ಮಂದಿರಕ್ಕೆ ಬಂದ ರಾಮ, ಮನೆ-ಮನಗಳಿಗೆ ಬರಲಿ…

ಅಬ್ಬಾ !!!, 

ದೇವರಿಗೂ ಅಂಟಿದ ವಿವಾದ ಕೊನೆಗೂ ಬಗೆಹರಿಯಿತು. ಇನ್ನೇನು ಸ್ವಲ್ಪ ದಿನಗಳಲ್ಲಿ ರಾಮ ಮಂದಿರದ ನಿರ್ಮಾಣವು ಭವ್ಯವಾಗಿ ನೆರವೇ ರುತ್ತದೆ. ಅದಕ್ಕೂ ಮೊದಲು ಭಾರತೀಯರೆಲ್ಲರೂ ಚಿಂತಿಸಬೇಕಾದ ವಿಷಯವೇನೆಂದರೆ, ಬೆಳೆಯುವ ಇಚ್ಛೆ ಪ್ರಬಲವಾಗಿದ್ದರೆ, ಶಿಲೆಯು ನೆಲವಾಗುತ್ತದೆ ಯಂತೆ. ಆದರೆ, ಈ ನೆಲದ ಇಚ್ಛೆ ಎಷ್ಟು ಪ್ರಬಲ ವಾಗಿತ್ತೆಂದರೆ, ಎಲ್ಲಾ ವಿವಾದಗಳನ್ನು ದಾಟಿ ಶಿಲೆಯೇ ದೇವರಾಗಿ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಡುವಂತಾಗಿದೆ.

ರಾಮನಾಮವೇ ರಾಮನಿಗಿಂತ ಬಲಿಷ್ಠ. ಆದ್ದರಿಂದ ಕಲಿಯುಗದಲ್ಲೂ ರಾಮನಾಮ ಇನ್ನೂ ಪ್ರಚಲಿತ. ತ್ರೇತಾಯುಗದ ಈ ಪದ ಭಾರತೀಯರ ನರನಾಡಿಗಳಲ್ಲಿ ಇನ್ನೂ ಮಿಡಿಯುತ್ತಲೇ ಇದೆ.

ರಾಮಾಯಣ ಆದರ್ಶಕ್ಕೆ ಮಹಾಭಾರತ ನಿತ್ಯಜೀವನಕ್ಕೆ ಅನುಕರಣೆ ಯಾಗುತ್ತದೆ. ಆದರೂ ರಾಮನಿಗೆ ಮಾತ್ರ ಒಂದು ವಿಶಿಷ್ಟ ಸ್ಥಾನವಿದೆ. ಅವನ ನಾಯಕತ್ವ, ಸತ್ಯನಿಷ್ಠೆ, ಪಿತೃಭಕ್ತಿ, ಭ್ರಾತೃತ್ವ, ಪ್ರಜಾಹಿತ, ಪತ್ನಿ ನಿಷ್ಠೆ ಮತ್ತು ಧರ್ಮ ನಿಷ್ಠೆಯಲ್ಲಿ ಅವನನ್ನು ಹಿಂದಿಕ್ಕಲು ಯಾರಿಗೂ ಸಾಧ್ಯವಿಲ್ಲ. ರಾಮನನ್ನು ಆಚರಣೆಯಲ್ಲಿ ಅಲ್ಲ, ಆದರ್ಶ ವಾಗಿಟ್ಟು ಕೊಳ್ಳುವುದೂ ನರ ಮನುಷ್ಯರಾದ ನಮಗೆ ಬಹಳ ಕಷ್ಟ. ರಾಮನನ್ನು ನಾಯಕನನ್ನಾಗಿ ಮಾಡಿದ ರಾಮಾಯಣವನ್ನು ಓದಿದ, ಕೇಳಿದ ಗೊತ್ತಿರುವ ಎಲ್ಲರೂ ರಾಮನನ್ನು ಒಬ್ಬ ದೇವರಾಗಿ ಪೂಜಿಸಿದೆವು, ಆರಾಧಿಸಿದೆವು. ಆದರೆ, ರಾಮ ಮತ್ತು ಕೃಷ್ಣರ ನಾಯಕತ್ವಗಳನ್ನು ಒಪ್ಪಿಕೊಂಡ ನಾವು, ಅವರು ಹೇಳಿದ ಮಾತುಗಳು, ತತ್ವ-ಆದರ್ಶಗಳನ್ನು ಪಾಲಿಸುವುದರಲ್ಲಿ ಸೋಲುತ್ತಿದ್ದೇವೆ.

ಈಗಲೂ ನಾವು ಮಾಡುತ್ತಿರುವುದು ಇದನ್ನೇ. ನಾಯಕನನ್ನು ಅನುಕರಿಸುತ್ತೇವೆ. ಆದರೆ, ಅವರ ಆದರ್ಶಗಳನ್ನು ಪಾಲಿಸುವುದಿಲ್ಲ.

ಉದಾಹರಣೆಗೆ 12ನೇ ಶತಮಾನದ ಬಸವಣ್ಣನು ಒಬ್ಬ ಸಾಮಾನ್ಯನಾಗಿದ್ದು, ಸಮಾಜ ಸುಧಾರಣೆಗಾಗಿ ಕಾಯಕ ತತ್ವದ ಮೂಲಕ ಕ್ರಾಂತಿಯನ್ನೇ ಮಾಡಿದರು. ಅವರ ತತ್ವ-ಆದರ್ಶಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳದೇ ಅವರಿಗೆ ದೇವರ ರೂಪ ಕೊಟ್ಟು ಪೂಜಿಸುತ್ತಿದ್ದೇವೆ.

ಹಿಂದಿನಿಂದಲೂ ಭಾರತದಲ್ಲಿ ಈ ವಾಡಿಕೆ ಮುಂದುವರೆಯುತ್ತಾ ಬಂದಿದೆ. ಆದರ್ಶವಂತ ವ್ಯಕ್ತಿಗಳನ್ನು ದೇವರು ಮಾಡಿ, ಪೂಜಿಸುತ್ತೇವೇಯೇ ಹೊರತು ಅವರು ಹೇಳಿದ ಸಂದೇಶಗಳನ್ನು, ಅವರ ಆದರ್ಶವನ್ನು ಯಾರೂ ಪಾಲಿಸುವುದಿಲ್ಲ. ರಾಮ, ಕೃಷ್ಣ, ಬುದ್ಧ ಮತ್ತು ಬಸವಣ್ಣನು ದೇವರಾಗಿ ಪೂಜಿಸುತ್ತಿರುವುದು ಇದೇ ಕಾರಣಕ್ಕೆ. ಭಾರತೀ ಯರಿಗೆ ಭಕ್ತಿಯನ್ನು ಯಾರೂ ಹೇಳಿಕೊಡ ಬೇಕಾಗಿಲ್ಲ. ಒಬ್ಬ ವ್ಯಕ್ತಿಯನ್ನು ಪೂಜಿಸಿ, ದೇವರ ರೂಪ ಕೊಡುವುದರ ಜೊತೆಗೆ ಅವರು ಹೇಳಿದ ಸಂದೇಶ ಅವರು ಬದುಕಿದ ರೀತಿಯನ್ನು ನಮ್ಮ ಜೀವನಗಳಲ್ಲಿ ಕಿಂಚಿತ್ತಾದರೂ ಅಳವಡಿಸಿಕೊಂಡರೆ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸಾಗುತ್ತದೆ. ಆಗ ಎಲ್ಲರಲ್ಲಿ ರಾಮ ಇರುತ್ತಾನೆ, ಸಮಾಜ ತನ್ನಿಂತಾನೇ ಸುಧಾರಣೆಯಾಗುತ್ತದೆ.


ಪದ್ಮ ರವಿ,
ಬೆಂಗಳೂರು.
[email protected]

 

error: Content is protected !!