ಜಗಳೂರು, ಸೆ. 10- ದಶಕಗಳಿಂದ ಅಭಿವೃದ್ಧಿ ಇಲ್ಲದೇ ವಂಚಿತರಾಗಿರುವ ತಾಲ್ಲೂಕಿನ ಭೋವಿ ಹಟ್ಟಿಗಳಿಗೆ ಸಂಪರ್ಕ ರಸ್ತೆ, ಸಾರಿಗೆ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಡಿ. ಶ್ರೀನಿವಾಸ್ ಒತ್ತಾಯಿಸಿದರು.
ಪಟ್ಟಣದ ಭೋವಿ ಹಾಸ್ಟೆಲ್ನಲ್ಲಿ ನಡೆದ ತಾಲ್ಲೂಕು ಮಟ್ಟದ ಭೋವಿ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಭೋವಿ ಸಮಾಜದ ಬಹುತೇಕರು ಭೂ ರಹಿತರಾಗಿದ್ದು, ಜೀವನ ನಿರ್ವಹಣೆಗಾಗಿ ದೂರದ ಕಾಫಿ ಸೀಮೆ ಅಥವಾ ದೊಡ್ಡ ನಗರಗಳಿಗೆ ಹಲವು ದಶಕಗಳಿಂದ ಸಾಮೂಹಿಕವಾಗಿ ಗುಳೇ ಹೋಗುವುದು ಸಾಮಾನ್ಯವಾಗಿದೆ. ಗುಳೇ ಪದ್ಧತಿಯಿಂದ ಭೋವಿ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಗುಳೇ ನಿಯಂತ್ರಿಸುವ ನಿಟ್ಟಿನಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು. ಭೋವಿ ಹಟ್ಟಿಗಳಿಗೆ ಎಲ್ಲಾ ರೀತಿಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಬಿ.ಆರ್. ಅಂಜಿನಪ್ಪ ಮಾತನಾಡಿ, ಭೋವಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಸಮಾಜ ಸಂಘಟನೆಯಾಗಬೇಕಿದ್ದು, ಹೊಸದಾಗಿ ನೇಮಕವಾಗಿರುವ ಪದಾಧಿಕಾರಿಗಳು ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಭೋವಿ ಸಮಾಜದ ಮುಖಂಡರಾದ ಎಂ.ಆರ್. ಪುಟ್ಟಣ್ಣ, ಎ. ವೆಂಕಟೇಶ್, ಎಸ್.ವಿ. ಈರಪ್ಪ, ತುಪ್ಪದಹಳ್ಳಿ ದಾಸಪ್ಪ, ರಾಮಾಂಜನೇಯ, ಎ. ರಂಗನಾಥ, ಎಂ.ವಿ. ಶ್ರೀನಿವಾಸ್, ಬಿ. ತಿರುಮಲೇಶ್ ಇತರರು ಇದ್ದರು.
ಜಗಳೂರು ತಾಲ್ಲೂಕು ಭೋವಿ ಸಮಾಜಕ್ಕೆ ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಭೋವಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಅರ್ಜುನ್ ಪಲ್ಲಾಗಟ್ಟೆ, ಕಾರ್ಯದ ರ್ಶಿಯಾಗಿ ಎಂ.ವಿ. ಶ್ರೀನಿವಾಸ್, ಮುಸ್ಟೂರು ವಿರೂಪಾಕ್ಷಿ ಸಹ ಕಾರ್ಯದರ್ಶಿ, ಗೋವಿಂದಪ್ಪ ಉಪಾಧ್ಯಕ್ಷ, ಖಜಾಂಚಿಯಾಗಿ ರಂಗನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬೆಂಚಿಕಟ್ಟೆ ಗಂಗಾಧರ, ತಿಮ್ಮಾರೆಡ್ಡಿ, ರಾಜಪ್ಪ, ಚಿಕ್ಕಬನ್ನಿಹಟ್ಟಿ ನಾಗರಾಜ, ಮರಿಕಟ್ಟೆ ಪರಶುರಾಮ್, ವೀರೇಶ್, ಯರ್ಲಕಟ್ಟೆ ಸಂದೀಪ, ವೆಂಕಟೇಶ್, ಸಿ. ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.