ಏಳು ಊರಿನ ಜನರು ಸೇರಿ ಆಚರಿಸುವ ಅಮ್ಮನ ಹಬ್ಬಕ್ಕೆ ಸಿದ್ಧತೆ

ಏಳು ಊರಿನ ಜನರು ಸೇರಿ ಆಚರಿಸುವ ಅಮ್ಮನ ಹಬ್ಬಕ್ಕೆ ಸಿದ್ಧತೆ

ಹಾಲಿವಾಣದಲ್ಲಿ ಏಪ್ರಿಲ್ 1 ರಿಂದ 5ರವರೆಗೆ ಏಳೂರು ಕರಿಯಮ್ಮ ದೇವಿ ಜಾತ್ರೆ

ಮಲೇಬೆನ್ನೂರು, ಮಾ. 29- ಹಾಲಿವಾಣ ಗ್ರಾಮದ ಗ್ರಾಮದೇವತೆ ಶ್ರೀ ಏಳೂರು ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವವು ಏಪ್ರಿಲ್ 1 ರಿಂದ 5ರವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷರೂ ಆದ ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ ತಿಳಿಸಿದರು.

ಶುಕ್ರವಾರ ಪಟ್ಟಣದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 14 ವರ್ಷಗಳ ನಂತರ ಅಂದರೆ 15ನೇ ವರ್ಷದಲ್ಲಿ ಗ್ರಾಮ ದೇವತೆ ಹಬ್ಬವನ್ನು ಏಳು ಹಳ್ಳಿಗಳ ಜನರು ಸೇರಿ ಆಚರಿಸುತ್ತಿದ್ದೇವೆ.

ಹಾಲಿವಾಣ, ಕೊಪ್ಪ, ದಿಬ್ಬದಹಳ್ಳಿ, ಯರೇಹಳ್ಳಿ, ಚಿಕ್ಕ ಹಾಲಿವಾಣ, ತಿಮ್ಲಾಪುರ ಮತ್ತು ಚಿಕ್ಕ ತಮ್ಮನಹಳ್ಳಿ, ಬೆಚರ್ ಗ್ರಾಮಗಳಿಗೆ ಒಳಪಟ್ಟಿರುವ ಗ್ರಾಮ ದೇವತೆ ಶ್ರೀ ಏಳೂರು ಕರಿಯಮ್ಮ ದೇವಿಗೆ ಏಪ್ರಿಲ್ 1ರ ಸೋಮವಾರ ಬೆಳಿಗ್ಗೆ 9.05ಕ್ಕೆ ಕಂಕಣಧಾರಣೆಯೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುವುದು. ಅಂದು ಬೆಳಿಗ್ಗೆ 9.30ಕ್ಕೆ ಶ್ರೀ ಕರಿಯಮ್ಮ ದೇವಿಗೆ ಅಭಿಷೇಕ ಮತ್ತು ಪುಷ್ಪಾಲಂಕಾರದ ನಂತರ ಮಹಾಪ್ರಸಾದ ವಿನಿಯೋಗ ಇರುತ್ತದೆ.

ಬೆಂಗಳೂರಿನಲ್ಲಿ ನೆಲೆಸಿರುವ ಹಾಲಿ ವಾಣದ ಶ್ರೀಮತಿ ಭಾರತಮ್ಮ ಹೆಚ್.ಪಿ. ಬಸವ ರಾಜಪ್ಪ ಅವರು ಸುಮಾರು  1 ಲಕ್ಷ ರೂ. ವೆಚ್ಚದಲ್ಲಿ ಅಮ್ಮನವರ ದೇವಸ್ಥಾನಕ್ಕೆ ಪುಷ್ಪಾಲಂ ಕಾರ ಮಾಡಿಸಲಿದ್ದಾರೆ. ಸಂಜೆ 6.30 ರಿಂದ 8 ಗಂಟೆಯವರೆಗೆ ಶ್ರೀ ದೇವಿಯ ಸ್ಮೃತಿ ಮತ್ತು ಮಾರುತಿ ಭಜನಾ ಸಂಘದಿಂದ ಭಜನೆ, ರಾತ್ರಿ 8.30 ರಿಂದ ಹೊನ್ನಾಳಿಯ ಶ್ರೀ ಸಂತೃಪ್ತಿ ಅಂಧರ ಶಾಲೆ ಮಕ್ಕಳಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಏಪ್ರಿಲ್ 2ರ ಮಂಗಳವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಗ್ರಾಮದ ದೇವರು ಗಳಾದ ಶ್ರೀ ಕರಿಯಮ್ಮ, ಶ್ರೀ ಬೀರಲಿಂಗೇಶ್ವರ, ಶ್ರೀ ಹಾಲಸ್ವಾಮಿ, ಶ್ರೀ ಯಲ್ಲಮ್ಮದೇವಿ, ಶ್ರೀ ಗಲ್ಲೆಕಟ್ಟೆ ದುರ್ಗಮ್ಮ ದೇವಿ, ಶ್ರೀ ಪರಶುರಾಮ ಸೇರಿದಂತೆ ಗೂಡುಕಟ್ಟಿಗೆ ಸೇರಿದ ಎಲ್ಲಾ ಏಳು ಗ್ರಾಮಗಳ ದೇವರುಗಳ ಮೆರವಣಿಗೆಯು ಗ್ರಾಮದ ರಾಜಬೀದಿಗಳಲ್ಲಿ ಡೊಳ್ಳಿನ ತಂಡಗಳ ಕುಣಿತದೊಂದಿಗೆ ಆಗಮಿಸಿ, ಕರಿಯಮ್ಮ ದೇವಸ್ಥಾನ ತಲುಪುವುದು.

ಮುಖಂಡ ನಂದಿಗಾವಿ ಶ್ರೀನಿವಾಸ್ ಮತ್ತು ಮಹಾರುದ್ರ ರೈಸ್‌ಮಿಲ್, ಜಯಪ್ರಕಾಶ ರೈಸ್‌ಮಿಲ್, ಚನ್ನೇಶ್ವರ ರೈಸ್‌ಮಿಲ್ ಹಾಗೂ ವೀರಭದ್ರೇಶ್ವರ ರೈಸ್‌ಮಿಲ್ ಮಾಲೀಕರು ಕಲಾ ತಂಡಗಳ ಪ್ರಾಯೋಜಕರಾಗಿದ್ದಾರೆ.

ಸಂಜೆ 6 ಗಂಟೆಯಿಂದ ಗ್ರಾಮದೇವತೆ ಶ್ರೀ ಏಳೂರು ಕರಿಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ಐರಣಿ ಮಠದ ಆನೆಯ ಅಂಬಾರಿಯ ಮೇಲೆ ಇಟ್ಟು ಉಡುಪಿಯ ರುದ್ರತಾಂಡವ ಚಂಡೆವಾದ್ಯ ಹಾಗೂ ಸಿಡಿಮದ್ದು  ಸಿಡಿತದೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಬುಧವಾರ ಬೆಳಗಿನ ಜಾವದವರೆಗೂ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುವುದು.

ಏ. 3ರ ಬುಧವಾರ ಬೆಳಗಿನ ಜಾವ 4.30ಕ್ಕೆ ಏಳೂರು ಘಟೆ ಬಂದ ನಂತರ ದೇವಸ್ಥಾನದ ಬಳಿ ಓಕುಳಿ ತುಂಬಿದ ಹಿಟ್ಟಿನ ಕೋಣಗಳ ಬಲಿ ನೀಡಲಾಗುವುದು. ಬೆಳಿಗ್ಗೆ 6 ಗಂಟೆಗೆ ಚರಗ ಹಾಕಲಾಗುವುದು. 8 ಗಂಟೆ ಯಿಂದ ಹರಕೆ ಹೊತ್ತ ಭಕ್ತರಿಂದ ಉರುಳು ಸೇವೆ, ಬೇವಿ ಉಡುಗೆ, ಬಾಯಿಬೀಗ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ. 

ಏ. 4ರ ಗುರುವಾರ ಬೆಳಿಗ್ಗೆ 8 ಗಂಟೆಗೆ ದೇವಿಗೆ ವಿಶೇಷ ಪೂಜೆ ಮತ್ತು ಸಂಜೆ 4 ರಿಂದ ಸಿಡಿ ಉತ್ಸವ, ರಾತ್ರಿ 8 ಗಂಟೆಗೆ ಭದ್ರಾವತಿಯ ಚಂದನ ಮ್ಯೂಸಿಕಲ್ ನೈಟ್ಸ್ ಆರ್ಕೆಸ್ಟ್ರಾ ವತಿಯಿಂದ ಮತ್ತು ಹಾಲಿವಾಣ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ರಸಮಂಜರಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಏ. 5ರ ಶುಕ್ರವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ಸಂಜೆ 4 ರಿಂದ ಬೆಲ್ಲದ ಬಂಡಿ ಉತ್ಸವ ಮತ್ತು ಓಕುಳಿ, ಸಂಜೆ 6 ಗಂಟೆಗೆ ಮಹಾಮಂಗಳಾರತಿ ಹಾಗೂ ಕಂಕಣ ವಿಸರ್ಜನೆಯೊಂದಿಗೆ ಜಾತ್ರೆಗೆ ತೆರೆ ಎಳೆಯಲಾಗುವುದು ಎಂದು ಎಸ್.ಜಿ. ಪರಮೇಶ್ವರಪ್ಪ ಮಾಹಿತಿ ನೀಡಿದರು.

ಗ್ರಾಮದ ಮುಖಂಡರಾದ ಕೆ.ಪಿ. ಕುಮಾರಸ್ವಾಮಿ, ಕೆ.ಎಂ. ಸಿದ್ದಯ್ಯ, ಡಿ.ಡಿ. ಚಿಕ್ಕಪ್ಪ, ಕೆ. ರೇವಣಸಿದ್ದಪ್ಪ, ಹಾಲಪ್ಪರ ಕರಿಬಸಪ್ಪ, ಕೊಕ್ಕನೂರು ಅಂಜಿನಪ್ಪ, ಜಿ.ಆರ್. ಬಸವನಗೌಡ, ಜಾತ್ರಾ ಸಮಿತಿ ಖಜಾಂಚಿ ಜಿ.ಹೆಚ್. ಬಸವರಾಜ್, ಕೋರಿ ನಾಗರಾಜ್, ಟಿ. ಲೋಕೇಶ್, ಎ.ಡಿ. ಹನುಮಂತಪ್ಪ, ಸಿದ್ದಪ್ಪ, ವಿಜಯಕುಮಾರ್, ಬಿ. ಮಂಜಪ್ಪ, ಎ.ಡಿ. ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!