ದಾವಣಗೆರೆ, ಮಾ. 26- ಬಾಂಬೆಯಿಂದ ದಾವಣಗೆರೆಗೆ ಪೂರೈಕೆ ಮಾಡಿದ 400 ವಾಟರ್ ಕೂಲರ್ಗಳ ಇ-ವೇ ಬಿಲ್ ಸೃಜನೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಅವರು ಮಂಗಳವಾರ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮುಂಭಾಗದಲ್ಲಿ ವಾಹನದೊಂದಿಗೆ ವಸ್ತುಗಳ ಪರಿಶೀಲನೆ ನಡೆಸಿದರು.
ವಾಟರ್ ಕೂಲರ್ ಸಾಗಣೆ ಮಾಡಿದ ವಾಹನಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಜಾಗೃತ ದಳದ ಅಧಿಕಾರಿಗಳು ಮಾ.22 ರಂದು ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಸ್ತುವೇಳೆ ವಾಹನ ವಶಕ್ಕೆ ಪಡೆದು ಪರಿಶೀಲನೆ
ನಡೆಸಿದಾಗ 3,11,520 ರೂ. ಮೌಲ್ಯದ 400 ವಾಟರ್ ಕೂಲರ್ಗಳನ್ನು ಎರಡು ವಾಹನಗಳಲ್ಲಿ ಬಾಂಬೆಯಿಂದ ದಾವಣಗೆರೆ ಹರಿ
ಓಂ ಎಂಟರ್ಪ್ರೈಸಸ್ಗೆ ಪೂರೈಕೆಯಾಗಿದ್ದು, ದಾವಣಗೆರೆಯಲ್ಲಿ ವಾಹನ ತಪಾಸಣೆ ಮಾಡುವುದಕ್ಕಿಂತ 3 ಗಂಟೆ ಮೊದಲು ಮಾತ್ರ ಇ–ವೇ ಬಿಲ್ ಸೃಜನೆಯಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇದು ಅನುಮಾನಾಸ್ಪದವಾಗಿದೆ. ಬಾಂಬೆಯಿಂದ ದಾವಣಗೆರೆಗೆ ಆಗಮಿಸಲು ಕನಿಷ್ಠ 18 ಗಂಟೆಗಳ ಕಾಲ ಪ್ರಯಾಣದ ಅವಧಿಯಾಗಲಿದೆ. ವಾಹನ ವಶಕ್ಕೆ ಪಡೆಯುವುದಕ್ಕಿಂತ ಮೂರು ಗಂಟೆ ಮೊದಲು ಆನ್ಲೈನ್ ಬಿಲ್ ಸೃಜನೆ ಮಾಡಿರುವುದು ಕಂಡು ಬಂದಿದ್ದು ಇದು ಜಿ.ಎಸ್.ಟಿ. ನಿಯಮದ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.
ಮಾ.22 ರಂದು ಇವುಗಳನ್ನು ವಶಕ್ಕೆ ಪಡೆದು ಎಫ್.ಎಸ್.ಟಿ.ಗೆ ತನಿಖೆಗಾಗಿ ವಹಿಸಲಾಗಿತ್ತು. ಆದರೆ ಸ್ಪಷ್ಟನೆ ನೀಡದ ಕಾರಣ ಇದು ಚುನಾವಣಾ ಸಂದ ರ್ಭದಲ್ಲಿ ವಿತರಣೆಗೆ ಬಳಸಲು ಉದ್ದೇಶಿಸಿರಬೇಕೆಂದು ಅನುಮಾನಿಸಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿಯು ಸಂಸ್ಥೆಯ ಮೇಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಹಾಯಕ ಚುನಾವಣಾಧಿಕಾರಿ ರೇಣುಕಾ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಮಂಜುನಾಥ್, ವಾಣಿಜ್ಯ ತೆರಿಗೆ ಇಲಾಖೆ ತನಿಖಾಧಿಕಾರಿ ನಟರಾಜ್ ತನಿಖೆ ವೇಳೆ ಉಪಸ್ಥಿತರಿದ್ದರು.