ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಿ

ಹರಿಹರ : ಜಾಗೃತಿ ಜಾಥಾಗೆ ಪೌರಾಯುಕ್ತೆ ಎಸ್.ಲಕ್ಷ್ಮಿ ಚಾಲನೆ

ಹರಿಹರ, ಏ.5-  ಕೊರೊನಾ ಎರಡನೆ ಅಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರಸಭೆ ವತಿಯಿಂದ ಜಾಗೃತಿ ಜಾಥಾಕ್ಕೆ ಬುಧವಾರ ಪೌರಾಯುಕ್ತೆ ಎಸ್. ಲಕ್ಷ್ಮಿ ನಗರಸಭೆ ಆವರಣದಲ್ಲಿ ಚಾಲನೆ ನೀಡಿದರು.

ಸಾಮಾಜಿಕ ಹಾಗೂ ದೈಹಿಕ ಅಂತರ ಪಾಲನೆ ಮಾಡದೇ, ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬೀದಿ ಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು.  ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. 

ನಗರದ ವಿವಿಧ ವಾರ್ಡ್‍ಗಳಲ್ಲಿ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದು,  ನಿಧನ, ಶವ ಸಂಸ್ಕಾರ ಸಂದರ್ಭದಲ್ಲಿ ತೆರೆದ ಪ್ರದೇಶದಲ್ಲಿ ಗರಿಷ್ಠ 100 ಜನ, ಸಭಾಂಗಣ, ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ ಗರಿಷ್ಟ 50 ಜನ ಮೀರುವಂತಿಲ್ಲ. ಅಂತ್ಯಕ್ರಿಯೆ ಸಂದರ್ಭದಲ್ಲಿ ಭಾಗವಹಿಸುವಿಕೆ 50 ಜನ ಮೀರುವಂತಿಲ್ಲ. ಧಾರ್ಮಿಕ ಆಚರಣೆಗಳು ಹಾಗೂ ರಾಜಕೀಯ ಆಚರಣೆಗಳು, ಸಮಾರಂಭಗಳಲ್ಲಿ ತೆೆರೆದ ಪ್ರದೇಶದಲ್ಲಿ 500 ಜನಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ನಿಷೇಧಿಸಲಾಗಿದೆ ಎಂದರು.

ಸಾರ್ವಜನಿಕರು ಸರ್ಕಾರದ ಸೂಚನೆಯಂತೆ ಕಟ್ಟು ನಿಟ್ಟಾಗಿ ಪಾಲನೆ ಮಾಡಿ ಕೊರೊನಾ ವೈರಸ್‍ನಿಂದ ಮುಕ್ತರಾಗೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ನೀತಾ ರಮೇಶ್ ಮೆಹರ್ವಾಡೆ, ಆಟೋ ಹನುಮಂತಪ್ಪ, ಆರೋಗ್ಯ ನಿರೀಕ್ಷಕ ರವಿಪ್ರಕಾಶ್, ಪರಿಸರ ಅಭಿಯಂತರ ತಿಮ್ಮಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

error: Content is protected !!