ಜಗಳೂರು, ಏ.28- ಪಟ್ಟಣದ ಶ್ರೀ ದೊಡ್ಡ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಸಂಜೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು.
ಸಂಜೆ ದೇವಾಲಯದಿಂದ ಹೊರಟ ದೇವಿಯ ರಥೋತ್ಸವದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಂಚವಾದ್ಯ, ಡೊಳ್ಳು ಕುಣಿತ, ಚಂಡಿ ವಾದ್ಯ, ಗೊಂಬೆ ಕುಣಿತ, ನೃತ್ಯ ಮತ್ತು ವೇಷಭೂಷಣ ಮುಂತಾದ ಸಾಂಸ್ಕೃತಿಕ ವೈಭವ ಹಾಗೂ ಭಕ್ತರ ಜಯ ಘೋಷದೊಂದಿಗೆ ಸಾಗಿತು. ಮಾರ್ಗದುದ್ದಕ್ಕೂ ಭಕ್ತಾದಿಗಳು ರಥದ ಮೇಲೆ ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಮಾರಿಕಾಂಬಾ ದೇವಸ್ಥಾನದಿಂದ ಅರ್ಧ ಕಿಲೋಮೀಟರ್ ದೂರದ ಜಾತ್ರಾ ಗದ್ದುಗೆಗೆ ರಥವನ್ನು ಭಕ್ತಾದಿಗಳು ಸುಮಾರು ಒಂದು ತಾಸುಗಳ ಅವಧಿಯಲ್ಲಿ ಎಳೆದರು. ನಂತರ ಜಾತ್ರಾ ಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸುವ ಕಾರ್ಯ ನೆರವೇರಿತು.
ರಥ ಬೀದಿಯುದ್ದಕ್ಕೂ ಸಾಮಾಜಿಕ ಕಾರ್ಯಕರ್ತರಿಂದ ಶರಬತ್, ಮಜ್ಜಿಗೆ, ಕುಡಿಯುವ ನೀರು ಸೇರಿದಂತೆ ವಿವಿಧ ಪಾನಿಯಗಳನ್ನು ಭಕ್ತರಿಗೆ ಪೂರೈಕೆ ಮಾಡಲಾಯಿತು. ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.