ದಾವಣಗೆರೆ, ಏ. 26- ಜಿಲ್ಲೆಯ ಜಗಳೂರು, ಮಾಯಕೊಂಡ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿದ ಚಿತ್ರ ನಟ ಸುದೀಪ್ ಸಂಜೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಪರವೂ ಮತ ಯಾಚಿಸಿದರು.
ಮಧ್ಯಾಹ್ನ 4 ಗಂಟೆ ವೇಳೆಗೆ ನಗರದ ನಿಟ್ಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನ ದಿಂದ ಸುದೀಪ್ ರೋಡ್ ಶೋ ಆರಂಭವಾಗಿ ಎಚ್ಕೆಆರ್ ಸರ್ಕಲ್ನಲ್ಲಿ ಅಂತ್ಯಗೊಂಡಿತು.
ಜೆಸಿಬಿ ಮೂಲಕ ಬೃಹತ್ ಕನಕಾಂಬರ ಹಾರಹಾಕುವ ಮೂಲಕ ಸುದೀಪ್ ಅವರನ್ನು ಸ್ವಾಗತಿಸಲಾಯಿತು. ಸುದೀಪ್ ನೋಡಲು ಅಭಿಮಾನಿಗಳು ಮುಗಿ ಬಿದ್ದರು. ಮನೆಯ ತಾರಸಿ, ರಸ್ತೆಯಲ್ಲಿದ್ದ ವಾಹನಗಳನ್ನು ಏರಿ ಕಿಚ್ಚನಿಗೆ ಕೈ ಬೀಸಿದರು. ಮೊಬೈಲ್ನಲ್ಲಿ ಫೋಟೋ, ವಿಡಿಯೋ ತೆಗೆದುಕೊಂಡು ಸಂಭ್ರಮಿಸಿದರು. ಕಿಚ್ಚ ಸುದೀಪ್ಗೆ ಜೈ, ಬಿಜೆಪಿಗೆ ಜೈ, ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು. ಇದಕ್ಕೂ ಮುನ್ನ ಸುದೀಪ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಕಾರಿನತ್ತ ಓಡಿ ಬಂದು ಮುತ್ತಿಗೆ ಹಾಕಿ ಫೋಟೋ ತೆಗೆಸಿಕೊಳ್ಳಲು ಮುಗಿ ಬಿದ್ದರು.
ರೋಡ್ ಶೋ ವೇಳೆ ಮಾತನಾಡಿದ ಸುದೀಪ್, ಲೋಕಿಕೆರೆ ನಾಗರಾಜ್ ಅವರ ಪರ ಪ್ರಚಾರ ಮಾಡಲು ಬಂದಿದ್ದೇನೆ. ಚಿತ್ರರಂಗವೇ ಆಗಲೀ, ರಾಜಕೀಯವೇ ಆಗಲೀ ಜನ ಬದಲಾವಣೆ ಬಯಸುತ್ತಾರೆ. ದಾವಣಗೆರೆ ಜನವೂ ಬದಲಾವಣೆ ಬಯಸಿದ್ದಾರೆ ಎಂದರು.
ಲೋಕಿಕೆರೆ ನಾಗರಾಜ್ ಅವರು ಗೆಲ್ಲು ತ್ತಾರೆ. ಆ ಬಳಿಕ ಇವರ ಜೊತೆಯಲ್ಲೇ ಬರು ತ್ತೇನೆ. ದಾವಣಗೆರೆ ಬೆಣ್ಣೆ ದೋಸೆಗೆ ಫೇಮಸ್ ಅಲ್ವಾ, ನನಗೂ ಬೆಣ್ಣೆ ದೋಸೆ ಕೊಡಿಸ್ತೀರಾ ಅಲ್ವಾ? ಎಂದು ಪ್ರಶ್ನಿಸಿದರು. ವೀರ ಮದಕರಿ ಚಿತ್ರದ ಡೈಲಾಗ್ ಹೇಳಿ ರಂಜಿಸಿದರು.
ನಿಮ್ಮೆಲ್ಲರ ಪ್ರೀತಿಗೆ ಸ್ವಾಗತ, ನಾನು ಬಂದರೆ ಇಲ್ಲಿ ಪೊಲೀಸರಿಗೂ ಕಷ್ಟ. ನನಗೆ ಸಿದ್ದೇಶಣ್ಣ (ಜಿ.ಎಂ.ಸಿದ್ದೇಶ್ವರ) ತುಂಬಾ ಪರಿಚಯ ಅವರ ಮೇಲೆ ಅಭಿಮಾನವಿದೆ ಎಂದರು.
ಅಭ್ಯರ್ಥಿ ಲೋಕಿಕೆರೆ ನಾಗರಾಜು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ಕಾರ್ಯದರ್ಶಿ ಬಿ.ಎಸ್.ಜಗದೀಶ್, ಪಾಲಿಕೆ ಸದಸ್ಯ ವೀರೇಶ್ ಪೈಲ್ವಾನ್, ಎಸ್.ಟಿ. ವೀರೇಶ್, ಮುಖಂಡರಾದ ಜಿ.ಎಸ್. ಅನಿತ್ಕುಮಾರ್, ಲಕ್ಷ್ಮಣ ಇನ್ನಿತರರು ಹಾಜರಿದ್ದರು.