ದಾವಣಗೆರೆ, ಮಾ. 26- ಅಕ್ರಮ ಪಂಪ್ಸೆಟ್ಗಳನ್ನು ತೆರವುಗೊಳಿಸಿ, ಭದ್ರಾ ನಾಲೆಯ ಕೊನೆ ಭಾಗವಾದ ಹರಪನಹಳ್ಳಿ ಭಾಗಕ್ಕೆ ನೀರು ಹರಿಸಲು ಜಿಲ್ಲಾಡಳಿತ ವಿಫಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಹರಪನಹಳ್ಳಿ ತಾಲ್ಲೂಕು ಹಿರೇಮೇಗಳಗೆರೆ ಗ್ರಾಮದ ರೈತರು ಎಚ್ಚರಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿ.ಮಹಾಭಲೇಶ್ವರ ಗೌಡ, ಜಿಲ್ಲಾಧಿಕಾರಿಗಳು ಅಕ್ರಮ ಪಂಪ್ ಸೆಟ್ ತೆರುವುಗೊಳಿಸವುದಾಗಿ ಹೇಳುತ್ತಾರೆ. ಒಂದೆರಡು ಪಂಪ್ ಸೆಟ್ ತೆರವುಗೊಳಿಸಿ ಪ್ರಚಾರ ಪಡೆಯಬಹುದು. ಆದರೆ ಯಾವ ಭಾಗದಲ್ಲಿ ಅಕ್ರಮ ಪಂಪ್ ಸೆಟ್ ತೆರವು ಮಾಡಿಲ್ಲ. ಚನ್ನಗಿರಿ ತಾಲ್ಲೂಕಿನಲ್ಲಿಯೇ ಸುಮಾರು 10 ಸಾವಿರ ಅಕ್ರಮ ಪಂಪ್ಸೆಟ್ಗಳಿವೆ ಎಂದು ಆರೋಪಿಸಿದರು.
ಬೆಸ್ಕಾಂ ಇಲಾಖೆಯವರು ಅಕ್ರಮ ಪಂಪ್ಸೆಟ್ಗಳಿಗೆ ಕೊಡುವ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಬೇಕು. ಆಗ ಮಾತ್ರ ನೀರು ಕೊನೆ ಭಾಗದವರೆಗೆ ತಲುಪಲು ಸಾಧ್ಯ. ಆದರೆ ಪಂಪ್ ಸೆಟ್ ತೆರವು ಮಾಡಲು ಹೋದ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿ ಜಿಲ್ಲಾಡಳಿತ 144ನೇ ಸೆಕ್ಷನ್ ಜಾರಿ ಮಾಡಿ, ಪೊಲೀಸ್ ಇಲಾಖೆ ನೆರವಿನೊಂದಿಗೆ ಎಲ್ಲಾ ಅಕ್ರಮ ಪಂಪ್ ಸೆಟ್ ಗಳನ್ನು ತೆರವು ಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರೇಮೇಗಳಗೆರೆ ಗ್ರಾಮ ಪಂಚಾಯ್ತಿ ಸದಸ್ಯ ಅಂಜಿನಪ್ಪ, ಮಾಜಿ ಸದಸ್ಯ ಚಂದ್ರಪ್ಪ, ಸುನಿಲ್ ಇತರರಿದ್ದರು.