ಬಿತ್ತನೆ ಬೀಜ ಕಂಪನಿಗಳಿಗೆ ವಂಚನೆ ; ವರ್ತಕ ಪರಾರಿ

ಬಿತ್ತನೆ ಬೀಜ ಕಂಪನಿಗಳಿಗೆ ವಂಚನೆ ; ವರ್ತಕ ಪರಾರಿ

ಜಗಳೂರು, ಜೂ.6- ಪಟ್ಟಣದಲ್ಲಿ   ಬಿತ್ತನೆ ಬೀಜ ಮಾರಾಟದ ಅಂಗಡಿ ಮಾಲೀಕ  ಬೀಜ ಮಾರಾಟದ  20ಕ್ಕೂ ಹೆಚ್ಚು ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ನಾಪತ್ತೆಯಾಗಿರುವ ಪ್ರಕರಣ ನಡೆದಿದೆ. 

ಪಟ್ಟಣದ ದಾವಣಗೆರೆ ರಸ್ತೆಯಲ್ಲಿ’ ಕಿಸಾನ್ ಆಗ್ರೋ’ ಹೆಸರಿನಲ್ಲಿ ಬೀಜ ಮತ್ತು ಗೊಬ್ಬರ ವ್ಯಾಪಾರ ನಡೆಸುತ್ತಿದ್ದ ಹೊರ ರಾಜ್ಯ ಮೂಲದ ಕುಮಾರ್ ಗೌಡ ಎಂಬ ಹೆಸರಿನ ವ್ಯಕ್ತಿ ವಿವಿಧ ಬೀಜ ಕಂಪನಿಗಳ ವಿತರಕರಿಗೆ ಕೋಟಿಗಟ್ಟಲೆ ವಂಚನೆ ಮಾಡಿ ಪರಾರಿಯಾಗಿದ್ದಾನೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಮಾರಾಟ ಮಾಡುವ ಉದ್ದೇಶದಿಂದ ಇಲ್ಲಿನ ಮರೇನಹಳ್ಳಿ ರಸ್ತೆಯ ಲೋಕೋಪಯೋಗಿ ಕಚೇರಿ ಎದುರಿನ ಜೋತಿಪುರ ಪಕೀರ್ ಸಾಬ್ ಎಂಬುವವರಿಗೆ ಸೇರಿದ ವಾಣಿಜ್ಯ ಕಟ್ಟಡವನ್ನು ಬಾಡಿಗೆ ಪಡೆದಿದ್ದನು. ಪಯೋನಿಯರ್, ಕಾವೇರಿ, ರಾಶಿ, ಡಿಕೆಶಿ, ಅಡ್ವಾಂಟ, ಲಕ್ಷ್ಮೀ ಸೀಡ್ಸ್, ವಿ.ಎನ್.ಆರ್, ಮುಂತಾದ 20ಕ್ಕೂ ಹೆಚ್ಚು ಕಂಪನಿಗಳ ಬಿತ್ತನೆ ಬೀಜ ಮತ್ತು ಕೀಟನಾಶಕಗಳನ್ನು ಐದಾರು ದಿನಗಳಿಂದ ಮಾರುಕಟ್ಟೆ ಬೆಲೆಗಿಂತ  ಅರ್ಧದಷ್ಟು ಕಡಿಮೆ ಬೆಲೆಗೆ ತರಾತುರಿಯಲ್ಲಿ ಮಾರಾಟ ಮಾಡಿ ನಾಪತ್ತೆಯಾಗಿದ್ದಾನೆ.

ಪೂರೈಕೆ ಮಾಡಿದ್ದ ಕಂಪನಿಗಳಿಗೆ ಕೊಡದೆ ರಾತ್ರೋರಾತ್ರಿ ಪಟ್ಟಣದಿಂದ ಪರಾರಿಯಾಗಿದ್ದು, ಆತಂಕಗೊಂಡ ವಿತರಕರು, ಕಂಪನಿ ಉದ್ಯೋಗಿಗಳು ಪೊಲೀಸರ ಮೊರೆ ಹೋಗಿದ್ದಾರೆ.

ಜಗಳೂರಿನಲ್ಲಿ ಬೀಜ ಮಾರಾಟ ಮಾಡುವ ಕುಮಾರ್ ಗೌಡ ಎಂಬ ವ್ಯಕ್ತಿಗೆ  1.75 ಕೋಟಿ ವೆಚ್ಚದ ಬಿತ್ತನೆ ಬೀಜ ಕೊಟ್ಟಿದ್ದೇನೆ. ನನಗೆ ಕೇವಲ ರೂ.35 ಲಕ್ಷ ಾವನು ಕೊಟ್ಟಿದ್ದು, ಉಳಿದ ಹಣ ಕೊಡುತ್ತೇನೆ ಎಂದು ಭರವಸೆ ನೀಡಿದ್ದ. ಆದರೆ ಈಗ ಮೋಸ ಮಾಡಿ ಓಡಿ ಹೋಗಿದ್ದಾನೆ. ಅವನ ಮೂಲದ ಬಗ್ಗೆ ಹೆಚ್ಚು ತಿಳಿದಿಲ್ಲ. ನಕಲಿ ಆಧಾರದ ಕಾರ್ಡ್ ಕೊಟ್ಟು ನಮಗೆ ದಿಕ್ಕು ತಪ್ಪಿಸಿದ್ದಾನೆ. ನನಗೆ ಕನಿಷ್ಟ ರೂ.1ಕೋಟಿಗೂ ಹೆಚ್ಚು ವಂಚಿಸಿದ್ದಾನೆ’ ಎಂದು ದಾವಣಗೆರೆ ಮೂಲದ ವಿತರಕ ಶಿವಮೂರ್ತಿ ತಿಳಿಸಿದರು.

ನಕಲಿ ಆಧಾರ್ ಕಾರ್ಡ್, ನಕಲಿ ಲೈಸೆನ್ಸ್ ನೀಡಿ ವಂಚನೆ : ಬೀಜ ಕಂಪನಿಗಳಿಗೆ ಪಂಗನಾಮ ಹಾಕಿ ಪರಾರಿಯಾಗಿರುವ ವ್ಯಕ್ತಿಯ ನಿಜವಾದ ಹೆಸರು ಏನು ಎನ್ನುವುದು ಯಾರಿಗೂ ಮಾಹಿತಿ ಇಲ್ಲ. ನಾಲ್ಕೈದು ಆಧಾರ್ ಕಾರ್ಡ್ ಗಳನ್ನು ಮಾಡಿಸಿಕೊಂಡಿದ್ದ ವಂಚಕ, ಕುಮಾರ್ ಗೌಡ, ನಿಖಿಲ್ , ಸಂತೋಷ್ ಮುಂತಾದ ಹೆಸರುಗಳಲ್ಲಿ ವಿವಿಧ ಜಿಲ್ಲೆಗಳ ವರ್ತಕರು, ವಿತರಕರೊಂದಿಗೆ ವ್ಯವಹರಿಸುತ್ತಿದ್ದ.  ಸಮೀಪದ ಉದ್ದಗಟ್ಟ ಗ್ರಾಮದ ರುದ್ರೇಶ್ ಎಂಬ ರೈತನ ಹೆಸರಿನಲ್ಲಿ ಬಿತ್ತನೆ ಬೀಜ ಮಾರಾಟ ಲೈಸೆನ್ಸ್ ಪಡೆದಿದ್ದ. ಈ ಹಿಂದೆ ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಹಲವು ವಂಚನೆ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ ಎಂದುಹೇಳಲಾಗುತ್ತಿದೆ.

ಕಂಪನಿಗಳಿಗೆ ಮೋಸ ಮಾಡಿ ಪರಾರಿಯಾದ ಘಟನೆ ತಿಳಿಯುತ್ತಿದ್ದಂತೆ ಮರೇನಹಳ್ಳಿ ರಸ್ತೆಯಲ್ಲಿ ರುವ ಮಳಿಗೆಗೆ ಸಾರ್ವಜನಿಕರು, ರೈತರು, ವರ್ತ ಕರು, ವಿತರಕರು ಜಮಾಯಿಸಿದ್ದರು. ಪೊಲೀಸರು ರಾತ್ರಿ ಸಮಯದಲ್ಲಿ ಮಳಿಗೆ ತೆರೆದು ಮಾರಾಟ ವಾಗದೇ ಉಳಿದಿರುವ ಬಿತ್ತನೆ ಬೀಜ ಮತ್ತು ಕೀಟನಾಶಕಗಳನ್ನು ವಿವಿಧ ಕಂಪನಿಯ ವಿತರಕರಿಗೆ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿದರು.

ವಂಚನೆ ಘಟನೆ ಬಗ್ಗೆ 17 ವಿತರಕರು, ಬೀಜ ಕೊಟ್ಟಿರುವವರು ಓಡಿ ಹೋಗಿರುವ ವ್ಯಕ್ತಿಯ ವಿರುದ್ಧ  ಕೇವಲ ದೂರು ಅರ್ಜಿ ನೀಡಿದ್ದಾರೆ. ರೈತರಿಗೆ ಯಾವುದೇ ವಂಚನೆಯಾಗಿಲ್ಲ.  ವಂಚನೆ ಘಟನೆ ಬಗ್ಗೆ ಯಾವುದೇ ಮೊಕದ್ದಮೆ ದಾಖಲಾಗಿಲ್ಲ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!