ಮಲೇಬೆನ್ನೂರು, ಮಾ.10- ಪಟ್ಟಣದ ಹೊರವಲಯದಲ್ಲಿರುವ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಿವಲಿಂಗಕ್ಕೆ ಭಕ್ತರಿಂದ ಸಾಮೂಹಿಕ ಕ್ಷೀರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ಹಾಗೂ ವೀರಭದ್ರೇಶ್ವರ ಗುರುಕುಲ ಮಾತೆಯರಿಂದ `ರುದ್ರ ಪಾರಾಯಣ’ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು.
ವೇದಮೂರ್ತಿ ಬೆನಕಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಪೂಜೆಗಳು ನಡೆದವು. ರಾತ್ರಿ 9 ಗಂಟೆಯಿಂದ ತಡರಾತ್ರಿವರೆಗೂ ಉಡುಪಿಯ ಕಲಾಸಿಂಧು ಸುಗಮ ಸಂಗೀತ ತಂಡದ ಗಾಯಕಿ ಶ್ರೀಮತಿ ಕಲಾವತಿ ದಯಾನಂದ ಮತ್ತು ಗಾಯಕಿ ವಿನಯ ಹಾಗೂ ಗಾಯಕ ಬೆಂಗಳೂರಿನ ಹೊಂಬೆಗೌಡ್ರು ನಡೆಸಿಕೊಟ್ಟ ಸಂಗೀತ ಭಕ್ತಿಗಾಯನ ಕಾರ್ಯಕ್ರಮ ಮನಸೂರೆಗೊಂಡಿತು.
ಗಾಯಕಿ ಕಲಾವತಿ ಅವರ ಭಕ್ತಿ ಹಾಗೂ ಜಾನಪದ ಹಾಡುಗಳಿಗೆ ಜನರು ಮನಸೋತು ಒನ್ಸ್ಮೋರ್ ಎನ್ನುತ್ತಿದ್ದರು. ಉಡುಪಿಯ ವಿಜೇತ ಶೆಟ್ಟಿ ಅವರ ನಿರೂಪಿಸಿದರು.
ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟಿನ ಬಿ.ಪಂಚಪ್ಪ, ಬಿ.ಚಿದಾನಂದಪ್ಪ, ಬಿ.ವಿ.ರುದ್ರೇಶ್, ಬಿ.ಮಹಾರುದ್ರಪ್ಪ, ಬಿ.ನಾಗೇಶ್, ಬಿ.ಮಹಾರುದ್ರಪ್ಪ, ಬಿ.ನಾಗೇಶ್, ಬಿ.ಉಮಾಶಂಕರ್, ಬಿ.ಮಲ್ಲಿಕಾರ್ಜುನ್, ಎಸ್.ಎನ್.ಮಲ್ಲಿ ಕಾರ್ಜುನ್, ಬಿ.ಎನ್.ವೀರೇಶ್, ಬಿ.ಸಿ.ಸತೀಶ್, ಬಿ.ಎಂ.ಹರ್ಷ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದು, ಶಿವರಾತ್ರಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ವೀರಭದ್ರೇಶ್ವರ, ಭದ್ರಕಾಳಿ, ವಿನಾಯಕ, ನಾಗ ಪರಿವಾರ ಕಾಲಭೈರವನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.