ರಾಣೇಬೆನ್ನೂರು: ಅಗಲಿದ ನಾಯಕ ಶಿವರಾಂಗೆ ಸಭಾದಿಂದ ದೀಪ ನಮನ

ರಾಣೇಬೆನ್ನೂರು: ಅಗಲಿದ ನಾಯಕ  ಶಿವರಾಂಗೆ ಸಭಾದಿಂದ ದೀಪ ನಮನ

ರಾಣೇಬೆನ್ನೂರು, ಮಾ.3-  ನಗರದ ಡಾ.ಬಿ.ಆರ್. ಅಂಬೇಡ್ಕರ್ ಸೇವಾ ಸಂಸ್ಥೆ  ಹಾಗೂ ಛಲವಾದಿ ಮಹಾಸಭಾ ವತಿಯಿಂದ ಮಾಜಿ ಅಧಿಕಾರಿ,  ಚಲನಚಿತ್ರ ನಟ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಸಂಸ್ಥಾಪಕರು ಮತ್ತು ಅಧ್ಯಕ್ಷರೂ  ಆದ ಕೆ.ಶಿವರಾಂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ದೀಪ ಬೆಳಗಿಸಿ ಅಗಲಿದ ನಾಯಕನಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ್ ಮಾತನಾಡಿ, ಕೆ.ಶಿವರಾಂ  ಬಹುಮುಖ ಪ್ರತಿಭೆಯುಳ್ಳ ಮಹಾನ್ ನಾಯಕರು. ಅವರು ಕನ್ನಡದಲ್ಲಿ ಪ್ರಥಮ ಬಾರಿಗೆ ಐ.ಎ.ಎಸ್ ಪರೀಕ್ಷೆ ಪಾಸು ಮಾಡಿ ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದಂತಹ  ಮಹಾನ್ ಸಾಧಕರು ಹಾಗೂ ಈಗಿನ ಐ.ಎ.ಎಸ್ ಮಾಡುವ ವಿದ್ಯಾರ್ಥಿಗಳಿಗೆ ಒಂದು ಸ್ಫೂರ್ತಿ, ರೋಲ್ ಮಾಡೆಲ್ ಆಗಿದ್ದರು ಎಂದರು. 

 ತಮ್ಮ ಸುದೀರ್ಘ 37 ವರ್ಷಗಳ ಸೇವಾ ಅವಧಿಯಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಬಡವರಿಗೆ, ಶೋಷಿತರಿಗೆ, ದಿನ ದಲಿತರಿಗೆ ಮುಡಿಪಾಗಿಟ್ಟಿದ್ದರು ಹಾಗೂ ಜೊತೆ-ಜೊತೆಗೆ ನಟನೆಯನ್ನು ಮೈಗೂಡಿಸಿಕೊಂಡು ಅನೇಕ ಯಶಸ್ವೀ ಚಿತ್ರಗಳನ್ನು ಕೊಟ್ಟು ಚಿತ್ರರಂಗಕ್ಕೂ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೇ ಇಡೀ ರಾಜ್ಯದಲ್ಲಿ ಹರಿದು ಹಂಚಿ ಹೋಗಿದ್ದ ಛಲವಾದಿ ಸಮುದಾಯವನ್ನು ಒಗ್ಗೂಡಿಸಿ,  ಮಹಾಸಭಾವನ್ನು ಸ್ಥಾಪಿಸಿ, ಸಮುದಾಯಕ್ಕೂ ಕೂಡ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ.  ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದರು.

ಮಹಾಸಭಾದ ತಾಲ್ಲೂಕು ಅಧ್ಯಕ್ಷ  ಬಸವರಾಜ ಡಿ. ಸಾವಕ್ಕನವರ ಹಾಗೂ ನಿವೃತ್ತ ಶಿಕ್ಷಕ  ಶ್ರೀಕಾಂತ ಹೊಸಮನಿ, ಸಮಾಜದ ಮುಖಂಡ  ಕುಬೇರಪ್ಪ ಅಟವಾಳಗಿ, ಅಂಬೇಡ್ಕರ್ ಸೇವಾ ಸಂಸ್ಥೆ  ಸಂಸ್ಥಾಪಕ  ಸಿ.ಶ್ರೀಧರ್, ಕಲಾವಿದ ಮಹೇಶ್, ಮುತ್ತುರಾಜ್ ಸಾವಕ್ಕನವರ, ಸಂಸ್ಥೆಯ ಪದಾಧಿಕಾರಿಗಳಾದ ಗುಡ್ಡೇಶ್ ಎಂ, ಮಣಿಕಂಠ ಎಸ್, ಗೋಪಿ, ಹಂಸಧ್ವಜ,  ಶಾಂತಮ್ಮ ಎಂ, ವೀಣಾ ಘಂಟೇರ್, ನಾಗರತ್ನ  ಹಾಗೂ ನಗರದ ಮುಖಂಡ ರಾದ ನಾಗರಾಜ್, ಹನುಮಂತ ಎಸ್. ಉಪಸ್ಥಿತರಿದ್ದರು.

error: Content is protected !!