ಲೋಕಸಭಾ ಚುನಾವಣೆ : ಪ್ರತಿ ಅಭ್ಯರ್ಥಿಗೆ 95 ಲಕ್ಷದವರೆಗೆ ಖರ್ಚು-ವೆಚ್ಚ ಮಾಡಲು ಅವಕಾಶ

ಲೋಕಸಭಾ ಚುನಾವಣೆ : ಪ್ರತಿ ಅಭ್ಯರ್ಥಿಗೆ 95 ಲಕ್ಷದವರೆಗೆ ಖರ್ಚು-ವೆಚ್ಚ ಮಾಡಲು ಅವಕಾಶ

ದಾವಣಗೆರೆ, ಏ. 22 – ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಅಂತಿಮ ಕಣದಲ್ಲಿನ ಅಭ್ಯರ್ಥಿಗಳು ಚುನಾವಣಾ ಲೆಕ್ಕವನ್ನು ದಿನನಿತ್ಯ ನಿರ್ವಹಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು. 

ಅವರು ಸೋಮವಾರ ಚುನಾವಣಾಧಿಕಾರಿ ಗಳ ಕಚೇರಿಯಲ್ಲಿ ಅಂತಿಮ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು. 

ಪ್ರತಿ ಅಭ್ಯರ್ಥಿಗಳಿಗೆ ರೂ.95 ಲಕ್ಷದವರೆಗೆ ಖರ್ಚು-ವೆಚ್ಚ ಮಾಡಲು ಅವಕಾಶ ಇರುತ್ತದೆ. ಎಲ್ಲಾ ಅಭ್ಯರ್ಥಿಗಳು ಖರ್ಚು-ವೆಚ್ಚದ ಲೆಕ್ಕವನ್ನು ಪಾರ್ಟ್. ಎ ರಡಿ ಪ್ರತಿ ನಿತ್ಯದ ವರದಿ, ಇದರಲ್ಲಿ ಖರ್ಚು ಮತ್ತು ಹಣದ ಮೂಲ ನಮೂದು ಮಾಡಬೇಕು. ದೇಣಿಗೆ ಬಂದಿದ್ದಲ್ಲಿ ಅವರ ವಿವರ ನಮೂದಿಸಬೇಕು. ಪಾರ್ಟ್ ಬಿ ರಡಿ ಕ್ಯಾಶ್‍ಬುಕ್ ನಿರ್ವಹಣೆ ಮಾಡಬೇಕು. ಪಾರ್ಟ್.ಸಿ ರಡಿ ಬ್ಯಾಂಕ್ ಪಾಸ್‌ ಬುಕ್ ನಿರ್ವಹಣೆ ಮಾಡಬೇಕು. ರೂ.10 ಸಾವಿರ ವರೆಗೆ ನಗದು ನೀಡಲು ಮಾತ್ರ ಅವಕಾಶ ಇದ್ದು ಇದಕ್ಕೂ ಮೇಲ್ಪಟ್ಟಲ್ಲಿ ಕ್ರಾಸ್ ಮಾಡಿದ ಚೆಕ್, ಆರ್.ಟಿ.ಜಿ.ಎಸ್ ಮಾಡಬೇಕು. ಖರ್ಚು ಮಾಡಿದ ಎಲ್ಲಾ ವ್ಯವಹಾರಕ್ಕೂ ರಸೀದಿ ಮತ್ತು ಬಿಲ್ಸ್‍ಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. 

ಅಭ್ಯರ್ಥಿಗಳು ಪ್ರತಿನಿತ್ಯದ ಖರ್ಚು-ವೆಚ್ಚ ತಾಳೆಯನ್ನು ಏ. 26, ಮೇ 2 ಮತ್ತು 6 ರಂದು ಅಕೌಂಟಿಂಗ್ ಟೀಮ್‍ನೊಂದಿಗೆ ತಾಳೆ ಮಾಡಿಸಿಕೊಳ್ಳಬೇಕು. ನಂತರ ಅಂತಿಮವಾಗಿ ಫಲಿತಾಂಶ ಪ್ರಕಟವಾದ 26ನೇ ದಿನ ವೆಚ್ಚ ವೀಕ್ಷಕರ ಸಮಕ್ಷಮ ಅಂತಿಮ ಹಂತದ ವೆಚ್ಚ ನಿರ್ವಹಣಾ ಸಭೆ ನಡೆಯಲಿದೆ. ಯಾರು ಸರಿಯಾಗಿ, ಸಮಯಕ್ಕೆ ನೀಡದಿದ್ದಲ್ಲಿ ಅಭ್ಯರ್ಥಿತನಕ್ಕೆ ತೊಂದರೆಯಾಗಲಿದೆ. 

ಅಭ್ಯರ್ಥಿಗಳು ವಾಹನಗಳನ್ನು ಇಂತಿಷ್ಟೆ ಪಡೆಯಬೇಕೆಂಬ ಮಿತಿ ಇರುವುದಿಲ್ಲ, ಖರ್ಚು-ವೆಚ್ಚ ಮಾತ್ರ ಅಂದಾಜಿಸಲಾಗುತ್ತದೆ. ಯಾವುದೇ ಅಭ್ಯರ್ಥಿ ತನ್ನ ಹೆಸರಲ್ಲಿ ವಾಹನ ಪಡೆದು ಬೇರೊಬ್ಬರಿಗೆ ಉಪಯೋಗ ಮಾಡಲು ಅವಕಾಶ ಮಾಡಿದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದರು. 

ಎಂಸಿಎಂಸಿ ಅನುಮತಿ ಕಡ್ಡಾಯ; ಯಾವುದೇ ಎಲೆಕ್ಟ್ರಾನಿಕ್ಸ್ ವಿನ್ಯಾಸ, ಮಾಧ್ಯಮ, ವೆಬ್‍ಸೈಟ್, ವಾಯ್ಸ್ ಮೆಸೇಜ್, ಇನ್ನಿತರೆ ಜಾಹಿರಾತು ನೀಡಲು ಪೂರ್ವಾನುಮತಿ ಕಡ್ಡಾಯ. ಅನುಬಂಧ-ಎ ರಡಿ ಸಲ್ಲಿಸಿ ಅನುಬಂಧ-ಬಿ ರಡಿ ಅನುಮತಿ ಪಡೆಯಬೇಕು. ಮತದಾನ ಮುಕ್ತಾಯವಾಗುವ 48 ಗಂಟೆ ಮುಂಚಿತವಾಗಿ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಮಾತ್ರ ಅನುಬಂಧ-ಸಿ ರಡಿ ಮುಂಚಿತವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಅನುಮತಿ ಇದ್ದಲ್ಲಿ ಮಾತ್ರ 48 ಗಂಟೆಗಳ ಅವಧಿಯಲ್ಲಿ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಲು ಅವಕಾಶ ಇರುತ್ತದೆ ಎಂದರು.  

ಚುನಾವಣಾ ವೀಕ್ಷಕರು ಜಿಲ್ಲೆಯಲ್ಲಿದ್ದು ಎಂಸಿಎಂಸಿ ದೂರುಗಳಿದ್ದಲ್ಲಿ ಅವರಿಗೂ ಮತ್ತು ಸಿವಿಜಿಲ್‍ಗೆ, ಟೋಲ್‍ಫ್ರೀ ಸಂಖ್ಯೆಗೂ ಮಾಹಿತಿ ನೀಡಬಹುದಾಗಿದೆ ಎಂದು ಚುನಾವಣಾ ಪ್ರಕ್ರಿಯೆಗಳ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಿದರು. 

ಅಕೌಂಟಿಂಗ್ ನೋಡಲ್ ಅಧಿಕಾರಿ ಗಿರೀಶ್ ಪಿಪಿಟಿಯಲ್ಲಿ ಎಲ್ಲಾ ಮಾಹಿತಿ ನೀಡಿದರು. ಈ ವೇಳೆ ಸಾಮಾನ್ಯ ವೀಕ್ಷಕರಾದ ಎಂ. ಲಕ್ಷ್ಮಿ, ವೆಚ್ಚ ವೀಕ್ಷಕರಾದ ಪ್ರತಿಭಾಸಿಂಗ್, ಸಹಾಯಕ ಚುನಾವಣಾಧಿಕಾರಿ ಸೈಯ್ಯದಾ ಅಫ್ರಿನ್ ಭಾನು ಎಸ್. ಬಳ್ಳಾರಿ ಹಾಗೂ ಅಭ್ಯರ್ಥಿಗಳು ಉಪಸ್ಥಿತರಿದ್ದರು. 

error: Content is protected !!