ಆಪತ್ತಿಗೊಂದೇ ಸಂಖ್ಯೆ 112

ಪೊಲೀಸ್ ಇಲಾಖೆ, ಅಗ್ನಿಶಾಮಕ ಹಾಗೂ ಆರೋಗ್ಯ ಇಲಾಖೆ ಸಹಾಯ ವಾಣಿಗಳ ವಿಲೀನ

ದಾವಣಗೆರೆ, 6 – ಪೊಲೀಸ್ ನೆರವು, ಬೆಂಕಿ ಅವಘಡ ಹಾಗೂ ಆರೋಗ್ಯ ಇಲಾಖೆಯ ನೆರವಿನ ಸಹಾಯವಾಣಿಗಳನ್ನು §112’ರಲ್ಲಿ ವಿಲೀನಗೊಳಿಸಲಾಗಿದೆ. ಇದೊಂದೇ ಸಹಾಯ ವಾಣಿ ಮೂಲಕ ಸಾರ್ವಜನಿಕರು ತುರ್ತು ಸ್ಪಂದನೆ ಪಡೆದು ಕೊಳ್ಳಬಹುದು ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ದಾವಣಗೆರೆ ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬಂದಿದೆ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಸಹಾಯವಾಣಿ ಆರಂಭವಾಗಿದೆ ಎಂದಿದ್ದಾರೆ.

ಮೇಲ್ – ಆಪ್ : ಪೊಲೀಸ್, ಅಗ್ನಿಶಾಮಕ ಹಾಗೂ ಆಂಬ್ಯುಲೆನ್ಸ್‌ಗಾಗಿ 112 ಸಂಖ್ಯೆಗೆ ಕರೆ ಮಾಡಿದರೆ ಸಾಕು. ಈ ಸಂಖ್ಯೆಯು ಇ.ಆರ್.ಎಸ್.ಎಸ್. (ತುರ್ತು ಸ್ಪಂದನಾ ಬೆಂಬಲ ವ್ಯವಸ್ಥೆ) ಸಂಪರ್ಕಿಸುತ್ತದೆ. ಅಲ್ಲಿಂದ ಅಗತ್ಯ ನೆರವು ತಲುಪಿಸಲಾಗುತ್ತದೆ ಎಂದವರು ಹೇಳಿದ್ದಾರೆ.

ದೂರವಾಣಿ ಕರೆಯಷ್ಟೇ ಅಲ್ಲದೇ ಇ-ಮೇಲ್ ಆದ [email protected] ಮೂಲಕ ನೆರವು ಕೇಳಬಹುದು. ಇಲ್ಲವೇ 112 India ಆಪ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

15 ನಿಮಿಷಗಳಲ್ಲಿ ನೆರವು : 112 ಕರೆಯು ಬೆಂಗಳೂರಿನ ಏಕೀಕೃತ ತುರ್ತು ಸ್ಪಂದನಾ ಕೇಂದ್ರ ಹಾಗೂ ಜಿಲ್ಲಾ ಸಮನ್ವಯ ಕೇಂದ್ರಕ್ಕೆ ತಲುಪುತ್ತದೆ. ಕರೆ ಬಂದ 15 ನಿಮಿಷಗಳಲ್ಲೇ ಇ.ಆರ್.ಎಸ್.ಎಸ್. ವಾಹನ ಸ್ಥಳಕ್ಕೆ ತಲುಪಿ ನೆರವು ಕಲ್ಪಿಸಲಿದೆ ಎಂದು ಹನುಮಂತರಾಯ ವಿವರಿಸಿದ್ದಾರೆ.

ಪಾರದರ್ಶಕ ವ್ಯವಸ್ಥೆ : ಹೊಯ್ಸಳ ಇ.ಆರ್.ಎಸ್.ಎಸ್. ವಾಹನಗಳ ಮೂಲಕ ನೀಡಲಾಗುವ ಸ್ಪಂದನೆ ಮೇಲೆ ನಿರಂತರ ನಿಗಾ ಇರುತ್ತದೆ. ದೂರು ನೀಡಿದವರಿಗೆ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡಿ, ಪಾರದರ್ಶಕ ವ್ಯವಸ್ಥೆ ತರಲಿದೆ ಎಂದು ಎಸ್ಪಿ ಹೇಳಿದ್ದಾರೆ.

ಆಂಬ್ಯುಲೆನ್ಸ್ ಸೇರ್ಪಡೆ : ಪ್ರಸಕ್ತ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸೇವೆ ಮಾತ್ರ 112 ಮೂಲಕ ಲಭ್ಯವಿರಲಿದೆ. ಮುಂದಿನ ದಿನಗಳಲ್ಲಿ ಆಂಬ್ಯುಲೆನ್ಸ್ ಸೇವೆಯೂ ಇದೇ ಸಂಖ್ಯೆಯ ಮೂಲಕ ಲಭ್ಯವಾಗಲಿದೆ ಎಂದು ಹನುಮಂತರಾಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಬಸವಪ್ರಭು ಶರ್ಮ, ಡಿವೈಎಸ್‌ಪಿ ಬಸವರಾಜ ಮತ್ತು ಇನ್ಸ್‌ಪೆಕ್ಟರ್‌ ಎಸ್. ತೇಜಾವತಿ ಉಪಸ್ಥಿತರಿದ್ದರು.

error: Content is protected !!