ವೈಜ್ಞಾನಿಕ ಕೃಷಿಯಿಂದ ಗ್ರಾಮೀಣ ಪ್ರದೇಶದ ರೈತರಿಗೆ, ಕೃಷಿಕರಿಗೆ ಉತ್ತಮ ಆದಾಯ ಸಾಧ್ಯ

ವೈಜ್ಞಾನಿಕ ಕೃಷಿಯಿಂದ ಗ್ರಾಮೀಣ ಪ್ರದೇಶದ ರೈತರಿಗೆ, ಕೃಷಿಕರಿಗೆ ಉತ್ತಮ ಆದಾಯ ಸಾಧ್ಯ

ಸಿಇಓ ಸುರೇಶ್ ಬಿ. ಇಟ್ನಾಳ್

ದಾವಣಗೆರೆ, ಜೂ. 20 – ವೈಜ್ಞಾನಿಕ ಕೃಷಿಯಿಂದ ಗ್ರಾಮೀಣ ಪ್ರದೇಶದ ರೈತರಿಗೆ, ಕೃಷಿಕರಿಗೆ ಉತ್ತಮ ಆದಾಯ ಬರಲು ಸಾಧ್ಯ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮೀನುಗಾರಿಕೆ ಇಲಾಖೆ ವತಿಯಿಂದ  ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಮತ್ತು ಮೀನು ಕೃಷಿಕರಿಗೆ ಮೀನು ಸಾಕಾಣಿಕೆಯ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ತೋಟಗಾರಿಕೆ,  ರೇಷ್ಮೆ ಮತ್ತು ಪಶುಸಂಗೋಪನಾ ಇಲಾಖೆ, ಮೀನುಗಾರಿಕೆ, ಕೃಷಿ ಇಲಾಖೆಗಳು ಗ್ರಾಮೀಣ ಪ್ರದೇಶದ  ರೈತರಿಗೆ, ಕೃಷಿಕರಿಗೆ ತುಂಬಾ ಹತ್ತಿರವಾದಂತಹ ಇಲಾಖೆಗಳಾಗಿವೆ. ಆದ್ದರಿಂದ ಜನರು ಇಂತಹ ಇಲಾಖೆಗಳನ್ನು ಸಂಪರ್ಕಿಸಿ, ಸರ್ಕಾರದ ಯೋಜನೆಗಳನ್ನು ತಿಳಿದುಕೊಳ್ಳುವ ಮೂಲಕ ಯೋಜನೆಗಳ ಲಾಭ ಪಡೆದು ವೈಜ್ಞಾನಿಕವಾಗಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಬಹುದಲ್ಲದೆ ಗ್ರಾಮ ಪಂಚಾಯತಿಗಳ ಆದಾಯವನ್ನು ಹೇಗೆ ಹೆಚ್ಚಿಗೆ ಮಾಡಿಕೊಳ್ಳಬಹುದೆಂದು ತಿಳಿಸಿದರು.

ಮೀನುಗಾರಿಕೆ ಉಪನಿರ್ದೇಶಕರಾದ ಶ್ರೀನಿವಾಸ್ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೀನುಗಾರಿಕೆ ವಿದ್ಯಾಲಯದ ಡೀನ್ ಡಾ. ಶಿವಕುಮಾರ್ ಮೀನು ಕೃಷಿ ಕುರಿತು ಕೃಷಿಕರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕ ಡಾ.ಉಮೇಶ್, ಕೃಷಿ ವಿಜ್ಞಾನ ಕೇಂದ್ರ ಐಸಿಎಆರ್ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಹಾಗೂ ಇನ್ನಿತರರು ಭಾಗವಹಿಸಿದ್ದರು.

error: Content is protected !!