು.
ಜಿಗಳಿ ಕ್ಯಾಂಪಿನ ಕಾಲಜ್ಞಾನಿ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಬಿ.ಜಿ. ಅಜಯ್ ಕುಮಾರ್, ಎನ್.ಎ. ಮುರುಗೇಶ್ ಆರಾಧ್ಯ, ವಿನಾಯಕ ಬಸ್ ಮಾಲೀಕ ಹರೀಶ್, ಹಿರಿಯರಾದ ಅಥಣಿ ವೀರಣ್ಣ, ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಬಿ. ಪಂಚಪ್ಪ, ಬಿ. ನಾಗೇಂದ್ರಪ್ಪ, ಬಿ. ಚಿದಾನಂದಪ್ಪ, ಎನ್.ಕೆ. ವೃಷಭೇಂದ್ರಪ್ಪ, ಬಿ.ವಿ. ರುದ್ರೇಶ್, ಬಿ. ಮಹಾರುದ್ರಪ್ಪ, ಬಿ. ಮಲ್ಲಿಕಾರ್ಜುನ್, ಬಿ. ಶಂಭುಲಿಂಗಪ್ಪ, ಜಿಗಳಿಯ ಜಿ. ಆನಂದಪ್ಪ, ಕುಂಬಳೂರು ವಾಸು, ಪಿ.ಹೆಚ್. ಶಿವಕುಮಾರ್, ಭೋವಿಕುಮಾರ್, ನಂದಿಗಾವಿ ರಾಜೀವ್ ಸೇರಿದಂತೆ ಇತರರು ಭಾಗವಹಿಸಿದ್ದರು.