ಮಲೇಬೆನ್ನೂರು, ಏ. 17- ಹಾಲಿವಾಣ ಗ್ರಾಮದಲ್ಲಿ ಶ್ರೀರಾಮ ನವಮಿ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿಯ ಉಚ್ಛಾಯವು ಗ್ರಾಮಸ್ಥರ ಸಮ್ಮುಖದಲ್ಲಿ ಬುಧವಾರ ಅದ್ಧೂರಿಯಾಗಿ ಜರುಗಿತು. ಮಹಾಮಂಗಳಾರತಿ ಹಾಗೂ ಜಯಘೊಷಗಳೊಂದಿಗೆ ಉಚ್ಛಾಯವು ರಥಬೀದಿಯಲ್ಲಿ ಸಾಗಿ ಬನ್ನಿಮಂಟಪ ತಲುಪಿ ಮಂಗಳಾರತಿ ಮಾಡಿಸಿಕೊಂಡು ನಂತರ ಸ್ವಸ್ಥಾನಕ್ಕೆ ಬಂದು ತಲುಪಿತು.
ಬಾಳೆಹಣ್ಣು, ಮಂಡಕ್ಕಿ ಪಳಾರ ಹಾಗೂ ಮೆಣಸಿನ ಕಾಳು ಎಸೆದು ರಾಮ್ ರಾಮ್ ಗೋವಿಂದಾ ಗೋವಿಂದ ಎನ್ನುತ್ತಾ ಭಕ್ತಿಯಿಂದ ಭಕ್ತರು ಉಚ್ಛಾಯ ರಥವನ್ನು ಗ್ರಾಮದ ರಾಜ ಬೀದಿಯಲ್ಲಿ ಎಳೆದರು.
ಇದಕ್ಕೂ ಮುನ್ನ ಶ್ರೀ ಆಂಜನೇಯ ಸ್ವಾಮಿಯ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ನಡೆದು 37 ಸಾವಿರ ರೂಪಾಯಿಗಳಿಗೆ ಹರಾಜು ಆಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಅಲ್ಲದೆ ಬೆಲ್ಲದ ಪಾನಕ, ಕೊಸಂಬರಿ ವಿತರಿಸಲಾಯಿತು. ಸಂಜೆ ದೇವರು ಬೇಟೆಯಾಡುವ ಕಾರ್ಯ ಮುಗಿದ ನಂತರ ಓಕಳಿ, ಕಂಕಣ ವಿಸರ್ಜನೆಯೊಂದಿಗೆ ರಾಮನವಮಿ ಕಾರ್ಯಕ್ರಮಗಳು ಸಂಪನ್ನಗೊಂಡವು.