ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು : ಬಸವರಾಜ ಸಂಗಪ್ಪನವರ್

ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು : ಬಸವರಾಜ ಸಂಗಪ್ಪನವರ್

ಹರಪನಹಳ್ಳಿ, ಮಾ. 3 – ಮಕ್ಕಳು ಕೇವಲ ಪಠ್ಯ ಚಟುವಟಿಕೆಯಲ್ಲಿ ಇದ್ದರೆ ಸಾಕಾಗುವುದಿಲ್ಲ, ಪಠ್ಯೇತರ ಚಟುವಟಿಕೆಗಳ ತೊಡಗಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನವಾಗಲಿದೆ ಎಂದು ವಿಜಯನಗರ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ರಾಜರಾಜೇಶ್ವರ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಎನ್ನುವುದು ಶಿಸ್ತನ್ನು ಕಲಿಸುವ, ಉತ್ತಮ ವ್ಯಕ್ತಿಯನ್ನಾಗಿಸುವ ಮಾಧ್ಯಮವಾಗಿದ್ದು, ಪುಸ್ತಕದ ವಿದ್ಯೆ ಮಸ್ತಕಕ್ಕೆ ಹೋಗುವುದು ಮಾತ್ರವಲ್ಲ, ಸರ್ವಾಂಗೀಣ ಚಟುವಟಿಕೆಗಳನ್ನು ಮಾಡುವಂತಾಗಬೇಕು ಎಂದ ಅವರು, ಶಿಕ್ಷಕರ ಪಾಠಕ್ಕೆ, ಪೋಷಕರ ಸಹಕಾರ ಅಗತ್ಯ. ಈ ಮೂಲಕ ವಿದ್ಯಾರ್ಥಿಗಳು ದೇಶ, ರಾಜ್ಯಕ್ಕೆ ಕೀರ್ತಿ ತರುವಂತವರಾಗಬೇಕು ಎಂದು ಹೇಳಿದರು.

ಪ್ರಗತಿಪರ ಚಿಂತಕ, ನಿವೃತ್ತ ಶಿಕ್ಷಕ ಇಸ್ಮಾಯಿಲ್ ಎಲಿಗಾರ್‌ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಡುವ ಮೂಲಕ ಉತ್ತಮ ಮೌಲ್ಯಗಳ ಸಹ ಕಲಿಸುವುದು ಅಗತ್ಯವಿದೆ ಎಂದರು.

ಜನ್ಮ ಕೊಟ್ಟವರು ಪೋಷಕರು. ಆದರೆ, ಶಿಕ್ಷಕರಿಗೆ ಉತ್ತಮ ಪ್ರಜೆಯನ್ನಾಗಿ ಮಾಡುವ ಹೊಣೆಗಾರಿಕೆ ಇರುತ್ತದೆ. ಪೋಷಕರು ಮತ್ತು ಶಿಕ್ಷಕರ ನಡುವೆ ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಕಲಿಯುವುದು ಅಗತ್ಯವಿದ್ದು, ಯಾವುದೇ ಒತ್ತಡದ ಶಿಕ್ಷಣ ಮಕ್ಕಳಿಗೆ ಬೇಡ, ಇತರೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೊಲಿಕೆ ಮಾಡಬೇಡಿ. ಅವರು ಯಾವುದಾದರೂ ಆಸಕ್ತಿ ಕ್ಷೇತ್ರದಲ್ಲಿ ಉನ್ನತ ಸಾಧನೆಗೆ ತಮ್ಮ ಪ್ರೋತ್ಸಾಹ ನೀಡಿ ಎಂದು ಕಿವಿಮಾತು ಹೇಳಿದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಆರ್.ವಿ. ಗೋವಿಂದರಾಜು, ಪತ್ರಕರ್ತ ಪಿ.ಕರಿಬಸಪ್ಪ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ತಿಮ್ಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೀಲು ಮೂಳೆ ನಾಟಿ ವೈದ್ಯ ಬಿ.ಬಿ.ಹೊಸೂರಪ್ಪ, ಆರೋಗ್ಯ ಇಲಾಖೆಯ ಅರ್ಪಿತ, ಪಾರ್ವತಮ್ಮ, ಶಿಕ್ಷಕರಾದ ಜಾಥಪ್ಪ, ದುರುಗೇಶ್‌, ಸತೀಶ, ರಶ್ಮಿ, ಶಮಾ, ರೂಪಾ, ಹಮೀದಾ, ಮಂಜುಳಾ, ನೇತ್ರಾವತಿ, ಸೇರಿದಂತೆ ಶಾಲಾ ಸಿಬ್ಬಂದಿಗಳು, ಪೋಷಕರು, ಮಕ್ಕಳು ಇದ್ದರು.

ಹರಪನಹಳ್ಳಿ ಪಟ್ಟಣದ ಶ್ರೀ ರಾಜರಾಜೇಶ್ವರಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವನ್ನು ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರು ಉದ್ಘಾಟಿಸಿದರು.

error: Content is protected !!